‘ಜೈ ಭೀಮ್’ ಪ್ರಭಾವಶಾಲಿ ಎಮೋಷನಲ್ ಕೋರ್ಟ್ ಡ್ರಾಮಾ;

ಭಾರತ ಸಂವಿಧಾನ ಕಾರ್ಯಾಂಗ, ಶಾಸಕಾಂಗದಷ್ಟೇ ನ್ಯಾಯಾಂಗವನ್ನುಕೂಡ ಅತ್ಯಂತ ಜವಾಬ್ದಾರಿಯುತವಾದ ವ್ಯವಸ್ಥೆಯಾಗಿ ಗುರುತಿಸಿದೆ. ದುರಂತವೆಂದರೆ ಯಾವ ನ್ಯಾಯವ್ಯವಸ್ಥೆ ಬಡವರು ದಲಿತರು, ಅಶಕ್ತರ ಪರವಾಗಿ ಧ್ವನಿಯಾಗಬೇಕು ಅದು ಅವರ ಪಾಲಿಗೆ ಗಗನ ಕುಸುಮವಾಗಿದೆ. ಒಬ್ಬ ಶ್ರೀಮಂತನ ಬೇಲ್ ಪಿಟಿಶನ್ ಗಂಟೆಗಳಲ್ಲಿ ವಿಚಾರಣೆ ಮಾಡಿ ಕ್ಷಣಗಳಲ್ಲಿ ಬೇಲ್ ಕೊಟ್ಟುಬಿಡುತ್ತಾರೆ.

ಅದೇ ಒಬ್ಬ ಅಶಕ್ತನ ಬೇಲ್ ಅಪ್ಲಿಕೇಶನ್ ತಿಂಗಳುಗಟ್ಟಲೆ ವಿಚಾರಣೆಗೆ ಕೂಡ ಬರುವುದಿಲ್ಲ. ಇದಕ್ಕೆ ಕಾನೂನಿನ ಒಳಗಿನ ಲೋಪದೋಷಗಳು ಆಗಬಹುದು, ನ್ಯಾಯ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವು ಆಗಬಹುದು ಅಥವಾ ಇನ್ಯಾವುದೇ ಕಾರಣಗಳು ಇರಬಹುದು.

ಬಡವರ ಪಾಲಿಗೆ ನ್ಯಾಯ ವ್ಯವಸ್ಥೆಯಲ್ಲಿ ಸಮರ್ಥವಾದ ನ್ಯಾಯ ಸಿಗುವುದು ಕಷ್ಟಕರ ಪರಿಸ್ಥಿತಿ ಹಿಂದಿನಿಂದಲೂ ಇದೆ.ಅಸಮಾನತೆಯ ಶ್ರೇಣಿಯಿಂದ ಕೂಡಿರುವ ಈ ವ್ಯವಸ್ಥೆಯ ವಿರುದ್ಧ ಬಡವ ಹೋರಾಟ ಮಾಡಿ ನ್ಯಾಯ ಪಡೆಯಬೇಕಾದ ದುಸ್ಥಿತಿಯಲ್ಲಿ ವ್ಯವಸ್ಥೆ ಇದೆ. ಸಣ್ಣಪುಟ್ಟ ಅಪರಾಧಗಳಿಗೂ ಕೂಡ ಬೇಲ್ ಸಿಗದೇ ವರ್ಷಗಳಿಂದ ಜೈಲಿನಲ್ಲೇ ಕುಳಿತಿರುವ ಅದೆಷ್ಟೋ ಜನರು ಇಂದಿಗೂ ಕೂಡ ನಮ್ಮ ಮಧ್ಯೆ ಇದ್ದಾರೆ. ಇಂಥ ಅಶಕ್ತ ಸಮುದಾಯಗಳ ಆಶೋತ್ತರಗಳಿಗೆ ಧ್ವನಿಯಾಗಿ ಮೂಡಿ ಬಂದಿರುವ ಚಿತ್ರವೇ ‘ಜೈ ಭೀಮ್’,

ವಿಮರ್ಶಕರಿಂದ ವ್ಯಾಪಕ ಪ್ರಶಂಸೆ
ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಿಂದ ಹಿಡಿದು ವಿಮರ್ಶಕರಿಂದ ವ್ಯಾಪಕ ಪ್ರಶಂಸೆಗೆ ಒಳಪಟ್ಟಿರುವ ‘ಜೈ ಭೀಮ್’ ಚಿತ್ರದಲ್ಲಿ ಸೂರ್ಯ, ಲಿಜೋಮೋಲ್ ಜೋಸ್, ಮಣಿಕಂಠನ್, ಪ್ರಕಾಶ್ ರಾಜ್, ರಾವ್ ರಮೇಶ್ ಅವರನ್ನು ಪ್ರಮುಖ ಪಾತ್ರಧಾರಿಗಳಾಗಿ ಕಾಣಬಹುದು. ಸಂವಿಧಾನ ಶ್ರೇಷ್ಠವಾದ ನ್ಯಾಯಾಂಗವನ್ನು ನಮಗೆ ನೀಡಿದೆ. ಆದ್ದರಿಂದಲೇ ಶ್ರೀಮಂತರು, ಮಧ್ಯಮವರ್ಗದವರು, ಬಡವರು ಯಾರೇ ಆಗಲಿ ನ್ಯಾಯ ಬಯಸಿದಾಗ ನ್ಯಾಯಾಲಯದ ಕಡೆಗೆ ನೋಡುತ್ತಾರೆ. ನ್ಯಾಯಾಲಯದ ಮುಂದೆ ಎಲ್ಲರೂ ಸರಿಸಮಾನರು. ಸಂವಿಧಾನ ಎಲ್ಲರಿಗೂ ನ್ಯಾಯದ ಹಕ್ಕನ್ನು ನೀಡಿದೆ ಮತ್ತು ಇದುನ್ಯಾಯಾಲಯಗಳಿಂದ ರಕ್ಷಿಸಲ್ಪಟ್ಟಿದೆ. ‘ಜೈ ಭೀಮ್’ ತಮಿಳುನಾಡಿನ ಕಡಲೂರಿನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಚಿತ್ರ. ಈ ಚಿತ್ರವನ್ನು ಜ್ಞಾನವೇಲ್ ನಿರ್ದೇಶಿಸಿದ್ದಾರೆ ಮತ್ತು ಸೂರ್ಯ ಮತ್ತು ಜ್ಯೋತಿಕಾ ನಿರ್ಮಿಸಿದ್ದಾರೆ. ಅಮೆಜಾನ್ ಪ್ರೈಮ್‌ನಿಂದ ಬಿಡುಗಡೆಯಾಗಿ ವ್ಯಾಪಕವಾದ ಜನಪ್ರಿಯತೆಯನ್ನು ಪಡೆದಿರುವ ‘ಜೈಭೀಮ್’ ವಿಶೇಷವಾದ ಒಂದು ಕೋರ್ಟ್ ಡ್ರಾಮಾ ಚಿತ್ರ.

ನೈಜಘಟನೆಗಳನ್ನು ಆಧಾರಿತ ಚಿತ್ರ

ಚಿತ್ರವು ನೈಜಘಟನೆಗಳನ್ನು ಆಧಾರಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ಬರುವ ಘಟನಾವಳಿಗಳು 1993 ರಲ್ಲಿ ಸಮಯದಲ್ಲಿ ನಡೆದದ್ದು ಆಗಿದೆ. ‘ಇರುಳ’ ಅಥವಾ ‘ಇರುಳಿಗ’ಮಧ್ಯ ತಮಿಳುನಾಡು ಪ್ರಾಂತದಲ್ಲಿ ನ ಒಂದು ಆದಿವಾಸಿ ಸಮುದಾಯ.ಈ ಸಮುದಾಯಕ್ಕೆ ಸೇರಿದ ಹೆಣ್ಣುಮಗಳೊಬ್ಬಳು ನ್ಯಾಯಕ್ಕಾಗಿ ಹೋರಾಟ ಮಾಡಿ ಪರಿ ಅದ್ಭುತ. ಆ ಘಟನಾವಳಿಗಳ ಒಟ್ಟು ಚಿತ್ರಣವೇ ಜೈ ಭೀಮ್.

ದಮನಿತರ ಧ್ವನಿ ಲಾಯರ್ ಚಂದ್ರು

ಇನ್ನು ‘ಜೈಭೀಮ್’ ಕಥೆಯೊಳಗೆ ನಾವು ಪ್ರವೇಶಿಸಿದರೆ ಜೈಲಿನಲ್ಲಿದ್ದ ಒಂದಷ್ಟು ಗಿರಿಜನರನ್ನು ಮತ್ತೆ ಅಕ್ರಮ ಕೇಸುಗಳ ಮೂಲಕ ಜೈಲಿಗೆ ಹಾಕುವ ಕೆಲಸಕ್ಕೆ ಪೊಲೀಸರು ಮುಂದಾಗುತ್ತಾರೆ. ಹಿರಿಯ ವ್ಯಕ್ತಿಯೊಬ್ಬ ಚೆನ್ನೈ ಕೋರ್ಟ್ ನಲ್ಲಿ ಪ್ರಾಕ್ಟಿಸ್ ಮಾಡುತ್ತಿರುವ ಲಾಯರ್ ಚಂದ್ರು (ಸೂರ್ಯ)
ಅವರ ಬಳಿಗೆ ಹೋಗಿ ಎಲ್ಲಾ ಘಟನೆಗಳನ್ನು ವಿವರಿಸಿ ಚಂದ್ರು ಮೂಲಕ ಹೈಕೋರ್ಟ್‌ನಲ್ಲಿ ದಾವೆ ಹೂಡುತ್ತಾರೆ. ಪೊಲೀಸರು ಅಕ್ರಮ ಪ್ರಕರಣ ದಾಖಲಿಸಿದ್ದಾರೆ ಎಂದು ಸಾಬೀತುಪಡಿಸಿ ರಾಜ್ಯದಲ್ಲಿ ಹದಿನೈದು ದಿನದಲ್ಲಿ 7000 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ ಎಂದು ಚಂದ್ರು ವಾದಿಸಿದ ನಂತರ ನ್ಯಾಯಾಲಯ, ಚಂದ್ರು ಅವರ ವಾದ ಸತ್ಯವೆಂದು ಅರಿತು ಅವರ ಪರವಾಗಿ ತೀರ್ಪು ನೀಡುತ್ತದೆ. ಬಡವರು ಮತ್ತು ಕಾರ್ಮಿಕರ ಪರವಾಗಿ ಚಂದ್ರು ಹೋರಾಡುವ ಹಿನ್ನಲೆಯನ್ನು ಇದರ ಮೂಲಕ ನಮ್ಮ ಮುಂದೆ ಚಿತ್ರ ತೆರೆದಿಡುತ್ತದೆ.

ಅಮಾಯಕ ಆದಿವಾಸಿಗಳ ಅರೆಸ್ಟ್

ಈ ಕ್ರಮದಲ್ಲಿ ಚಂದ್ರು ಅವರು ತೆಗೆದುಕೊಂಡು ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ನಡೆಸುವ ಒಂದು ಕಾನೂನಾತ್ಮಕ ಹೋರಾಟ. ನ್ಯಾಯಾಲಯದಲ್ಲಿ ಮೊಕ್ಕದ್ದಮೆ ಹೂಡಿದ ಆದಿವಾಸಿ ಮಹಿಳೆಯ ಹೋರಾಟದ ಕಥೆ ‘ಜೈ ಭೀಮ್’. ಒಂದು ಗ್ರಾಮದ ಅಧಿಕಾರ ಪಕ್ಷ ನಾಯಕನ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ ಆರೋಪದ ಮೇಲೆ ಗಿರಿಜನ ಸಮುದಾಯಕ್ಕೆ ಸೇರಿದ ರಾಜಾಕಣ್ಣು ಸೇರಿದಂತೆ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿ ಕರೆದುಕೊಂಡು ಹೋಗುತ್ತಾರೆ. ಈ ಆದಿವಾಸಿಗಳಿಗೆ ಇರಲು ಸರಿಯಾದ ಸೂರು ಇರುವುದಿಲ್ಲ, ರೇಷನ್ ಕಾರ್ಡ್ ಸಹ ಅವರ ಬಳಿ ಇರುವುದಿಲ್ಲ. ಇಂತಹ ಸಮುದಾಯಕ್ಕೆ ಸೇರಿದ ರಾಜಾಕಣ್ಣು ಅರೆಸ್ಟ್ ಮಾಡಿದ ಪೊಲೀಸರು ಸ್ಟೇಷನ್ನಲ್ಲಿ ವಿಚಾರಣೆ ಮಾಡುತ್ತಾರೆ. ಅದರ ಮಾರನೇ ದಿನ ಅವರು ಮೂವರು ನಾಪತ್ತೆಯಾಗುತ್ತಾರೆ.

‘ಇರುಳಿಗ’ ಆದಿವಾಸಿ ಸಮುದಾಯ

‘ಇರುಳಿಗ’ ಆದಿವಾಸಿ ಸಮುದಾಯಕ್ಕೆ ಸೇರಿದ ಇವರೆಲ್ಲಾ ಕಷ್ಟಪಟ್ಟು ದುಡಿಯುವಂತಹ ಆದಿವಾಸಿಗಳು. ಕಳ್ಳತನದ ಆರೋಪ ಹೊರಿಸಿ ಪೊಲೀಸರು ಇವರನ್ನು ಅರೆಸ್ಟ್ ಮಾಡಿದ ಆನಂತರದ ಘಟನಾವಳಿಗಳಿಂದ ಕಣ್ಮರೆಯಾಗುವಂತ ತನ್ನ ಗಂಡನ ಹುಡುಕಿಕೊಡುವಂತೆ ಹೋರಾಟ ಮಾಡುವ ಆದಿವಾಸಿ ಸಮುದಾಯದ ಹೆಣ್ಣು ಮಗಳಾದ ಸೆಂಗ್ಗೆನಿ (ಲಿಜೋ ಜೋಸ್) ಹೋರಾಟ ಅದಕ್ಕೆ ಬೆಂಬಲವಾಗಿ ನಿಲ್ಲುವ ಶಿಕ್ಷಕಿ ಮಿತ್ರ ಮತ್ತು ಈ ಆದಿವಾಸಿ ಸಮುದಾಯದ ಹೆಣ್ಣುಮಗಳಿಗೆ ಕಾನೂನಾತ್ಮಕವಾಗಿ ನ್ಯಾಯ ಕೊಡಿಸಲು ಲಾಯರ್ ಚಂದ್ರು ನ್ಯಾಯಾಲಯದಲ್ಲಿ ಹೋರಾಡುವ ದೃಶ್ಯಗಳೊಂದಿಗೆ ಕೂಡಿರುವ ನೈಜ ಘಟನಾವಳಿಗಳ ವಾಸ್ತವವನ್ನು ತೆರೆದಿಡುವುದೇ ಜೈ ಭೀಮ್ ಚಿತ್ರದ ಪೂರ್ಣ ಸಾರಾಂಶ.

ಇಮೇಜ್‌ಗೆ ಅಂಟಿಕೊಳ್ಳದೆ ಪಾತ್ರ ಮಾಡಿರುವ ಸೂರ್ಯ

ಸಾಧಾರಣವಾಗಿ ಸೂಪರ್ ಸ್ಟಾರ್ ಗಳೆಲ್ಲ ಒಂದು ಇಮೇಜ್‌ಗೆ ಆಂಟಿಕೊಂಡಿರುತ್ತಾರೆ ಮತ್ತು ಅಂತಹ ಪಾತ್ರಗಳನ್ನು ಮಾಡಲು ಬಯಸುತ್ತಾರೆ. ಆದರೆ ಪ್ರಯೋಗಾತ್ಮಕ ಚಿತ್ರಗಳನ್ನು ಮಾಡುವುದರಲ್ಲಿ ಸೂರ್ಯ ಸಿದ್ಧಹಸ್ತರು ಹಿಂದೆ ಅವರ ‘ಸುರರೈ ಪೊಟ್ರು’ ಚಿತ್ರದ ಮೂಲಕ ತಾವು ವಿಭಿನ್ನ ಚಿತ್ರಗಳನ್ನು ಮಾಡುವ ನಟ ಅಂತ ತೋರಿಸಿದರು. ಈಗ ಇದೇ ಜಾಡಿನಲ್ಲಿ ಮುಂದುವರೆದಿರುವ ಅವರು ವಕೀಲ ಚಂದ್ರು ಪಾತ್ರದ ಮೂಲಕ ನೈಜ ಅಭಿನಯವನ್ನು ನೀಡಿದ್ದಾರೆ. ನೈಜ ಘಟನಾವಳಿಗಳನ್ನು ಆಧಾರಿಸಿದ ಚಿತ್ರವಾದ ಕಾರಣ ಅದರ ನೈಜತೆಯನ್ನು ಚಿತ್ರದಲ್ಲೂ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದರಲ್ಲಿ ಚಂದ್ರು ಪಾತ್ರಧಾರಿಯಾಗಿ ಸೂರ್ಯ ಅವರದ್ದು ಅತ್ಯಂತ ಆಪ್ತವಾದ ಅಭಿನಯ.

ಬುಡಕಟ್ಟು ಯುವತಿಯಾಗಿ ಲಿಜೋ ಜೋಸ್

ಬುಡಕಟ್ಟು ಯುವತಿಯಾಗಿ ಲಿಜೋ ಜೋಸ್ ಅಭಿನಯ ಮನಮುಟ್ಟುತ್ತದೆ. ಈ ಸಿನಿಮಾದಲ್ಲಿ ಅವರೇ ಮುಖ್ಯ ನಾಯಕಿ ಎಂದೇ ಹೇಳಬೇಕು. ಚಿತ್ರದ ಸಂಪೂರ್ಣ ಭಾವನಾತ್ಮಕ ಭಾಗವು ಅವಳಿಂದ ಉಂಟಾಗುತ್ತದೆ. ಅವಳು ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ಮತ್ತು ಸಮಚಿತ್ತದಿಂದ ನಿರ್ವಹಿಸಿದ್ದಾಳೆ. ಸ್ವಲ್ಪ ಕಾಲ ರಾಜಾಕಣ್ಣು ಪಾತ್ರದಲ್ಲಿ ಕಾಣಿಸಿಕೊಂಡರೂ ಮಣಿಕಂಠನ್ ಕೂಡ ಚೆನ್ನಾಗಿಯೇ ನಟಿಸಿದ್ದಾರೆ. ಐಜಿಯಾಗಿ ಪ್ರಕಾಶ್ ರಾಜ್, ಸರ್ಕಾರಿ ಎಜಿಯಾಗಿ ರಾವ್ ರಮೇಶ್ ಮತ್ತು ಡಿಜಿಪಿಯಾಗಿ ಜಯಪ್ರಕಾಶ್ ಎಲ್ಲರೂ ತಮ್ಮ ಪಾತ್ರಕ್ಕೆ ತಕ್ಕಂತೆ ಜೀವಿಸಿದ್ದಾರೆ.

ಇಂತಹ ಭಾವನಾತ್ಮಕ ಕಥಾವಸ್ತುವಿನಲ್ಲಿ ಪ್ರತಿ ಪಾತ್ರದ ಅಭಿನಯ ಕೂಡ ಸಹಜವಾಗಿ ಇದ್ದಾಗಲೇ ಚಿತ್ರ ಮನಸ್ಸಿಗೆ ನೋಡುವುದು ಈ ವಿಚಾರದಲ್ಲಿ ಎಲ್ಲಾ ಪಾತ್ರಧಾರಿಗಳ ಅಭಿನಯವು ಕೂಡ ಸೂಕ್ಷ್ಮ ಮತ್ತು ಸಹಜವಾಗಿದ್ದರೆ ಮಾತ್ರ ಮಾತ್ರ ಮನಸ್ಸಿಗೆ ತಟ್ಟುತ್ತದೆ ಈ ವಿಚಾರದಲ್ಲಿ ಪಾತ್ರಧಾರಿಗಳು ಯಶಸ್ವಿಯಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏನೇ ಆಗಲಿ MES ಅನ್ನು ಬ್ಯಾನ್ ಮಾಡ್ಬೇಕು | Sa Ra Govindu | MES | Vatal Nagaraj | Speed News Kannada |

Wed Jan 5 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial