ಪುಣೆ: ‘ಪ್ರಜಾಪ್ರಭುತ್ವ ಬಲಗೊಳ್ಳಲು ಪ್ರಬಲ ವಿರೋಧಪಕ್ಷ ಅಗತ್ಯ. ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ಆ ನಿಟ್ಟಿನಲ್ಲಿ ಪ್ರಬಲವಾಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೇನೆ’ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದರು.₹ 2,344 ಕೋಟಿ ವೆಚ್ಚದ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿ ಭಾನುವಾರ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ಎಂಬುದು ಎರಡು ಚಕ್ರಗಳ ಮೇಲೆ ಸಾಗಲಿದೆ. ಒಂದು ಆಡಳಿತ ಪಕ್ಷ, ಮತ್ತೊಂದು ವಿರೋಧಪಕ್ಷ. ಇದೇ ಕಾರಣದಿಂದ ಕಾಂಗ್ರೆಸ್ ಬಲಗೊಳ್ಳಬೇಕು ಎಂಬುದು ನನ್ನ ಅಪೇಕ್ಷೆ’ ಎಂದರು.ಕಾಂಗ್ರೆಸ್ ದುರ್ಬಲಗೊಂಡಂತೆ ಆ ಸ್ಥಳವನ್ನು ಪ್ರಾದೇಶಿಕ ಪಕ್ಷಗಳು ಆವರಿಸಿಕೊಳ್ಳುತ್ತಿವೆ. ಈ ಬೆಳವಣಿಗೆಯು ಪ್ರಜಾಪ್ರಭುತ್ವದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ ಎಂದು ಅವರು ಪ್ರತಿಪಾದಿಸಿದರು.ಮೋದಿ ಜೊತೆ ಚರ್ಚಿಸಿ- ಕಾಂಗ್ರೆಸ್: ಗಡ್ಕರಿ ಅವರ ಹೇಳಿಕೆಯನ್ನು ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಸ್ವಾಗತಿಸಿದ್ದಾರೆ. ‘ಬಿಜೆಪಿ ವಿರೋಧಪಕ್ಷಗಳನ್ನು ನಾಶಪಡಿಸಲಿದೆ ಎಂದು ಪ್ರತಿಪಾದಿಸುವ ಪ್ರಧಾನಿ ಜೊತೆಗೂ ಚರ್ಚಿಸಿ’ ಎಂದಿದ್ದಾರೆ.’ಬಿಜೆಪಿಯೇತರ ಸರ್ಕಾರ ಅಸ್ತಿತ್ವದಲ್ಲಿರುವ ರಾಜ್ಯಗಳಲ್ಲಿ ಕಿರುಕುಳ ನೀಡಲು ಕೇಂದ್ರದ ಸಂಸ್ಥೆಗಳ ದುರ್ಬಳಕೆ ಆಗುತ್ತಿದೆ. ಎಂಟು ವರ್ಷದಿಂದ ದೇಶದಲ್ಲಿ ಅನಪೇಕ್ಷಿತ ರಾಜಕಾರಣ ನಡೆಯುತ್ತಿದೆ. ಪ್ರಜಾಪ್ರಭುತ್ವ ಸ್ಥಾನದಲ್ಲಿ ಸರ್ವಾಧಿಕಾರ ಸ್ಥಾಪಿತವಾಗುತ್ತಿದೆ. ಸುಪ್ರೀಂ ಕೋರ್ಟ್ ಕೂಡಾ ಅಸಹಾಯಕವಾಗಿದೆ. ವಿರೋಧಪಕ್ಷಗಳನ್ನು ನಾಶಪಡಿಸುವ ಬಿಜೆಪಿಯ ಒಟ್ಟು ಮನಸ್ಥಿತಿ ಕುರಿತಂತೆ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಪ್ರಧಾನಿ ಜೊತೆಗೆ ಚರ್ಚೆ ಮಾಡಿ’ ಎಂದೂ ಗಡ್ಕರಿ ಅವರಿಗೆ ಸಾವಂತ್ ಸಲಹೆ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada