ಮುಂಬೈ: ಸದಾ ಬಿಜೆಪಿಯನ್ನು ಬೆಂಬಲಿಸುವ ನಟಿ ಕಂಗನಾ ರಣಾವತ್ ಅವರ ಕಚೇರಿ ‘ಮಣಿಕರ್ಣಿಕಾ’ ಕಟ್ಟಡವನ್ನು ಅಲ್ಲಿನ ಪಾಲಿಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೂಚನೆ ಮೇರೆಗೆ ಕಳೆದ ವರ್ಷ ನೆಲಸಮಗೊಳಿಸಿತ್ತು. ಈ ವೇಳೆ ರೊಚ್ಚಿಗೆದ್ದಿದ್ದ ಕಂಗನಾ ಮಣಿಕರ್ಣಿಕಾ ಕಚೇರಿಯನ್ನು ಕೆಡವಿದ್ದೀರಿ, ಇಂದು ನನ್ನ ಮನೆ ಮುರಿದಿದೆ, ನಾಳೆ ನಿಮ್ಮ ಅಹಂಕಾರವೂ ಮುರಿಯಲಿದೆ ಎಂದು ನೇರವಾಗಿಯೇ ಟ್ವಿಟರ್ ಮೂಲಕ ಅಸಮಾಧಾನ ಹೊರಹಾಕಿದ್ದರು.
ಇದೀಗ ಠಾಕ್ರೆ ಅವರು ರಾಜೀನಾಮೆ ನೀಡುವ ಸ್ಥಿತಿ ಬಂದಿದ್ದರಿಂದ ಅವರ ಹಳೆಯ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಇದರ ನಡುವೆಯೇ ನಟಿ ಕಂಗನಾ ಇದೀಗ ಮತ್ತೆ ಆಕ್ರೋಶ ಹೊರಹಾಕಿದ್ದಾರೆ. ಠಾಕ್ರೆ ರಾಜೀನಾಮೆ ನೀಡಿ, ಅದು ರಾಜ್ಯಪಾಲರಿಂದ ಅಂಗೀಕಾರ ಆಗಿರುವ ಹಿನ್ನೆಲೆಯಲ್ಲಿ ನಟಿ ಮತ್ತೊಮ್ಮೆ ಟ್ವೀಟ್ ಮಾಡಿ ಟೀಕಿಸಿದ್ದಾರೆ. ಈಗ ಅವರು ಹನುಮಾನ್ ಚಾಲೀಸಾದ ಕುರಿತು ಹೇಳಿದ್ದಾರೆ.
ಠಾಕ್ರೆ ಈ ಹಿಂದೆ ಹನುಮಾನ್ ಚಾಲೀಸಾವನ್ನು ಬ್ಯಾನ್ ಮಾಡಿ ಎಂದು ಪದೇಪದೇ ಸೂಚನೆ ನೀಡಿದ್ದರು. . ಇದನ್ನು ಉಲ್ಲೇಖಿಸಿರುವ ನಟಿ ಕಂಗನಾ, ಹನುಮಾನ್ ಚಾಲೀಸಾವನ್ನು ಬ್ಯಾನ್ ಮಾಡಲು ಹೊರಟಿದ್ರಲ್ವಾ? ಈಗ ಗೊತ್ತಾಯ್ತಾ ಅದರ ತಾಕತ್ತು. ಹನುಮಂತನನ್ನು ಶಿವನ 12ನೇ ಅವತಾರ ಎಂದು ಹೇಳಲಾಗುತ್ತದೆ. ಶಿವ ಸೇನೆಯೇ ಹನುಮಾನ್ ಚಾಲೀಸಾವನ್ನು ಬ್ಯಾನ್ ಮಾಡಿದರೆ ಅವರನ್ನು ಸ್ವತಃ ಶಿವನೂ ಕಾಪಾಡಲು ಸಾಧ್ಯವಿಲ್ಲ ಎಂದ ನಟಿ, ಹರಹರ ಮಹದೇವ್ ಎಂದು ಬರೆದುಕೊಂಡಿದ್ದಾರೆ.
‘1975ರ ಬಳಿಕ ಇತಿಹಾಸದಲ್ಲಿ ಇದು ತುಂಬ ಮಹತ್ವವಾದ ಸಮಯ. 1975ರಲ್ಲಿ ಜೆಪಿ ನಾರಾಯಣ್ ಅವರ ಘೋಷಣೆಯಿಂದ ಸಿಂಹಾಸನ ಅಲುಗಾಡಿತ್ತು. ಪ್ರಜಾಪ್ರಭುತ್ವ ಎಂಬುದು ಒಂದು ವಿಶ್ವಾಸ. ಅಧಿಕಾರದ ಅಹಂಕಾರದಿಂದ ಆ ವಿಶ್ವಾಸವನ್ನು ಮುರಿದರೆ ಅಂಥವರ ಪ್ರತಿಷ್ಠೆ ನುಚ್ಚುನೂರಾಗುತ್ತದೆ ಎಂದು ನಾನು 2020ರಲ್ಲೇ ಹೇಳಿದ್ದೆ. ಇದು ಯಾವುದೇ ವ್ಯಕ್ತಿಯ ಶಕ್ತಿ ಅಲ್ಲ. ಇದು ಚರಿತ್ರೆಯ ಶಕ್ತಿ’ ಎಂದಿದ್ದಾರೆ ಕಂಗನಾ ರಣಾವತ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada