ಹೊನ್ನಪ್ಪ ಭಾಗವತರ್ ಅಂದರೆ ಅದೊಂದು ಸಾಂಸ್ಕೃತಿಕ ಶ್ರೇಷ್ಠತೆಯ ಶಿಖರ. ಸಂಗೀತ, ರಂಗಭೂಮಿ, ಸಿನಿಮಾ ಹೀಗೆ ಎಲ್ಲೆಡೆ ನಟನೆ ಮತ್ತು ಗಾಯನದಲ್ಲಿ ಅವರು ವ್ಯಾಪಿಸಿದ್ದ ರೀತಿ ಹಾಗೂ ಅದಕ್ಕೆ ಮೆರುಗು ನೀಡುವಂತೆ ಹೊಂದಿದ್ದ ಸುರದ್ರೂಪ ಇವೆಲ್ಲವೂ ಅಪ್ಯಾಯಮಾನತೆ ಹುಟ್ಟಿಸುವಂತದ್ದು. ಮಹಾಕವಿ ಕಾಳಿದಾಸ ಚಿತ್ರವನ್ನು ನೋಡುವಾಗ ‘ಚೆಲುವಯ್ ಚೆಲ್ವೋ ತಾನಿ ತಂದನಾ ಗೀತೆಯಲ್ಲಿ ಅವರು ತೋರುವ ಮುಗ್ದತೆ, ಆಕರ್ಷಕ ನಿಲುವು, ಜನಪದೀಯ ಶೈಲಿಯ ಗಾಯನ ಒಂದೆಡೆಯಾದರೆ, ಮುಂದೆ ಪ್ರಬುದ್ಧ ಕಾಳಿದಾಸನಾಗಿ ಅವರು ಕಾಣುವ ರೀತಿ ಸಹಾ ಮನಸ್ಸಿನಲ್ಲಿ ನಿಲ್ಲುವಂತದ್ದು.
ಹೊನ್ನಪ್ಪ ಭಾಗವತರ್ 1915ರ ಜನವರಿ 14ರಂದು ನಾಗಮಂಗಲ ತಾಲ್ಲೂಕಿನ ಚೌಡಸಂದ್ರದಲ್ಲಿ ಜನಿಸಿದರು. ತಂದೆ ಚಿಕ್ಕಲಿಂಗಪ್ಪ ಮತ್ತು ತಾಯಿ ಕಲ್ಲಮ್ಮ. ಐದು ವರ್ಷದ ಬಾಲಕನಿದ್ದಾಗಲೇ ತಂದೆಯನ್ನು ಕಳೆದುಕೊಂಡ ಹೊನ್ನಪ್ಪನವರ ಬಾಲ್ಯ ಅವರ ತಾಯಿಯ ತವರಾದ ಮೋಟಗಾನಹಳ್ಳಿಯಲ್ಲಿ ಸಾಗಿತು. ಹಳ್ಳಿಯಲ್ಲಿ ಕಂಡ ನಾಟಕ, ಭಜನೆ, ಉತ್ಸವ, ಹಬ್ಬ ಹರಿದಿನಗಳು ಮುಂತಾದವು ಅವರ ಅಂತರಂಗವನ್ನು ಆಪ್ತವಾಗಿ ಮೀಟಿದ್ದವು. ಕಡು ಬಡತನದ ಬವಣೆಯಲ್ಲಿ ಅವರಿಗೆ ಶಿಕ್ಷಣಕ್ಕೆ ಅವಕಾಶ ದೊರಕಲಿಲ್ಲ. ಆದರೆ ಮಹತ್ವದ ಕಲಾವಿದರಾಗಿ ಹೊರಹೊಮ್ಮಿದ ಹೊನ್ನಪ್ಪ ಭಾಗವತರು ಮತ್ತು ಅಂದಿನ ಮಹತ್ವದ ಕಲಾವಿದರ ಬೆಳವಣಿಗೆಯನ್ನು ಗಮನಿಸುವಾಗ ಅಂದಿನ ಗ್ರಾಮಾಂತರ ಪ್ರದೇಶಗಳಲ್ಲಿದ್ದ ಸಂಗೀತ, ಭಜನೆ, ಬಯಲು ಸೀಮೆಯ ನಾಟಕಗಳು, ಹಬ್ಬ ಹರಿದಿನಗಳ ಆಚರಣೆ ಮುಂತಾದವು ಹೇಗೆ ಮನಸ್ಸುಗಳನ್ನು ರೂಪಿಸಿ, ಪೋಷಿಸಬಲ್ಲಷ್ಟು ಶಕ್ತಿಯುತವಾಗಿದ್ದವು ಎಂಬುದರ ಸೂಕ್ಷ್ಮ ಕಲ್ಪನೆ ನಮ್ಮ ಮನಸ್ಸುಗಳನ್ನು ತಟ್ಟುತ್ತದೆ.
1928ರಲ್ಲಿ ಬೆಂಗಳೂರಿಗೆ ಬಂದ ಹೊನ್ನಪ್ಪನವರು ಅಣ್ಣನೊಡನೆ ಮಗ್ಗದ ಕೆಲಸದಲ್ಲಿ ತೊಡಗಿಕೊಂಡರು. ಒಮ್ಮೆ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಸಂಬಂಧ ಮೂರ್ತಿ ಭಾಗವತರು ಹೊನ್ನಪ್ಪನವರ ಕಂಠಸಿರಿ ಕೇಳಿ ಆಕರ್ಷಿತರಾದರು. ಅವರಿಗೆ ಸಂಗೀತ ಕಛೇರಿಯಲ್ಲಿ ಜೊತೆ ನೀಡುವ ಅವಕಾಶ ಹೊನ್ನಪ್ಪನವರಿಗೆ ದೊರಕಿತು. ಕ್ರಮೇಣ ಸ್ವತಂತ್ರ ಕಛೇರಿಯ ಅವಕಾಶಗಳೂ ದೊರಕಲು ಆರಂಭಿಸಿದವು.
1937ರಲ್ಲಿ ಸೇಲಂನಲ್ಲಿ ತ್ಯಾಗರಾಜರ ಆರಾಧನೆ ಜರುಗಿತು. ಅಲ್ಲಿ ಹೊನ್ನಪ್ಪನವರು ಸಂಗೀತ ಕಛೇರಿ ನೀಡಿದರು. ಇವರಿಗೆ ಪಾಲ್ಗಟ್ ಮಣಿ ಅಯ್ಯರ್ ಅವರು ಮೃದಂಗವನ್ನು ನುಡಿಸಿದ್ದರು. ಅವರು ಹೊನ್ನಪ್ಪನವರ ಹಾಡುಗಾರಿಕೆಯಿಂದ ಆಕರ್ಷಿತರಾಗಿದ್ದರು. ಮಣಿಯವರಿಗೆ ಚಿತ್ರರಂಗದ ಸಂಪರ್ಕ ಕೂಡ ಇತ್ತು. ಅವರ ಆಸಕ್ತಿಯ ಫಲವಾಗಿ ಮದರಾಸಿನ ಶಂಕರ್ ಫಿಲಂಸ್ ಅವರ ‘ಅಂಬಿಕಾ ಪತಿ’ ಚಿತ್ರದಲ್ಲಿ ಅವಕಾಶ ದೊರಕಿತು. ಇದರಲ್ಲಿ ತ್ಯಾಗರಾಜ ಭಾಗವತರ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಹೊನ್ನಪ್ಪನವರದು ಅವರಿಗೆ ಸರಿಸಮನಾದ ಪಾತ್ರ.
1944ರಲ್ಲಿ ಹೊನ್ನಪ್ಪನವರ ಜೀವನದಲ್ಲಿ ಇನ್ನೊಂದು ತಿರುವು ಲಭಿಸಿತು. ತ್ಯಾಗರಾಜ ಭಾಗವತರ್ ಅವರು ಲಕ್ಷ್ಮಿಕಾಂತನ್ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಮಾನವಾಗಿ ಜೈಲಿಗೆ ಕಳುಹಿಸಲ್ಪಟ್ಟರು. ಆಗ ಅವರು ಬಹು ಬೇಡಿಕೆಯ ಕಲಾವಿದರಾಗಿದ್ದರು. ಜೈಲಿಗೆ ತೆರಳುವಾಗ ಅವರ ಕೈಯಲ್ಲಿ 12 ಚಿತ್ರಗಳಿದ್ದವು. ತಮಿಳಿನಲ್ಲಿ ಅವರಂತೆ ಗಾಯನ ಮತ್ತು ಅಭಿನಯ ಎರಡನ್ನೂ ಬಲ್ಲ ಬೇರೆ ಕಲಾವಿದರಿರಲಿಲ್ಲ. ಹೀಗಾಗಿ ಆ ಎಲ್ಲಾ ಅವಕಾಶಗಳೂ ಹೊನ್ನಪ್ಪನವರಿಗೆ ದೊರೆತವು. ಹೀಗೆ ಆ ಚಿತ್ರಗಳನ್ನು ಒಪ್ಪಿಕೊಳ್ಳುವ ಮುಂಚೆ ತ್ಯಾಗರಾಜ ಭಾಗವತರ್ ಅವರ ಬಳಿಗೆ ನಮ್ರರಾಗಿ ಹೋಗಿ ನಾನು ಈ ಚಿತ್ರಗಳನ್ನು ಒಪ್ಪಿಕೊಳ್ಳಬಹುದೆ ಎಂದು ಕೇಳಿ, ಅವರ ಆಶೀರ್ವಾದ ಪಡೆದ ನಂತರ ಅವುಗಳಲ್ಲಿ ನಟಿಸಿದರು. ಹೀಗೆ ಅವರು ಹೊನ್ನಪ್ಪ ಭಾಗವತರ್ ಎಂದು ಪ್ರಸಿದ್ಧಿ ಪಡೆದರು. ಈ ಹೆಸರೇ ಮುಂದೆ ಖಾಯಂ ಆಗಿ ಬಿಟ್ಟಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: