ಬೆಂಗಳೂರು: ದಿವಂಗತ ಮಾದೇಗೌಡ ವಿರುದ್ಧ ಆಡಿಯೋ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸೋಮವಾರ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ವಿರುದ್ಧ ಗುಡುಗಿದ್ದು, ನೋಟಿಸ್ ಕೊಟ್ಟು ಪಕ್ಷದಿಂದ ಹೊರ ಹಾಕಲಾಗುವುದು, ಈ ಬಗ್ಗೆ ಪಕ್ಷದ ಅಧ್ಯಕ್ಷರಿಗೆ ಸೂಚನೆ ಕೊಡುತ್ತೇನೆ ಎಂದಿದ್ದಾರೆ.
ಜೆಪಿ ಭವನದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಸಭೆ ಸಂಧರ್ಭ ಮಾತನಾಡಿದ ಹೆಚ್ ಡಿಕೆ, ನಿನ್ನೆ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು ನೋಡಿದ್ದೇನೆ, ಶಿವರಾಮೇಗೌಡರ ದೂರವಾಣಿ ರೆಕಾರ್ಡ್ ವೈರಲ್ ಆಗಿದೆ. ಸಂಬಂಧ ಇಲ್ಲದೇ ಇರುವ ವಿಚಾರವನ್ನ ಪ್ರಸ್ತಾಪ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಹಿರಿಯ ರಾಜಕಾರಣಿ ದಿ.ಮಾದೇಗೌಡರ ಬಗ್ಗೆ ಮಾತನ್ನಾಡಿದ್ದಾರೆ. ಮಾದೇಗೌಡರು ಈಗ ಇಲ್ಲ. ಆದರೆ ಅವರ ಹೆಸರು ಯಾಕೆ ಎಳೆದು ತಂದರೋ ಗೊತ್ತಿಲ್ಲ. ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ಸಂಬಂಧ ನಮ್ಮ ಅಧ್ಯಕ್ಷರಿಗೆ ಸೂಚನೆ ಕೊಡುತ್ತೇನೆ. ನೋಟೀಸ್ ಕೊಟ್ಟು ಪಕ್ಷದಿಂದ ಹೊರ ಹಾಕಿ ಅಂತ ಸೂಚಿಸುತ್ತೇನೆ. ಅಂತವರು ಪಕ್ಷದಲ್ಲಿ ಇದ್ದರೆ ಶೋಭೆ ಇರುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
ಹಣವನ್ನು ಇವರೊಬ್ಬರೇ ಕಂಡಿರೋದಲ್ಲ, ಪಾರ್ಲಿಮೆಂಟ್ ಚುನಾವಣೆಯಲ್ಲಿ ಹಣ ಖರ್ಚು ಮಾಡಿದ್ದನ್ನ ಹೇಳಿದ್ದಾರೆ. 30 ಕೋಟಿ ಖರ್ಚು ಮಾಡಿರುವುದನ್ನು ಹೇಳಿದ್ದಾರೆ. ಅದ್ಯಾರಿಗೆ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದರು.
ಸಿಎಂ ಇಬ್ರಾಹಿಂ ಕೈ ತೊರೆಯುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಬ್ರಾಹಿಂ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಬಿಟ್ಟಿದ್ದೇನೆ ಅಂತಾನೂ ಹೇಳಿದ್ದಾರೆ. ನೋಡೋಣ ಏನಾಗುತ್ತದೋ ಎಂದರು.
ಉತ್ತರ ಪ್ರದೇಶ, ಗೋವಾ, ಪಂಜಾಬ್ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ ಒಂದು ಪಾರ್ಟಿಯಲ್ಲಿ ಇರ್ತಾರೆ ಸಂಜೆ ಇನ್ನೊಂದು ಪಾರ್ಟಿಗೆ ಹೋಗ್ತಾರೆ . ಇಂದು ರಾಜಕೀಯ ನಾಯಕರಲ್ಲಿ ನಿಷ್ಠೆ ಎಂಬುದೇ ಇಲ್ಲ. ಇಂಥಹವರು ಇಂಥಹದ್ದೇ ಪಕ್ಷದಲ್ಲಿ ಇರ್ತಾರೆ ಅಂತ ಊಹೆ ಮಾಡುವುದೂ ಕಷ್ಟ. ಏನಾಗುತ್ತದೆ ಎಂದು ಚುನಾವಣೆ ಸಮಯದಲ್ಲಿ ನೋಡೋಣ ಎಂದರು.
ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪುರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಾಸೀರ್ ಹುಸೇನ್ ಉಸ್ತಾದ್, ಮಾಜಿ ಸಚಿವ ನಬೀ ಹಾಗೂ ಜಿಲ್ಲಾ, ತಾಲ್ಲೂಕು ಘಟಕಗಳ ಸಮುದಾಯದ ನಾಯಕರು ಉಪಸ್ಥಿತರಿದ್ದರು. ಪರಿಷತ್ ಸದಸ್ಯ ಬಿ.ಎಂ ಫಾರೂಕ್, ಮತ್ತು ಜಫ್ರುಲ್ಲಾ ಖಾನ್ ಗೈರಾಗಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada