ಫೆಬ್ರವರಿ 16 ಹತ್ತಿರ ಬರುತ್ತಿದ್ದಂತೆ ದರ್ಶನ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿರುತ್ತೆ. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ದಾಸನ ಅಭಿಮಾನಿಗಳು ಇದೊಂದು ದಿನದ ಸಂಭ್ರಮಕ್ಕಾಗಿ ಕಾಯುತ್ತಿದ್ದಾರೆ. ದರ್ಶನ್ ಹುಟ್ಟುಹಬ್ಬಕ್ಕೂ ಮುನ್ನ ಅಭಿಮಾನಿಗಳು ಕಾಮನ್ ಡಿಪಿಯಿಂದ ಹಿಡಿದು, ಬ್ಯಾನರ್, ಪೋಸ್ಟರ್, ಕೇಕ್ ಮಾಡಿಸುವುದರಲ್ಲಿ ಬ್ಯುಸಿಯಾಗಿಬಿಡುತ್ತಾರೆ.ತಮ್ಮದೇ ಹುಟ್ಟುಹಬ್ಬ ಅನ್ನುವಷ್ಟು ಸಡಗರ ಅವರಲ್ಲಿ ಮನೆ ಮಾಡುತ್ತೆ.ದರ್ಶನ್ ಬರ್ತ್ಡೇ ದಿನ ಅಂತೂ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಮನೆ ಮುಂದೆ ಜಮಾಯಿಸಿಬಿಡುತ್ತಾರೆ. ಕೇಕ್, ಹೂವಿನ ಹಾರ ಹಿಡಿದು ಬೆಳಗಾಗುವವರೆಗೂ ನಿಂತು ಬಿಡುತ್ತಾರೆ. ತಮ್ಮನ್ನು ನೋಡಲೆಂದೇ ಬರುವ ಅಭಿಮಾನಿಗಳಿಗೂ ದರ್ಶನ್ ನಿರಾಸೆ ಮಾಡುವುದಿಲ್ಲ. ಆದರೆ, ಕೊರೊನಾ ದೇಶಕ್ಕೆ ಕಾಲಿಟ್ಟ ದಿನದಿಂದ ದರ್ಶನ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಇದೇ ಫೆಬ್ರವರಿ 16ರಂದು ದರ್ಶನ್ 45ನೇ ಬರ್ತ್ಡೇ ಆಚರಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳಿಗಾಗಿ ವಿಡಿಯೋ ಮೂಲಕ ಸಂದೇಶ ರವಾನೆ ಮಾಡಿದ್ದಾರೆ.ದರ್ಶನ್ ಹುಟ್ಟುಹಬ್ಬದಂದು ದೂರ ದೂರದ ಊರಿಂದ ಅಭಿಮಾನಿಗಳು ಬರುತ್ತಾರೆ. ಆದರೆ, ಕಳೆದ ಮೂರು ನಾಲ್ಕು ವರ್ಷಗಳಿಂದ ದರ್ಶನ್ ಅಭಿಮಾನಿಗಳನ್ನು ಹುಟ್ಟುಹಬ್ಬದಂದು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಾರಿ ಕೂಡ ಬರ್ತ್ಡೇ ಆಚರಿಸಿಕೊಳ್ಳದೆ ಇರಲು ನಿರ್ಧರಿಸಿದ್ದಾರೆ. “ಪ್ರೀತಿಯ ಅಭಿಮಾನಿಗಳಲ್ಲಿ ನಿಮ್ಮ ದಾಸ ದರ್ಶನ್ ತೂಗುದೀಪ ಮಾಡುವ ವಿನಂತಿ. 2021ರ ಕರಾಳ ದಿನಗಳು ಮತ್ತೆ ಮರುಕಳಿಸದಿರಲಿ, ಕೋವಿಡ್ ಇಂದ ಸಂಪೂರ್ಣವಾಗಿ ನಮ್ಮ ಜನತೆ ಚೇತರಿಸಿಕೊಳ್ಳಲಿ ಎಂಬ ಕಾರಣದಿಂದ ನನ್ನ ಹುಟ್ಟುಹಬ್ಬವನ್ನು ಈ ಬಾರಿಯೂ ಸಹ ಸರಳವಾಗಿರಲೆಂದು ನಿರ್ಧರಿಸಿದ್ದೇನೆ. ಈ ಬಾರಿಯೂ ಬೆಂಗಳೂರಿನಲ್ಲಿ ನಾನು ಈ ಸಮಯದಲ್ಲಿರುವುದಿಲ್ಲ. ಬಹಳಷ್ಟು ದೂರದಿಂದ ಮನೆಯ ಹತ್ತಿರ ಬಂದು ನಿರಾಶರಾಗದಿರಿ. ನಿಮ್ಮೆಲ್ಲರನ್ನು ನೋಡಿ ಮುಖಾಮುಖಿಯಾಗುವ ಹಂಬಲವೂ ನನಗೂ ಸಾಕಷ್ಟಿದೆ. ಇವೆಲ್ಲದಕ್ಕೂ ಸದ್ಯದ ಪರಿಸ್ಥಿತಿ ಸೂಕ್ತವಲ್ಲವೆಂಬುದು ನನ್ನ ಭಾವನೆ. ಆದಷ್ಟು ಬೇಗ ನಿಮ್ಮೆಲ್ಲರನ್ನು ಭೇಟಿ ಮಾಡುವೆ ಎಂದು ನಂಬಿದ್ದೇನೆ. ನನ್ನ ಬಗ್ಗೆ ಇಷ್ಟೆಲ್ಲಾ ಪ್ರೀತಿ ಅಭಿಮಾನ ಇಟ್ಟಿರುವ ನೀವು ನನ್ನ ಈ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ.” ಎಂದು ಫೇಸ್ ಬುಕ್ನಲ್ಲಿ ದರ್ಶನ್ ಬರೆದುಕೊಂಡಿದ್ದಾರೆ.”ಅಪ್ಪು ಅಗಲಿಕೆ, ಕೊರೊನಾವೇ ಕಾರಣದರ್ಶನ್ ತನ್ನ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಕೂಡ ಶೇರ್ ಮಾಡಿದ್ದು, ಅಪ್ಪು ನಿಧನದಿಂದ ಮನಸ್ಸು ಭಾರವಾಗಿದ್ದು, ಹುಟ್ಟುಹಬ್ಬ ಆಚರಿಸಿಕೊಳ್ಳದೆ ಇರಲು ನಿರ್ಧರಿಸಿದ್ದಾರೆ. ” ಇದೇ 16ನೇ ತಾರೀಕು ನನ್ನ ಹುಟ್ಟಿದ ಹಬ್ಬ ಅನ್ನುವುದಕ್ಕಿಂತ ನಿಮ್ಮ ಹುಟ್ಟಿದ ಹಬ್ಬದ ಹಾಗೆ ಆಚರಿಸುತ್ತೀರ. ಹುಟ್ಟಿದ ಹಬ್ಬ ಮಾಡಬೇಕು ಅಂತ ಎಲ್ಲರಿಗೂ ಆಸೆಯಿದೆ. ಈ ಸಲ ಪೊಲೀಸ್ ಪರ್ಮಿಷನ್ ಒಂದು ಕಷ್ಟ. ಹೆಂಗಾದರೂ ತಗೋಬಹುದು ಇಲ್ಲಾ ಅಂತಲ್ಲ. ಅದಕ್ಕಿಂತ ಮುಖ್ಯವಾಗಿ ಹೋದ ವರ್ಷ ಆದ ಒಂದು ಘಟನೆ. ಅದು ಪುನೀತ್ ರಾಜ್ಕುಮಾರ್ ಅವರದ್ದು. ಅದಾದ್ಮೇಲೆ ನಾನು ಹುಟ್ಟಿದ ಹಬ್ಬ ಆಚರಿಸಿಕೊಳ್ಳುವುದು ಅದು ನನ್ನ ಮನಸ್ಸಿಗೆ ಸರಿಯಿಲ್ಲ. ಈ ಸಲ ಬೇಡ ಅಂತ ಅನಿಸುತ್ತಿದೆ.” ಎಂದು ದರ್ಶನ್ ವಿಡಿಯೋದಲ್ಲಿ ಹೇಳಿದ್ದಾರೆ.ಮುಂದಿನ ವರ್ಷ ಸಿಗುವ ಭರವಸೆಕಳೆದ ಮೂರು ವರ್ಷಗಳಿಂದ ದರ್ಶನ್ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಮುಂದಿನ ವರ್ಷ ಅಭಿಮಾನಿಗಳನ್ನು ಖಂಡಿತಾ ಭೇಟಿಯಾಗುತ್ತೇನೆ ಎಂದು ಭರವಸೆ ನೀಡಿದ್ದಾರೆ. ” ದೂರ ದೂರದಿಂದ ಎಲ್ಲಾ ಬರುತ್ತೀರ. ಖಂಡಿತಾ ಮುಂದಿನ ವರ್ಷ ಎಲ್ಲರಿಗೂ ಸಿಗುತ್ತೇನೆ. ನನಗೆ ಅನಿಸುತ್ತಿಲ್ಲ. ಅದಕ್ಕೆ ಬೇಡ ಬಿಡು ಅಂದುಕೊಂಡಿದ್ದೇನೆ. ಆದ್ದರಿಂದ ಎಲ್ಲಾ ನನ್ನ ಅನ್ನದಾತರು, ಕನ್ನಡ ಚಿತ್ರಪ್ರೇಮಿಗಳು, ಕನ್ನಡ ಕಲಾವಿದರು ಎಲ್ಲರಿಗೂ ಇಲ್ಲಿಂದಲೇ ಕೈ ಮುಗಿದು ಕೇಳಿಕೊಳ್ಳುತ್ತೇನೆ.” ಎಂದು ದರ್ಶನ್ ಹುಟ್ಟುಹಬ್ಬದ ಬಗ್ಗೆ ಮಾಹಿತಿ ನೀಡಿದ್ದಾರೆ.ದರ್ಶನ್ ಸದ್ಯಕ್ಕೀಗ ‘ಕ್ರಾಂತಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಿಡುವುದು ನೀಡದೆ ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ. ಆದಷ್ಟು ಬೇಗ ಸಿನಿಮಾವನ್ನು ತಮ್ಮ ಸಿನಿಪ್ರಿಯರಿಗೆ ತಲುಪಿಸಬೇಕು ಅಂತ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಬಿಡುವಿಲ್ಲದೆ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ವಿ ಹರಿಕೃಷ್ಣ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ‘ಯಜಮಾನ’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಶೈಲಜಾ ನಾಗ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada