ಡಿ.ಕೆ.ಶಿ ಕಾರು ತಪಾಸಣೆ ಮಾಡಿದ ಚುನಾವಣಾಧಿಕಾರಿಗಳು
ಬೆಂಗಳೂರು, ಅ.8- ಸಿಂಧಗಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದಾರೆ.
ಹೆಲಿಕಾಫ್ಟರ್ನಲ್ಲಿ ತೆರಳಿದ ಡಿ.ಕೆ.ಶಿವಕುಮಾರ್ ಅವರು ಸಿಂಧಗಿಗೆ ಹೋಗುವ ಮಾರ್ಗ ಮಧ್ಯೆ ಮೊರಟಗಿ ಚೆಕ್ ಪೋಸ್ಟ್ನಲ್ಲಿ ಚುನಾವಣಾ ಅಧಿಕಾರಿಗಳು ಬೆಂಗಾವಲು ವಾಹನ ಮತ್ತು ಕಾರುಗಳನ್ನು ತಡೆದಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ತಮ್ಮ ಕಾರಿನ ಬಾಗಿಲು ತೆಗೆದು ಪರಿಶೀಲನೆಗೆ ಸಹಕರಿಸಿದ್ದಾರೆ. ಕಾರನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದ ಬಳಿಕ ಮುಂದಿನ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.
ಇದಕ್ಕೂ ಮುನ್ನ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದ ಬಳಿ ಪಕ್ಷದ ಕಾರ್ಯಕರ್ತರು ಶಾಲು ಹೊದಿಸಿ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂದಿಸಿದರು. ಈ ವೇಳೆ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಜಯಘೋಷಗಳನ್ನು ಕೂಗಲಾಯಿತು.