ಫೆಬ್ರವರಿ 16ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಹಳ ಅದ್ಧೂರಿಯಾಗಿ ನಟ ದರ್ಶನ್ ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಅಭಿಮಾನಿಗಳು, ಚಿತ್ರರಂಗದ ತಾರೆಯರು, ರಾಜಕೀಯ ಮುಖಂಡರು ದರ್ಶನ್ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು.
ಇದೆಲ್ಲದರ ನಡುವೆ ನಟ ದರ್ಶನ್ ನಟಿಯರಾದ ಮೇಘಾ ಶೆಟ್ಟಿ, ಪವಿತ್ರಾ ಗೌಡ, ಸೋನಲ್ ಮಂಥೇರೊ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.
‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನು ಸಿರಿಮನೆ ಆಗಿ ಅಭಿಮಾನಿಗಳ ಮನಗೆದ್ದ ಮೇಘಾ ಶೆಟ್ಟಿ, ನಟ ದರ್ಶನ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಮೇಘಾ, ಪವಿತ್ರಾ, ಸೋನಲ್ ಆತ್ಮೀಯ ಸ್ನೇಹಿತರಾಗಿದ್ದು 3 ಜನ ಸೇರಿ ಬಹಳ ಸ್ಪೆಷಲ್ ಆಗಿ ದರ್ಶನ್ ಬರ್ತ್ಡೇ ಸೆಲೆಬ್ರೇಟ್ ಮಾಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸ್ವತಃ ಮೇಘಾ ಶೆಟ್ಟಿ ವಿಡಿಯೋವನ್ನು ಶೇರ್ ಮಾಡಿದ್ದರು. ಈ ಬಗ್ಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೆಂಡಾಮಂಡಲವಾಗಿದ್ದರು. ಅಷ್ಟೇ ಅಲ್ಲ ಬಹಿರಂಗವಾಗಿಯೇ ಮೇಘಾ ಶೆಟ್ಟಿಗೆ ತರಾಟೆ ತೆಗೆದುಕೊಂಡಿದ್ದರು.
ಇನ್ಸ್ಟಾಗ್ರಾಮ್ನಲ್ಲಿ ಮೇಘಾ ಶೆಟ್ಟಿ ವಿರುದ್ಧ ವಿಜಯಲಕ್ಷ್ಮಿ ದರ್ಶನ್ ಆಕ್ರೋಶ ವ್ಯಕ್ತಪಡಿಸಿದ್ದರು. ವಿಜಯಲಕ್ಷ್ಮಿ ದರ್ಶನ್ ಬೆಂಬಲಕ್ಕೆ ಅಭಿಮಾನಿಗಳು ನಿಂತಿದ್ದಾರೆ. ಕಾಮೆಂಟ್ ಮಾಡುವ ಮೂಲಕ ಧೈರ್ಯ ತುಂಬಿದ್ದಾರೆ. ಆದರೆ ಮೇಘಾ ಶೆಟ್ಟಿ ಮಾತ್ರ ಸೈಲೆಂಟ್ ಆಗಿದ್ದಾರೆ.
ಮೇಘಾ ಶೆಟ್ಟಿಗೆ ವಿಜಯಲಕ್ಷ್ಮಿ ತರಾಟೆ
ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೋಸ್ಟ್ ಮಾಡಿ “ನನ್ನ ಕುಟುಂಬಕ್ಕೆ ಹಾನಿಯುಂಟು ಮಾಡುವ ವೀಡಿಯೊಗಳು, ಚಿತ್ರಗಳು ಮತ್ತು ಇತರ ವಿಷಯಗಳನ್ನು ಪೋಸ್ಟ್ ಮಾಡುವ ಮತ್ತು ಮರು ಪೋಸ್ಟ್ ಮಾಡುತ್ತಿರುವ ಜನರು ಮತ್ತು ಅಭಿಮಾನಿಗಳಿಗೆ ನನ್ನ ಪ್ರಾಮಾಣಿಕ ವಿನಂತಿ. ತಕ್ಷಣವೇ ಆ ರೀತಿಯಾದ ಪೋಸ್ಟ್ಗಳನ್ನು ನಿಲ್ಲಿಸಿ. ಮಹಿಳೆಯಾಗಿ ಈ ವೀಡಿಯೊವನ್ನು ಪೋಸ್ಟ್ ಮಾಡುವ ಮೊದಲು ಒಬ್ಬರು ಎರಡು ಬಾರಿ ಯೋಚಿಸಬೇಕಾಗಿತ್ತು. ಏಕೆಂದರೆ, ಇದು ನನಗೆ ಮತ್ತು ನನ್ನ ಮಗನಿಗೆ ಅಪಾರ ನೋವನ್ನು ಉಂಟುಮಾಡಿದೆ. ನಿಮ್ಮ ಈ ಕೃತ್ಯ ನಿಮ್ಮ ನೈತಿಕತೆಯನ್ನು ತೋರಿಸುತ್ತದೆ. ವ್ಯಕ್ತಿತ್ವವನ್ನು ಗಮನಿಸಿ. ನನ್ನ ಮೌನದ ಅರ್ಥ ನಾನು ನಾನ್ಸೆನ್ಸ್ ಅನ್ನು ತಡೆದುಕೊಳ್ಳುತ್ತೇನೆ ಎಂದು ಅರ್ಥವಲ್ಲ!” ಎಂದು ಬರೆದು ಮೇಘಾಶೆಟ್ಟಿಯನ್ನು ಟ್ಯಾಗ್ ಮಾಡಿದ್ದರು.
ಪೋಸ್ಟ್ ಡಿಲೀಟ್ ಮಾಡಿ ಸೈಲೆಂಟ್
ನಟಿ ಮೇಘಾ ಶೆಟ್ಟಿ ಈ ಹಿಂದೆ ಕೂಡ ನಟ ದರ್ಶನ್ ಜೊತೆಗೆ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡುತ್ತಿದ್ದರು. ಸಫಾರಿಗೆ ಹೋಗಿ ಬಂದ ಫೋಟೊಗಳು ವೈರಲ್ ಆದಾಗಲೂ ಸುಮ್ಮನಿದ್ದರು. ಆದರೆ ಯಾಕೋ ಈ ಬಾರಿ ಮಿತಿ ಮೀರಿದೆ ಎನಿಸಿ ವಿಜಯಲಕ್ಷ್ಮಿ ಪ್ರತಿಕ್ರಿಯಿಸಿದ್ದಾರೆ. ಇತ್ತ ದರ್ಶನ್ ಪತ್ನಿ ಕೆಂಡಾಮಂಡಲವಾಗಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ನಟಿ ಮೇಘಾ ಶೆಟ್ಟಿ ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ವಿಜಯಲಕ್ಷ್ಮಿ ಪೋಸ್ಟ್ಗೆ ಪ್ರತಿಕ್ರಿಯೆ ನೀಡದೇ ಸೈಲೆಂಟ್ ಆಗಿದ್ದಾರೆ. ಕಿರುತೆರೆ ಧಾರಾವಾಹಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.
ಫಿಲ್ಮಿಬೀಟ್ಗೂ ಪ್ರತಿಕ್ರಿಯೆ ನೀಡದ ಮೇಘಾ
ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ಗೆ ಸಂಬಂಧಿಸಿದಂತೆ ನಟಿ ಮೇಘಾ ಶೆಟ್ಟಿ ಪ್ರತಿಕ್ರಿಯೆ ಪಡೆಯಲು ಫಿಲ್ಮಿಬೀಟ್ ಪ್ರಯತ್ನಿಸಿತು. ಒಮ್ಮೆ ಕರೆ ಸ್ವೀಕರಿಸಿದ ನಟಿ “ಶೂಟಿಂಗ್ ನಡೀತಿದೆ. ಶಾಟ್ನಲ್ಲಿ ಬ್ಯುಸಿ ಇದ್ದೀನಿ” ಎಂದರು. ನಂತರ ಎಷ್ಟೇ ಪ್ರಯತ್ನಿಸಿದರೂ ಕರೆ ಸ್ವೀಕರಿಸದೇ ಸೈಲೆಂಟ್ ಆಗಿದ್ದಾರೆ. ಆರೂರು ಜಗದೀಶ್ ನಿರ್ಮಾಣದ ಜೊತೆ ಜೊತೆಯಲಿ ಧಾರಾವಾಹಿಯ ಲೀಡ್ ರೋಲ್ನಲ್ಲಿ ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ತ್ರಿಬಲ್ ರೈಡಿಂಗ್’ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೂ ಎಂಟ್ರಿ ಕೊಟ್ಟಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಡಿಲೀಟ್
ಕೆಲವೇ ನಿಮಿಷಗಳಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾಡಿದ್ದ ಪೋಸ್ಟ್ ವೈರಲ್ ಆಗಿತ್ತು. ದರ್ಶನ್ ಅಭಿಮಾನಿಗಳಲ್ಲೂ ಇದು ಸಾಕಷ್ಟು ಚರ್ಚೆ ಹುಟ್ಟಾಕಿತ್ತು. ಸಾಕಷ್ಟು ಜನ ಮಹಿಳಾ ಅಭಿಮಾನಿಗಳು ವಿಜಯಲಕ್ಷ್ಮಿ ಪರ ಬ್ಯಾಟ್ ಬೀಸಿದ್ದರು. “ಅವರದ್ದೆಲ್ಲಾ ಅತಿಯಾಯಿತು, ಹೆಂಡತಿಯಾಗಿ ನಿಮಗೆ ಎಲ್ಲಾ ಹಕ್ಕು ಇದೆ” ಎಂದು ಕಾಮೆಂಟ್ ಮೂಲಕ ತಿಳಿಸಿದ್ದರು. ತಮ್ಮ ಪೋಸ್ಟ್ ಇಷ್ಟೆಲ್ಲಾ ಸದ್ದು ಮಾಡುತ್ತಿದ್ದಂತೆ ಯಾಕೋ ದಿಢೀರನೇ ವಿಜಯಲಕ್ಷ್ಮಿ ಅದನ್ನು ಡಿಲೀಟ್ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada