‘ಪುಷ್ಪ’ ಸಿನಿಮಾ ರಿಲೀಸ್ ಆಗಿದ್ದೇ ಆಗಿದ್ದು, ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ರು. ಸಿನಿಮಾ ಒಂದು ಮಟ್ಟಕ್ಕೆ ಸದ್ದು ಮಾಡುತ್ತೆ ಅನ್ನೋ ನಿರೀಕ್ಷೆಯಿದ್ದರೂ, ಈ ಮಟ್ಟಕ್ಕೆ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತೆ ಅನ್ನೋದನ್ನು ಚಿತ್ರತಂಡಕ್ಕೆ ಅಂದಾಜು ಇರಲಿಲ್ಲ.
‘ಪುಷ್ಪ’ ರಿಲೀಸ್ ಆದ್ಮೇಲೆ ಅದರ ಕ್ರೇಜ್ ಮತ್ತಷ್ಟು ಹೆಚ್ಚಾಯ್ತು. ವಿಶ್ವದ ಹಲವೆಡೆ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಮ್ಯಾನರಿಸಂ ಹಾಗೂ ಸ್ಟೈಲ್ ಸದ್ದು ಮಾಡಿತ್ತು. ಇಷ್ಟೇ ಗಲ್ಲಾಪೆಟ್ಟಿಗೆಯಲ್ಲೂ ಚಮತ್ಕಾರ ಮಾಡಿತ್ತು. ಈಗ ಎಲ್ಲರ ಕಣ್ಣು ‘ಪುಷ್ಪ 2’ ಮೇಲಿದೆ.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಈಗ ‘ಪುಷ್ಪ 2’ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ‘ಪುಷ್ಪ 2’ ತಂಡ ಭಾರತದ ಬಾಕ್ಸಾಫೀಸ್ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಬೇಕು ಅಂತ ಪಣ ತೊಟ್ಟು ನಿಂತಿದೆ. ಅದಕ್ಕಾಗಿಯೇ ನಿರ್ದೇಶಕ ಸುಕುಮಾರ್ ಕೂಡ ಚಿತ್ರದ ಕಥೆಯನ್ನು ಮರ ರಚನೆ ಮಾಡಿದ್ದರು. ಕೊನೆಗೂ ಸ್ಕ್ರಿಪ್ಟ್ ಓಕೆ ಅಂತ ಅನಿಸಿದ ಬಳಿಕವೇ ‘ಪುಷ್ಪ: ದಿ ರೂಲ್'(ಪುಷ್ಪ 2) ಸೆಟ್ಟೇರಿರೋದು. ಆದರೆ, ಸಿನಿಮಾದ ಶೂಟಿಂಗ್ ಆರಂಭ ಆದಲ್ಲಿಂದ ಒಂದೇ ಒಂದು ಲುಕ್ ಕೂಡ ಹೊರಬಿಟ್ಟಿಲ್ಲ. ಹೀಗಾಗಿ ಅಲ್ಲು ಅರ್ಜುನ್ ಅಭಿಮಾನಿಗಳು ಕಾದೂ ಕಾದು ನಿರಾಸೆಗೆ ಒಳಗಾಗಿದ್ದರು. ಅಂತಹ ಅಭಿಮಾನಿಗಳಿಗೀಗ ಖುಷಿ ವಿಷಯವೊಂದಿದೆ.
ಟಾಲಿವುಡ್ ಮೂಲಗಳ ಪ್ರಕಾರ, ಸುಕುಮಾರ್ ಮತ್ತು ಅವರ ತಂಡ ಅಲ್ಲು ಅರ್ಜುನ್ಗೆ ಸರ್ಪ್ರೈಸ್ ಕೊಡುವುದಕ್ಕೆ ರೆಡಿಯಾಗಿದ್ಯಂತೆ. ಇಲ್ಲಿವರೆಗೂ ಒಂದೇ ಒಂದು ತುಣುಕನ್ನೂ ಬಿಡದೆ ಜೋಪಾನವಾಗಿ ಇಟ್ಟಿಕೊಂಡಿದ್ದ ತಂಡ ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ರಿಲೀಸ್ ಮಾಡಲಿದೆಯಂತೆ. ಅಂದ್ಹಾಗೆ ಅಲ್ಲು ಅರ್ಜುನ್ ಏಪ್ರಿಲ್ 8ರಂದು 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಅದೇ ದಿನದಂದು ‘ಪುಷ್ಪ 2’ ಸಿನಿಮಾದ ಸ್ಪೆಷಲ್ ಗ್ಲಿಂಪ್ಸ್ ಅನ್ನು ರಿಲೀಸ್ ಮಾಡಲಿದ್ದಾರಂತೆ. ಹಾಗೇನಾದರೂ ಆದರೆ, ಅಲ್ಲು ಅಭಿಮಾನಿಗಳಿಗೆ ಡಬಲ್ ಧಮಾಕಾ ಸಿಗೋದು ಗ್ಯಾರಂಟಿ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
‘ಪುಷ್ಪ 2’ ಸಿನಿಮಾದ ಮೊದಲ ಹಂತದ ಶೂಟಿಂಗ್ ಕೆಲವು ದಿನಗಳ ಹಿಂದಷ್ಟೇ ನಿಲ್ಲಿಸಲಾಗಿತ್ತು. ಆ ಬಳಿಕ ಒಂದಿಷ್ಟು ದಿನ ಅಲ್ಲು ಅರ್ಜುನ್ ಬ್ರೇಕ್ ತೆಗೆದುಕೊಂಡಿದ್ದರು. ತನ್ನ ಕುಟುಂಬದ ಜೊತೆಗೆ ರಾಜಸ್ತಾನಕ್ಕೆ ರಜೆಗೆಂದು ತೆರಳಿದ್ದರು. ಈಗ ಮತ್ತೆ ಅಲ್ಲು ಅರ್ಜುನ್ ‘ಪುಷ್ಪ 2’ ಶೂಟಿಂಗ್ಗೆ ಮರಳಿದ್ದಾರೆ ಎನ್ನಲಾಗಿದೆ. ಇನ್ನೊಂದು ಹಂತದ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಸುಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆಂದು ಟಾಲಿವುಡ್ನಲ್ಲಿ ಸುದ್ದಿ.
‘ಪುಷ್ಪ 2’ ಹಲವು ಕಾರಣಗಳಿಗೆ ಗಮನ ಸೆಳೆಯುತ್ತಿದೆ. ಶೆಖಾವತ್ ಸಿಂಗ್ ಹಾಗೂ ಪುಷ್ಪ ನಡುವಿನ ಕಿತ್ತಾಟ ಹೇಗಿರುತ್ತೆ? ಅದಕ್ಕಿಂತ ಹೆಚ್ಚಾಗಿ ಪಾರ್ಟ್ 2 ನಲ್ಲಿ ಮತ್ತೊಂದು ಪ್ರಮುಖ ಪಾತ್ರ ಎಂಟ್ರಿ ಕೊಡಲಿದೆ ಅನ್ನೋ ಮಾತು ಕೇಳಿ ಬರುತ್ತಿದ್ದು, ವಿಜಯ್ ಸೇತುಪತಿ ಹಾಗೂ ಅಲ್ಲು ಅರ್ಜುನ್ ನಡುವೆ ಭಾರಿ ಫೈಟ್ ನಡೆಯಲಿದೆ ಎನ್ನಲಾಗಿದೆ. ಹೀಗಾಗಿ ಮೂವರು ದಿಗ್ಗಜರ ನಡುವಿನ ಕಾಳಗ ಸಖತ್ ಕಿಕ್ ಕೊಡಲಿದೆ ಅನ್ನೋ ನಿರೀಕ್ಷೆಯಲ್ಲಿ ಸಿನಿಪ್ರಿಯರು ಇದ್ದಾರೆ. ಹಾಗೇ ಇನ್ನೂ ಕೆಲವು ಪ್ರಮುಖ ಪಾತ್ರಗಳು ‘ಪುಷ್ಪ 2’ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಇನ್ನು ‘ಪುಷ್ಪ’ದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಕಾಂಬಿನೇಷನ್ ಕೂಡ ವರ್ಕ್ಔಟ್ ಆಗಿತ್ತು. ಅಲ್ಲು ಅರ್ಜುನ್ ಸ್ಟೈಲ್ ಹಾಗೂ ಮ್ಯಾನರಿಸಂ ಪ್ರೇಕ್ಷಕರಿಗೆ ಕಿಕ್ ಕೊಟ್ಟಿತ್ತು. ರಶ್ಮಿಕಾ ಮಂದಣ್ಣ ಸ್ಟೆಪ್ಸ್ ಅದೆಷ್ಟೋ ರೀಲ್ಸ್ ಆಗಿದ್ದವು. ಹೀಗಾಗಿ ಸೀಕ್ವೆಲ್ನಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಮ್ಯಾನರಿಸಂ ಹಾಗೇ ಇರುತ್ತಾ? ಇಲ್ಲ ಬದಲಾಗುತ್ತಾ? ಅನ್ನೋ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಸದ್ಯಕ್ಕೀಗ ಐಕಾನ್ ಸ್ಟಾರ್ ಬರ್ತ್ಡೇಗೆ ‘ಪುಷ್ಪ 2’ ಐಕಾನಿಕ್ ಗ್ಲಿಂಪ್ಸ್ ರಿಲೀಸ್ ಆದರೆ, ಇವೆಲ್ಲದಕ್ಕೂ ಒಂದು ಸ್ಪಷ್ಟತೆ ಸಿಗಲಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada