ಚಲನಚಿತ್ರಲೋಕದ ಮಹತ್ವದ ಕಲಾವಿದೆ ಜಯಂತಿ ಅಭಿನಯ ಶಾರದೆ ಎಂದು ಪ್ರಖ್ಯಾತರಾದವರು. ಜೇನು ಗೂಡು ಕನ್ನಡ ಚಿತ್ರದಿಂದ ಪ್ರಾರಂಭಿಸಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮತ್ತು ಮರಾಠಿ ಭಾಷೆಗಳಲ್ಲಿ ಒಟ್ಟು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಈ ತಾರೆಯ ಪ್ರತಿಭೆ ಅಸಾಧಾರಣವಾದದ್ದು.
ಜಯಂತಿ ಅವರು 1945ರ ಜನವರಿ 6ರಂದು ಜನಿಸಿದರು. ಬಳ್ಳಾರಿಯಲ್ಲಿ ಜನಿಸಿದ ಜಯಂತಿ ಅವರ ಅಂದಿನ ಹೆಸರು ಕಮಲಕುಮಾರಿ. ಚಿಕ್ಕಂದಿನಿಂದನಲ್ಲೇ ಜಯಂತಿ ಅವರು ತಂದೆಯಿಂದ ಬೇರ್ಪಟ್ಟು ತಾಯಿಯೊಡನೆ ಮದ್ರಾಸಿನಲ್ಲಿ ನೆಲೆಸಬೇಕಾಯಿತು. ತಮ್ಮ ಮಗಳು ಭರತನಾಟ್ಯ ಕಲಾವಿದೆಯಾಗಬೇಕೆಂಬ ಇಚ್ಛೆ ಹೊಂದಿದ್ದ ತಾಯಿ, ಆಕೆಯನ್ನು ಕಲಾವಿದೆ ಚಂದ್ರಕಲಾ ಅವರು ನಡೆಸುತ್ತಿದ್ದ ನೃತ್ಯ ಶಾಲೆಗೆ ಸೇರಿಸಿದರು. ದಕ್ಷಿಣ ಭಾರತ ಚಿತ್ರರಂಗದ ಮತ್ತೋರ್ವ ಪ್ರಖ್ಯಾತ ನಟಿ ಮನೋರಮಾ ಜಯಂತಿ ಅವರಿಗೆ ನೃತ್ಯ ತರಗತಿಯ ಸಹಪಾಠಿಯಾಗಿದ್ದರು.
ಒಮ್ಮೆ ತಮಿಳು ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸುವಾಗ ಅಂದಿನ ಪ್ರಖ್ಯಾತ ನಟಿ ಸಾವಿತ್ರಿ, ಈ ಹೊಸ ನಟಿ ಜಯಂತಿಗೆ ಸಣ್ಣ ಸಂಭಾಷಣೆ ಕೂಡ ಹೇಳಲು ಬರುವುದಿಲ್ಲ ಎಂದು ಸಿಟ್ಟಿನಿಂದ ಆಚೆ ನಡೆದರಂತೆ. ಆ ಘಟನೆಯಿಂದ ವಿಚಲಿತರಾದರೂ ಮುಂದೆ ಅದನ್ನೇ ಗಂಭೀರ ಸವಾಲಾಗಿ ಸ್ವೀಕರಿಸಿ, ನಾನು ಉತ್ತಮ ನಟಿಯಾಗಿಯೇ ಆಗುತ್ತೇನೆ ಎಂದು ದೃಢಸಂಕಲ್ಪ ಹೊಂದಿದ ಜಯಂತಿ ಅಭಿನಯ ಶಾರದೆ ಎಂಬ ಮೆಚ್ಚುಗೆಗೆ ಪಾತ್ರರಾಗಿದ್ದು ಈಗ ಇತಿಹಾಸ. ಕನ್ನಡದ ಮೇರು ನಟ ಡಾ. ರಾಜಕುಮಾರ್ ಅವರ ಜೊತೆಯಲ್ಲೇ 36 ಚಿತ್ರಗಳಲ್ಲಿ ಅವರು ನಾಯಕಿಯಾಗಿ ಅಭಿನಯಿಸಿದ್ದರು.
ಕನ್ನಡದ ಪ್ರಖ್ಯಾತ ಸಿನಿಮಾ ನಿರ್ದೇಶಕರಾದ ವೈ.ಆರ್. ಸ್ವಾಮಿ, ಅಂದಿನ ಈ ಕಮಲ ಕುಮಾರಿಯನ್ನು ನೃತ್ಯ ಕಾರ್ಯಕ್ರಮದ ತಾಲೀಮಿನ ಸಂದರ್ಭವೊಂದರಲ್ಲಿ ಗುರುತಿಸಿ, ‘ಜೇನುಗೂಡು’ ಚಿತ್ರದಲ್ಲಿ ಜಯಂತಿ ಎಂಬ ಹೊಸ ಹೆಸರಿನಿಂದ ಪರಿಚಯಿಸಿದರು. ಈ ಚಿತ್ರದಲ್ಲಿ ಜಯಂತಿಯವರು ಅಶ್ವಥ್ ಮತ್ತು ಪಂಡರೀಬಾಯಿ ಅವರೊಂದಿಗೆ ನಟಿಸಿದ್ದರು. ‘ಜೇನುಗೂಡು ಚಿತ್ರ’ ಅಪಾರ ಯಶಸ್ಸು ಗಳಿಸಿತು. ಜಯಂತಿಯವರ ಎರಡನೇ ಚಿತ್ರ ತರಾಸು ಅವರ ಕಾದಂಬರಿ ಆಧಾರಿತ ಚಿತ್ರ ‘ಚಂದವಳ್ಳಿಯ ತೋಟ’. ಈ ಚಿತ್ರದಲ್ಲಿ ಜಯಂತಿಯವರು ಉದಯಕುಮಾರ್, ರಾಜಕುಮಾರ್ ಮತ್ತು ಜಯಶ್ರೀ ಅವರೊಂದಿಗೆ ನಟಿಸಿದರು. ‘ಚಂದವಳ್ಳಿಯ ತೋಟ’ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಚಿತ್ರವೆಂದು ರಾಷ್ಟ್ರಪತಿಗಳ ಪದಕ ಪಡೆಯಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: