ಹಾಸನ ರೈತರಿಗೆ ಫಸಲ್ ಬಿಮಾ ಯೋಜನೆ ಹಣ ಸಿಕ್ಕಿಲ್ಲ. ಹಾಸನ ಜಿಲ್ಲೆಯಿಂದ ಎಷ್ಟು ಹಣ ಸಂಗ್ರಹ ಮಾಡಿದ್ರು? ಹಾಸನ ಜಿಲ್ಲೆಗೆ ಎಷ್ಟು ಕೋಟಿ ಹಣ ಬಂತು ಎಂದು ಹೇಳಿ ಎಂದು ವೇದಿಕೆ ಮೇಲೆ ಸಚಿವರು ಮಾತಿಗೆ ನಿಂತಾಗ ಅಸಮಾಧಾನ ಕೇಳಿಬಂದಿದೆ. ನಾನು ಮಾತಾಡೋಕೆ ಬೇರೆ ಎಲ್ಲಾ ಕಡೆ ಸಿಗುತ್ತೇನೆ. ಕಾರ್ಯಕ್ರಮಕ್ಕೆ ಅಡ್ಡಿ ಮಾಡುವುದಿದ್ರೆ ನೀವೇ ಮಾತಾಡಿ ಎಂದು ವೇದಿಕೆ ಮೇಲೆಯೇ ಶೋಭಾ ಅಸಮಾಧಾನ ಹೊರಹಾಕಿದ್ದಾರೆ. ಕೊನೆಗೆ ಹಾಸನ ಪೊಲೀಸರು ರೈತರನ್ನು ಸಮಾಧಾನಪಡಿಸಿದ್ದಾರೆ. ಹಾಸನ ತಾಲ್ಲೂಕಿನ ಕಾರೆಕೆರೆ ಕೃಷಿ ಕಾಲೇಜು ಆವರಣದಲ್ಲಿ ನಡೆಯುತ್ತಿರೋ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ.
2024ರ ನಂತರ ದೇಶದ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರಲಿಕ್ಕೆ ಸಾಧ್ಯವಿಲ್ಲ: ಗೋವಿಂದ ಕಾರಜೋಳ
ಇತ್ತ ಬಾಗಲಕೋಟೆಯಲ್ಲಿ, ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ವಿಚಾರಕ್ಕೆ ಸಂಬಂಧಿಸಿ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಪರಿಸ್ಥಿತಿ ಇನ್ನೂ ಹೀನಾಯ ಆಗುತ್ತದೆ. ಇದಕ್ಕಿಂತಲೂ ಹೀನಾಯ ಆಗುತ್ತದೆ. ಪಂಚರಾಜ್ಯ ಚುನಾವಣೆಗೂ ಮುನ್ನ ಬೆಳಗಾವಿಯಲ್ಲಿ ಇದೇ ಮಾತು ಹೇಳಿದ್ದೆ. ಇವಾಗಲೂ ಹೇಳ್ತೀನಿ. 2024ರ ನಂತರ ದೇಶದ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರಲಿಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ, ಇಬ್ಬರು ಸ್ಪೇಷಲ್ ಪ್ಲೈಟ್ ಮಾಡಿಕೊಂಡು ಗೋವಾ, ಉತ್ತರಾಖಂಡ ಹೋಗಿದ್ದರು. ಬಾಡಿಗೆ ಕೊಟ್ಟು ಮರಳಿ ಬಂದ್ರು. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಬರೋದಿಲ್ಲ ಎಂದು ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ನಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಮಧ್ಯೆ ಏನಿದೆ ಅಂತ ನಾಡಿನ ಜನತೆಗೆ ಗೊತ್ತು. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಕಾಂಗ್ರೆಸ್ನಲ್ಲಿ ಈಗ ಎರಡು ಗುಂಪು ಇವೆ. ಚುನಾವಣೆ ಬರುವಷ್ಟರಲ್ಲಿ ಮೂರು ಗುಂಪು ಆಗುತ್ತದೆ. ಮೂರು ಗುಂಪಿನವರು ಮೂರು ದಿಕ್ಕಿಗೆ ಹೋಗ್ತಾರೆ ಎಂದು ಕಾರಜೋಳ ಟೀಕಿಸಿದ್ದಾರೆ.
ಕಾಂಗ್ರೆಸ್ನಿಂದ ಬಿಜೆಪಿಗೆ ಕೆಲ ಶಾಸಕರು ಬರುತ್ತಾರೆ ಎಂಬ ಸುದ್ದಿ ಬಗ್ಗೆ ಬಾಗಲಕೋಟೆಯಲ್ಲಿ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಬಿಟ್ಟು ಹೋಗ್ತಾರೆ, ಆದರೆ ನಾವು ಯಾರನ್ನೂ ಸಂಪರ್ಕ ಮಾಡಿಲ್ಲ. ನಮ್ಮ ಬಾಗಿಲು 24 ಗಂಟೆಗಳ ಕಾಲ ಓಪನ್ ಇರುತ್ತದೆ. ಯಾರು ಬೇಕಾದರೂ ಬರಬಹುದು. ರಾಜ್ಯ ಬಿಜೆಪಿ ಅಧ್ಯಕ್ಷರು ಬದಲಾವಣೆ ಆಗ್ತಾರೆ ಎಂಬುದು ಗಾಳಿ ಸುದ್ದಿ. ಇವೆಲ್ಲ ಬಾಗಲಕೋಟೆಯಲ್ಲಿ ಹುಟ್ಟಿದ ಸುದ್ದಿ ಎಂದು ಕಾರಜೋಳ ಹಾಸ್ಯಚಟಾಕಿ ಹಾರಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada