ರಸ್ತೆ ಅಪಘಾತಗಳು ನಡೆದಾಗ ಘಟನೆಗೆ ಕಾರಣವಾದ ವಾಹನಕ್ಕೆ ವಿಮೆ ನವೀಕರಣವಾಗದಿದ್ದರೆ ಅಂತಹ ಸಂದರ್ಭದಲ್ಲಿ ಮಾಲೀಕರು ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಅಲ್ಲದೆ, ಕೋರ್ಟ್ ರಸ್ತೆ ಅಪಘಾತ ನಡೆದ ಮುನ್ನವೇ ವಿಮೆ ನವೀಕರಣವಾಗಿದ್ದರೂ, ಘಟನೆ ನಡೆದ ಮರು ದಿನದಿಂದ ಅನ್ವಯವಾಗುವಂತಿದ್ದಲ್ಲಿ ವಿಮಾ ಕಂಪನಿಗೆ ಪರಿಹಾರ ನೀಡುವಂತೆ ಸೂಚನೆ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ರಸ್ತೆ ಅಪಘಾತ ಪ್ರಕರಣದಲ್ಲಿ ವಾಹನದ ಮಾಲೀಕರು ಪರಿಹಾರ ನೀಡಬೇಕೆಂದು ವಿಚಾರಣಾ ಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ವಾದ-ಪ್ರತಿವಾದ ಆಲಿಸಿದ ಬಳಿಕ ‘ಈ ಪ್ರಕರಣದಲ್ಲಿ ಘಟನೆ ನಡೆದ ಸಮಯಕ್ಕಿಂತ 5 ತಾಸು ಮುನ್ನವೇ ವಾಹನದ ವಿಮೆ ನವೀಕರಣ ಮಾಡಿಸಿದ್ದರೂ, ಘಟನೆ ನಡೆದ ಮರುದಿನದಿಂದ ಅನ್ವಯವಾಗಲಿದೆ. ಹಾಗಾಗಿ ಘಟನೆಯಿಂದ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ನಿರ್ದೇಶನ ನೀಡಲಾಗುವುದಿಲ್ಲ’ ಎಂದು ಕೋರ್ಟ್ ಆದೇಶಿಸಿದೆ.
ಪ್ರಕರಣದ ವಿವರ: 2015ರ ಮೇ 28 ರಂದು ಸಯ್ಯದ್ ಸಾದತ್ವುಲ್ಲಾ, ಮೆಹತಾಬ್ವುಲ್ಲಾ ಎಂಬುವರ ವಾಹನದಲ್ಲಿ ಹೋಗಬೇಕಾದರೆ ರಸ್ತೆ ಅಪಘಾತವುಂಟಾಗಿತ್ತು. ಬಳಿಕ ಸಯ್ಯದ್ ತೀವ್ರ ಗಾಯಗೊಂಡಿದ್ದ. ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಸಾವನ್ನಪ್ಪಿದ್ದರು. ವಿದ್ಯಾರ್ಥಿಯಾಗಿದ್ದ ಸಯ್ಯದ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡು ಮಾಸಿಕ 20 ಸಾವಿರ ರೂ. ದುಡಿಯುತ್ತಿದ್ದು, ಪೋಷಕರಿಗೆ ಇದೇ ಜೀವನಾಧಾರವಾಗಿತ್ತು. ಹೀಗಾಗಿ 30 ಲಕ್ಷಗಳ ಪರಿಹಾರ ಕೊಡಿಸಬೇಕು ಎಂದು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ವಿಮಾ ಕಂಪನಿ ಪರ ವಾದ ಮಂಡಿಸಿದ್ದ ವಕೀಲರು, 2015ರ ಮೇ 21ರಂದು 9.15ಕ್ಕೆ ರಸ್ತೆ ಅಪಘಾತ ನಡೆದಿದೆ. ಈ ಸಂಬಂಧ 2015ರ ಮೇ 22 ರಂದು ಪ್ರಕರಣ ದಾಖಲಾಗಿದೆ. ಅಲ್ಲದೆ, 2015 ಮೇ 21ರಂದು ಮಧ್ಯಾಹ್ನ 4.10ಕ್ಕೆ ವಾಹನದ ವಿಮೆ ಪಾಲಿಸಿ ನವೀಕರಣ ಮಾಡಿಸಿದ್ದಾರೆ. ಈ ವಿಮೆಯ ಕಾಲಾವಧಿ 2015ರ ಮೇ 22ರ ಮಧ್ಯರಾತ್ರಿಯಿಂದ ಒಂದು ವರ್ಷಕ್ಕೆ ಅನ್ವಯವಾಗಲಿದೆ. ಹೀಗಾಗಿ ಘಟನೆ ನಡೆದ ಸಂದರ್ಭದಲ್ಲಿ ವಾಹನಕ್ಕೆ ವಿಮೆ ಇರಲಿಲ್ಲ. ಆದ್ದರಿಂದ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಈ ಅಂಶಗಳನ್ನು ದಾಖಲಿಸಿಕೊಂಡಿದ್ದ ವಿಚಾರಣ್ಯಾ ನ್ಯಾಯಾಲಯ ಪರಿಹಾರ ಮೊತ್ತ ಸುಮಾರು 15.47 ಲಕ್ಷ ರು.ಗಳನ್ನು ವಾಹನದ ಮಾಲೀಕನಾದ ಮೆಹತಾಬ್ವುಲ್ಲಾ ಮೃತರ ಪೋಷಕರಿಗೆ ಪಾವತಿ ಮಾಡಬೇಕು ಎಂದು ಸೂಚನೆ ನೀಡಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮೆಹತಾಬ್ವುಲ್ಲಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣಾ ಸಮಿಯದಲ್ಲಿ ಹೈಕೋರ್ಟ್ ವಿಚಾರಣಾ ನ್ಯಾಯಾಲಯ ನೀಡಿದ್ದ ಪರಿಹಾರ ಮೊತ್ತವನ್ನು 15.47 ಲಕ್ಷ ರೂ.ಗಳನ್ನು 13.30 ಲಕ್ಷ ರೂ.ಗಳಿಗೆ ಇಳಿಕೆ ಮಾಡಿದೆ.
ಸುರಕ್ಷತೆ ಚಾಲಕನ ಹೊಣೆ: ಬಸ್ ನಿಲ್ದಾಣಗಳಂತಹ ಜನನಿಬಿಡ ಪ್ರದೇಶಗಳಲ್ಲಿ ಪಾದಚಾರಿಗಳು ಮತ್ತು ಪ್ರಯಾಣಿಕರ ಸುರಕ್ಷತೆ ಕಾಪಾಡುವ ಜವಾಬ್ದಾರಿ ವಾಹನ ಚಾಲಕರ ಮೇಲಿರಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮಂಗಳೂರಿನ ಬಸ್ ನಿಲ್ದಾಣವೊಂದರ ಮುಂದೆ ನಿಂತಿದ್ದ ತಮಿಳುನಾಡಿದ ದಿನಗೂಲಿ ನೌಕರನಿಗೆ ಬಸ್ನ ಹಿಂಬದಿ ಚಕ್ರ ಹರಿದು ಗಾಯಗೊಂಡಿದ್ದ ಪ್ರಕರಣದಲ್ಲಿ ಪರಿಹಾರ ಕೋರಿದ್ದ ವಜಾಗೊಳಿಸಿದ್ದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಎಚ್.ಬಿ. ಪ್ರಭಾಕರ ಶಾಸ್ತ್ರಿ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada