ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಯುಗಾಂತರ’ ಧಾರಾವಾಹಿಯಲ್ಲಿ ದೀಪಾ ಅಗರ್ವಾಲ್ ಪಾತ್ರದ ಮೂಲಕ ಮತ್ತೆ ಕಿರುತೆರೆಗೆ ಮರಳಿದ ಚೆಂದುಳ್ಳಿ ಚೆಲುವೆಯ ಹೆಸರು ದೀಪಾ ಭಾಸ್ಕರ್. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸುಬ್ಬಲಕ್ಷ್ಮಿ ಸಂಸಾರ’ ಧಾರಾವಾಹಿಯಲ್ಲಿ ನಾಯಕಿ, ಹಳ್ಳಿ ಹುಡುಗಿ ಸುಬ್ಬಲಕ್ಷ್ಮಿಯಾಗಿ ವೀಕ್ಷಕರ ಮನ ಸೆಳೆದ ದೀಪಾ ಭಾಸ್ಕರ್ ಮತ್ತೆ ಕಿರುತೆರೆಗೆ ಮರಳಿರುವುದು ವೀಕ್ಷಕರಿಗೆ ಖುಷಿ ನೀಡಿದೆ.
ಬಾಲನಟಿಯಾಗಿ ನಟನಾ ಜಗತ್ತಿಗೆ ಕಾಲಿಟ್ಟ ದೀಪಾ ಭಾಸ್ಕರ್ ಮುಂದೆ ಕಿರುತೆರೆ ಮತ್ತು ಹಿರಿತೆರೆ ಮಾತ್ರವಲ್ಲದೇ ಕಂಠದಾನ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ಬೆಡಗಿ. ‘ಹೋಗ್ಲಿ ಬಿಡಿ ಸರ್’, ‘ಸಿಲ್ಲಿ ಲಲ್ಲಿ’, ‘ಪಾ ಪ ಪಾಂಡು’, ‘ಮಳೆಬಿಲ್ಲು’, ‘ತಕಧಿಮಿತಾ’, ‘ಪ್ರೀತಿ ಇಲ್ಲದ ಮೇಲೆ’, ‘ಕಲ್ಯಾಣ ರೇಖೆ’, ‘ದಿಬ್ಬಣ’, ‘ಪಾರಿಜಾತ’, ‘ನಮ್ಮಮ್ಮ ಶಾರದೆ’, ‘ಅನಾವರಣ’, ‘ಚಕ್ರವಾಕ’, ‘ಮದರಂಗಿ’, ‘ಸಾಕ್ಷಿ’ ಧಾರಾವಾಹಿಗಳಲ್ಲಿ ನಟಿಸಿರುವ ದೀಪಾ ಭಾಸ್ಕರ್ ಮನೋಜ್ಞ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ.
ಅನಂತನಾಗ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯಲ್ಲಿ ನಿಮ್ಮಿ ಆಗಿ ನಟಿಸಿದ್ದ ದೀಪಾ ಭಾಸ್ಕರ್ ಆ ಪಾತ್ರದ ಮೂಲಕ ಕಿರುತೆರೆಯಲ್ಲಿ ಫೇಮಸ್ಸು ಆದರು. ತದ ನಂತರ ‘ಸಾಕ್ಷಿ’ ಧಾರಾವಾಹಿಯಲ್ಲಿ ನಟಿಸಿದ್ದ ದೀಪಾ ನಂತರ ಕಿರುತೆರೆಯಿಂದ ಕೊಂಚ ದೂರವೇ ಇದ್ದರು. ‘ಸುಬ್ಬಲಕ್ಷ್ಮಿ’ ಧಾರಾವಾಹಿಯ ಸುಬ್ಬಲಕ್ಷ್ಮಿ ಪಾತ್ರಕ್ಕೆ ಜೀವ ತುಂಬಿದ್ದ ದೀಪಾ ಭಾಸ್ಕರ್ ಹಳ್ಳಿ ಹುಡುಗಿಯಾಗಿ ವೀಕ್ಷಕರನ್ನು ರಂಜಿಸಿದರು.
‘ಯಾರೇ ನೀ ಅಭಿಮಾನಿ’, ‘ಶ್ರೀರಸ್ತು ಶುಭಮಸ್ತು’, ‘ಮಹೇಂದ್ರ ವರ್ಮ’, ‘ದೀಪಾವಳಿ’ ಚಿತ್ರಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿರುವ ಈಕೆ ಪುಟ್ಟಿ ಚಿತ್ರದ ನಟನೆಗೆ “ಅತ್ಯುತ್ತಮ ಬಾಲ ನಟಿ ಪ್ರಶಸ್ತಿ”ಯನ್ನು ಪಡೆದುಕೊಂಡಿದ್ದಾರೆ. ‘ನಂ 73 ಶಾಂತಿನಿವಾಸ’ ಮತ್ತು ‘ಮೈ ಆಟೋಗ್ರಾಫ್’ ಚಿತ್ರದಲ್ಲಿ ನಾಯಕಿಯಾಗಿಯೂ ಈಕೆ ಗಮನ ಸೆಳೆದಿದ್ದರು.
ಕಥಕ್ ಕಲಾವಿದೆ ಹೌದು
ರಾಜೇಂದ್ರ ಮತ್ತು ನಿರೂಪಮಾ ರಾಜೇಂದ್ರ ಅವರ ಬಳಿ ಬರೋಬ್ಬರಿ ಹತ್ತು ವರುಷಗಳ ಕಾಲ ಶಾಸ್ತ್ರೀಯ ನೃತ್ಯ ಕಥಕ್ ಕಲಿತಿರುವ ದೀಪಾ ಭಾಸ್ಕರ್ ಹತ್ತು ಹಲವು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ ಚೆಲುವೆ. ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿಯೂ ಈಕೆ ಕಥಕ್ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.
ಕಂಠದಾನ ಕಲಾವಿದೆ ಹೌದು
ರಮ್ಯಾ ಅಭಿನಯದ ‘ಎಕ್ಸ್ ಕ್ಯೂಸ್ ಮಿ’, ‘ಕಂಠಿ’, ‘ರಂಗ ಎಸ್ ಎಸ್ ಎಲ್ ಸಿ’ ಸೇರಿದಂತೆ ರಮ್ಯಾ ಅವರ ಹೆಚ್ಚಿನ ಪಾತ್ರಕ್ಕೆ ಧ್ವನಿ ನೀಡಿರುವ ದೀಪಾ ಭಾಸ್ಕರ್ ಮೀರಾ ಜಾಸ್ಮಿನ್, ರಾಗಿಣಿ ದ್ವಿವೇದಿ, ಪೂಜಾ ಗಾಂಧಿ, ದುನಿಯಾ ರಶ್ಮಿ, ಜೆನ್ನಿಫರ್, ರಾಧಿಕಾ ಪಂಡಿತ್, ಪಾರುಲ್ ಯಾದವ್, ಒಗ್ಗರಣೆ ಸ್ನೇಹಾ,ತ್ರಿಷಾ ಹೀಗೆ ನಾನೂರಕ್ಕೂ ಅಧಿಕ ಪಾತ್ರಗಳಿಗೆ ಕಂಠದಾನ ಮಾಡಿದ್ದಾರೆ.
https://play.google.com/store/apps/details?id=com.speed.newskannada