ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಬಯಲಾಗುತ್ತಿದ್ದಂತೆಯೇ ಕಲಬುರಗಿಯಿಂದ ನಾಪತ್ತೆಯಾಗಿ ಗುಜರಾತ್ನಲ್ಲೂ ಕೆಲ ಕಾಲ ತಲೆಮರೆಸಿಕೊಂಡಿದ್ದ ದಿವ್ಯಾ ಹಾಗರಗಿಗೆ ಕಾಂಗ್ರೆಸ್ನಿಂದಲೇ ಶೀರಕ್ಷೆ ಸಿಕ್ಕಿತ್ತು ಎಂಬ ವಿಷ್ಯ ಬಯಲಾಗಿದೆ.
ಏ.13ರಂದು ಕಲಬುರಗಿಯಿಂದ ಗುಜರಾತ್ನ ಕಾಳಿಕಾ ಮಂದಿರಕ್ಕೆ ಖಾಸಗಿ ವಾಹನದಲ್ಲಿ ತೆರಳಿದ್ದಳು.
ಅಲ್ಲಿ 3-4 ದಿನ ತಂಗಿದ್ದಳು. ಅಲ್ಲಿಂದ ಅಂಬಾಜಿ ಮಂದಿರಕ್ಕೂ ಭೇಟಿ ನೀಡಿ, ಇಲ್ಲಿಯೂ ಮೂರ್ನಾಲ್ಕು ದಿನ ಇದ್ದಳು. ಬಳಿಕ ಮಹಾರಾಷ್ಟ್ರದತ್ತ ಪಯಣ ಬೆಳೆಸಿದ್ದಳು. ಪುಣೆಗೆ ಬಂದು ಪರಿಚಿತ ಸುರೇಶ ಕಾಟೇಗಾಂವ್ ಸಂಪರ್ಕದಲ್ಲಿದ್ದಳು. ಈತನ ಬಳಿ ಕೆಲಸಕ್ಕಿದ್ದ ಕಾಳಿದಾಸ ಬಾಡಿಗೆಗೆ ಪಡೆದಿದ್ದ ಅಪಾರ್ಟ್ಮೆಂಟ್ನಲ್ಲಿ ಐದು ದಿನ ಕಳೆದಿದ್ದಳು ಎಂದು ಮೂಲಗಳು ತಿಳಿಸಿವೆ. ನಂತರ ದಿವ್ಯಾಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ವಿಶೇಷವೆಂದರೆ, ಈಕೆಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದವರು ಕಾಂಗ್ರೆಸ್ ಮುಖಂಡರು ಎಂದು ಹೇಳಲಾಗಿದೆ.
ಸುರೇಶ್ ಕಾಟೇಗಾಂವ್ ಮಹಾರಾಷ್ಟ್ರದ ಸ್ಥಳೀಯ ಕಾಂಗ್ರೆಸ್ ಮುಖಂಡ. ಈತನ ಸಹೋದರಿ ಸುರೇಖಾ ಕಾಂಗ್ರೆಸ್ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಸುರೇಖಾ ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಸದ್ಯ ಸದಸ್ಯೆಯಾಗಿದ್ದಾರೆ. ಸುರೇಶ್ಗೆ ದಿವ್ಯಾ ಪರಿಚಯವಾಗಲು ಅಫಜಲಪುರದಲ್ಲಿ ಮರಳು ಬ್ಲಾಕ್ ಟೆಂಡರ್ ಪಡೆಯಲು ಸಹಕರಿಸಿದ್ದೇ ಕಾರಣ ಎನ್ನಲಾಗಿದೆ. ಹೀಗಾಗಿ ದಿವ್ಯಾಗೆ ಕಾಂಗ್ರೆಸ್ ನಾಯಕರೇ ‘ಶ್ರೀರಕ್ಷೆ’ಯಾಗಿರುವುದು ಬಯಲಿಗೆ ಬರುತ್ತಿದೆ. ಈ ಅಂಶವನ್ನು ಸಿಐಡಿ ತನ್ನ ದಾಖಲೆಗಳಲ್ಲಿ ಉಲ್ಲೇಖಿಸಿದೆ ಎಂದು ತಿಳಿದುಬಂದಿದೆ. ದಿವ್ಯಾ ಸದ್ಯ ಜೈಲಿನಲ್ಲಿದ್ದಾಳೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada