ಗೋರಖ್ಪುರ, ಜನವರಿ 24: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್ಪುರದ ಯಾವ ಮಠದಲ್ಲಿ ಹೆಚ್ಚು ಸಮಯ ಇರುತ್ತಾರೆ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಗೋರಖ್ಪುರದ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿನ ಮಠದ ಬಗ್ಗೆ ಸರಣಿ ಟ್ವೀಟ್ ಮೂಲಕ ಅವರು ಪ್ರಶ್ನೆ ಮಾಡಿದ್ದಾರೆ.
“ಗೋರಖ್ಪುರದಲ್ಲಿ ಯೋಗಿ ಆದಿತ್ಯನಾಥ್ ಅವರು ಹೆಚ್ಚು ಸಮಯ ವಾಸಿಸುವ ಮಠವು ಯಾವುದೇ ದೊಡ್ಡ ಬಂಗಲೆಗಿಂತ ಕಡಿಮೆಯಿಲ್ಲ ಎಂದು ಪಶ್ಚಿಮ ಯುಪಿಯ ಜನರಿಗೆ ಬಹುಶಃ ತಿಳಿದಿಲ್ಲ, ಅವರು ಈ ಬಗ್ಗೆ ಹೇಳಿದ್ದರೆ ಚೆನ್ನಾಗಿರುತ್ತಿತ್ತು,” ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಈ ಹಿಂದೆ ತಾವು ಅಧಿಕಾರದಲ್ಲಿದ್ದ ವೇಳೆ ಮಾಡಿರುವ ಕಾರ್ಯಗಳ ಬಗ್ಗೆ ಯೋಗಿ ಪ್ರಸ್ತಾಪಿಸಬೇಕಿತ್ತು ಎಂದು ಹೇಳಿದರು.
ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಮ್ಮ ಸರ್ಕಾರದ ಕಾರ್ಯಗಳನ್ನು ಹೊಗಳಿಕೆೊಳ್ಳುವುದರ ಜೊತೆ ಬಿಎಸ್ಪಿ ಸರ್ಕಾರ ಮಾಡಿರುವ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಉಲ್ಲೇಖಿಸಿದ್ದರೆ ಉತ್ತಮವಾಗಿರುತ್ತದೆ ಎಂದು ಮಾಯಾವತಿ ಹೇಳಿದ್ದಾರೆ. ಈ ಹಿಂದೆ ತಮ್ಮ ಸರ್ಕಾರ ಬಡವರಿಗಾಗಿ ನೀಡಿದ ಮನೆಗಳು, ಭೂರಹಿತರಿಗೆ ನೀಡಿದ ಭೂಮಿ ಹೀಗೆ ಸರ್ಕಾರದ ಸಾಧನೆಗೆ ಸಂಬಂಧಿಸಿದ ದಾಖಲೆಗಳು ಅತ್ಯುತ್ತಮವಾಗಿದೆ,” ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಒಂದೂವರೆ ಲಕ್ಷ ಜನರಿಗೆ ಮನೆ:
ರಾಜ್ಯದಲ್ಲಿ ಮಾನ್ಯವರ ಶ್ರೀ ಕಾನ್ಶಿರಾಮ್ ಜಿ ಶಹರಿ ಗರೀಬ್ ಆವಾಸ್ ಯೋಜನೆಯಡಿ ಈ ಹಿಂದೆ ಬಹುಜನ ಸಮಾಜವಾದಿ ಪಕ್ಷದ ಸರ್ಕಾರವು ಕೇವಲ ಎರಡು ಹಂತಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಮನೆಗಳನ್ನು ನೀಡಿದೆ. ಸರ್ವಜನ ಹಿತಾಯ ಗರೀಬ್ ವಸತಿ ಯೋಜನೆಯಡಿ ಹಲವು ಕುಟುಂಬಗಳು ಪ್ರಯೋಜನ ಪಡೆದಿವೆ. ಭೂಮಿ ಇಲ್ಲದ ಲಕ್ಷಾಂತರ ಕುಟುಂಬಗಳಿಗೆ ಭೂಮಿಯನ್ನು ನೀಡಲಾಗಿದೆ,” ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಮಾಯಾವತಿ ಬಗ್ಗೆ ಪ್ರಿಯಾಂಕಾ ಗಾಂಧಿ ಆಶ್ಚರ್ಯ:
ಉತ್ತರ ಪ್ರದೇಶದಲ್ಲಿ ಮಾಯವತಿಯವರ ಪಕ್ಷ ಕಳೆದ ಆರು-ಏಳು ತಿಂಗಳಿನಿಂದ ಅಷ್ಟರ ಮಟ್ಟಿಗೆ ಸಕ್ರಿಯವಾಗಿಲ್ಲ. ವಿಧಾನಸಭೆ ಚುನಾವಣೆ ಘೋಷಣೆ ನಂತರದಲ್ಲಿ ಮತ್ತೆ ಸಕ್ರಿಯರಾಗಬಹುದು ಎಂದು ನಾವು ಭಾವಿಸಿದ್ದೇವು, ಆದರೆ ಈಗ ನನಗೂ ಆಶ್ಚರ್ಯವಾಗುತ್ತಿದೆ. ಏಕೆಂದರೆ ರಾಜ್ಯದಲ್ಲಿ ಚುನಾವಣೆ ಶುರುವಾಗಿದ್ದು, ನಾವು ಚುನಾವಣೆಯ ಮಧ್ಯದಲ್ಲಿದ್ದೇವೆ. ಈ ಹಂತದಲ್ಲಿಯೂ ಬಿಎಸ್ಪಿ ಸಕ್ರಿಯವಾಗದಿರುವುದು ನಮಗೂ ತುಂಬಾ ಆಶ್ಚರ್ಯವಾಗುವಂತೆ ಮಾಡಿದೆ. ನೀವು ಹೇಳಿದಂತೆ ಮಾಯಾವತಿ ತುಂಬಾ ಶಾಂತವಾಗಿದ್ದಾರೆ, ನನಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ,” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಹೇಳಿಕೆಗೆ ಮಾಯಾವತಿ ಟ್ವೀಟ್ ಏಟು:
ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಪ್ರಚಾರದ ವೈಖರಿ ಮೊದಲಿನಂತಿಲ್ಲ ಎಂಬ ಪ್ರಿಯಾಂಕಾ ಗಾಂಧಿ ಹೇಳಿಕೆ ಬೆನ್ನಲ್ಲೇ ತಿರುಗೇಟು ನೀಡಿದ್ದಾರೆ. ರಾಜ್ಯದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ತೀರಾ ಹದಗೆಟ್ಟಿದೆ. ಕೆಲ ಗಂಟೆಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ನಿಲುವು ಬದಲಾಗಿರುವುದೇ ಅದಕ್ಕೆ ಸಾಕ್ಷಿ ಎನಿಸುತ್ತದೆ. ಇಂಥ ಪರಿಸ್ಥಿತಿಯಲ್ಲಿ ಜನರು ಮತ ಹಾಕಿ ತಮ್ಮ ಮತವನ್ನು ಹಾಳು ಮಾಡಿಕೊಳ್ಳದಿರುವುದು ಒಳ್ಳೆಯದು. ಏಕಪಕ್ಷೀಯವಾಗಿ ಬಿಎಸ್ಪಿಗೆ ಮತ ನೀಡಿ ಎಂದು ಮಾಯಾವತಿ ಹಿಂದಿ ಟ್ವೀಟ್ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ನಂತಹ ರಾಷ್ಟ್ರೀಯ ಪಕ್ಷವೇ ಜನರ ದೃಷ್ಟಿಯಲ್ಲಿ ಮತ ಕಡಿತಗೊಳಿಸುವ ಸಾಮಾನ್ಯ ಸಣ್ಣ ಪಕ್ಷಗಳಂತೆ ಆಗಿವೆ ಎಂದು ಮಾಯಾವತಿ ಎರಡನೇ ಟ್ವೀಟ್ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada