ಮುಂಬೈ, ಫೆ.23- ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರನಿಂದ ನನಗೆ ಜೀವ ಬೆದರಿಕೆ ಇದೆ ಎಂದು ಸುಳ್ಳು ಆರೋಪ ಮಾಡಿದ್ದಕ್ಕಾಗಿ ಶಿವಸೇನಾ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ರಾವತ್ ವಿರುದ್ಧ ಥಾಣೆ ಮಾಜಿ ಮೇಯರ್ ಆಗಿರುವ ಮೀನಾಕ್ಷಿ ಶಿಂಧೆ ಅವರು ದೂರು ನೀಡಿದ ನಂತರ ಪ್ರಕರಣ ದಾಖಲು ಮಾಡಲಾಗಿದೆ. ರಾವುತ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಮಾನನಷ್ಟ, ಸುಳ್ಳು ಆರೋಪ, ದ್ವೇಷವನ್ನು ಉತ್ತೇಜಿಸುವುದು, ಶಾಂತಿ ಭಂಗಕ್ಕಾಗಿ ಅವಮಾನ ಮತ್ತು ಸಾರ್ವಜನಿಕ ಕಿಡಿಗೇಡಿತನದ ಹೇಳಿಕೆಗಳ ಆರೋಪ ಹೊರಿಸಲಾಗಿದೆ. ಸಂಸದರಾಗಿರುವ ಶ್ರೀಕಾಂತ್ ಶಿಂಧೆ ಅವರು ಥಾಣೆ ಮೂಲದ ರಾಜಾ ಠಾಕೂರ್ ಎಂಬುವರನ್ನ ಕೊಲ್ಲಲು ಗುತ್ತಿಗೆ ನೀಡಿದ್ದರು ಎಂದು ರಾವತ್ ವಾರದ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ಥಾಣೆ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಅವರು, ದೂರಿನ ಪ್ರತಿಯನ್ನು ಗೃಹ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಕಳುಹಿಸಿದ್ದರು ಈ ಬೆಳವಣಿಗೆ ಬೆನ್ನಲ್ಲೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರಾವತ್ ಹೇಳಿಕೆಯ ಬಗ್ಗೆ ತನಿಖೆ ನಡೆಸುವ ಭರವಸೆ ನೀಡಿದ್ದರು. ಜನರ ಸಹಾನೂಭೂತಿ ಪಡೆಯುವ ಉದ್ದೇಶದಿಂದ ರಾವತ್ ಅವರು ಬುದ್ಧಿಹೀನ ಆರೋಪಗಳನ್ನು ಮಾಡುತ್ತಿದ್ದಾರೆ. ನಿಮ್ಮ ಸುಳ್ಳು ಆರೋಪಗಳಿಂದ ನೀವು ಜನರ ಮನಸು ಗೆಲ್ಲಲು ಸಾಧ್ಯವಿಲ್ಲ ಎಂದು ಫಡ್ನವಿಸ್ ಆರೋಪ ನಿರಾಕರಿಸಿದ್ದರು. ಇದೀಗ ರಾವತ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದು ಶಿವಸೇನೆಯ ಎರಡು ಬಣಗಳ ನಡುವಿನ ತಿಕ್ಕಾಟ ಮತ್ತಷ್ಟು ಜೋರಾಗಿದ್ದು ಯಾವ ಹಂತ ತಲುಪುವುದೋ ಕಾದು ನೋಡಬೇಕಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada