ಉಡುಪಿ, ಫೆಬ್ರವರಿ 08: ಕರ್ನಾಟಕದಲ್ಲಿ ಹಿಜಾಬ್ ಪ್ರಕರಣವು ಭಾರೀ ಸುದ್ದಿ ಆಗುತ್ತಿದೆ. ಹಲವಾರು ಕಡೆಗಳಲ್ಲಿ ಈ ವಿವಾದವು ಹಿಂಸಾಚಾರಕ್ಕೆ ತಿರುಗುತ್ತಿದೆ. ಈ ನಡುವೆ ಕರ್ನಾಟಕದ ಕರಾವಳಿ ಭಾಗದ ಮೂರು ಕಾಲೇಜುಗಳಲ್ಲಿ ರಜೆಯನ್ನು ಘೋಷಣೆ ಮಾಡಲಾಗಿದೆ.ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲುಗಳು ಮತ್ತು ಕೇಸರಿ ಪೇಟಾ ಮತ್ತು ಹಿಜಾಬ್ನೊಂದಿಗೆ ಆಗಮಿಸುತ್ತಿರುವುದು ಹಿನ್ನೆಲೆ ಕರ್ನಾಟಕದ ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಮೂರು ಕಾಲೇಜುಗಳಿಗೆ ಫೆಬ್ರವರಿ 8 ರಂದು ರಜೆ ಘೋಷಣೆ ಮಾಡಲಾಗಿದೆ.ಉಡುಪಿಯ ಮಹಾತ್ಮಗಾಂಧಿ ಸ್ಮಾರಕ ಹಾಗೂ ಪದವಿ ಪೂರ್ವ ಕಾಲೇಜುಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ರಜೆ ಘೋಷಿಸಲಾಗಿದೆ. 1949 ರಲ್ಲಿ ಸ್ಥಾಪಿತವಾದ ಎಂಜಿಎಂ ಪದವಿ ಕಾಲೇಜು NAAC ನಿಂದ A ದರ್ಜೆಯ ಮಾನ್ಯತೆ ಪಡೆದ ಕಾಲೇಜಾಗಿದೆ ಮತ್ತು ಇದು ಕರಾವಳಿಯಲ್ಲಿ ಪ್ರಸಿದ್ಧ ಕಾಲೇಜು ಆಗಿದೆ ಎಂಬುವುದನ್ನು ನಾವು ಇಲ್ಲಿ ಸ್ಮರಿಸಬಹುದು.ಕೆಲವು ಹುಡುಗರು ಕೇಸರಿ ಪೇಟಾ ಮತ್ತು ಶಾಲುಗಳನ್ನು ಧರಿಸಿದ್ದರು ಮತ್ತು ಕೆಲವು ಹುಡುಗಿಯರು ಕೇಸರಿ ಶಾಲು ಹಾಗೂ ಹಿಜಾಬ್ ಅನ್ನು ಧರಿಸಿರುವುದು ಎಂಜಿಎಂ ಕಾಲೇಜುಗಳ ಆವರಣದಲ್ಲಿ ಕಂಡು ಬಂದಿತ್ತು. ಕಾಲೇಜು ಆವರಣದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಪರಸ್ಪರ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಮುಂಜಾನೆ ಕೆಲಕಾಲ ಕಾಲೇಜು ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಕಾಲೇಜಿನಲ್ಲಿ ರಜೆ ಘೋಷಣೆ ಮಾಡಲಾಗಿದ್ದು, ಈ ಬೆನ್ನಲ್ಲೇ ಪರಿಸ್ಥಿತಿ ಶಾಂತವಾಯಿತು. ವಿದ್ಯಾರ್ಥಿಗಳು ಕ್ರಮೇಣ ಸ್ಥಳದಿಂದ ತೆರಳಿದ್ದಾರೆ. ಎಂಜಿಎಂ ಪದವಿ ಕಾಲೇಜು ಪ್ರಾಂಶುಪಾಲ ದೇವಿದಾಸ ನಾಯ್ಕ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, “ಕ್ಯಾಂಪಸ್ ಆರೋಗ್ಯಕರ ಸ್ಥಳವಾಗಿದೆ. ವ್ಯವಸ್ಥಾಪನಾ ಸಮಿತಿಯು ತರಗತಿಗಳನ್ನು ಪುನರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರೆಗೆ ಕಾಲೇಜುಗಳು, ಪದವಿ ಪೂರ್ವ ಮತ್ತು ಪದವಿ ವಿಭಾಗಗಳೆರಡೂ ಮುಚ್ಚಲಾಗುತ್ತದೆ. ವಸ್ತ್ರ ಸಂಹಿತೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್ನ ತೀರ್ಪನ್ನು ಕಾಲೇಜುಗಳು ಗೌರವಿಸುತ್ತವೆ,” ಎಂದು ತಿಳಿಸಿದ್ದಾರೆ.ಇನ್ನು ಈ ನಡುವೆ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದರಿಂದ ವಿದ್ಯಾರ್ಥಿಗಳು ಶಾಲು ಮತ್ತು ಪೇಟಾ ಧರಿಸಿದ್ದರು ಎಂದು ಕೇಸರಿ ಶಾಲು ಹೊದ್ದುಕೊಂಡಿದ್ದ ವರ್ಷಿ ಎಂಬ ವಿದ್ಯಾರ್ಥಿನಿ ಉಡುಪಿಯ ಕಾಲೇಜಿನ ಹೊರಗೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. “ಕಾಲೇಜು ತರಗತಿಗಳಲ್ಲಿ ಶಾಲು ಅಥವಾ ಹಿಜಾಬ್ಗಳನ್ನು ಅನುಮತಿಸಲಾಗುವುದಿಲ್ಲ ಎಂದು ಕಾಲೇಜು ಫೆಬ್ರವರಿ 7 ರಂದು ವಿದ್ಯಾರ್ಥಿಗಳಿಗೆ ತಿಳಿಸಿತ್ತು. ಆದರೆ ಕೆಲವು ವಿದ್ಯಾರ್ಥಿಗಳು ಫೆಬ್ರವರಿ 8 ರಂದು ಹಿಜಾಬ್ ಧರಿಸಿ ಬಂದಿದ್ದರು. ಆದ್ದರಿಂದ, ನಾವು ಕೂಡ ಕೇಸರಿ ಶಾಲುಗಳನ್ನು ಧರಿಸಿದ್ದೇವೆ. ನಾವು ಸಮಾನತೆಯನ್ನು ಬಯಸುತ್ತೇವೆ,” ಎಂದು ವಿದ್ಯಾರ್ಥಿನಿ ಹೇಳಿದ್ದಾರೆ.ಇನ್ನು ಈ ಹಿಂದೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದರೇ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದಾಗ, “ಈ ಹಿಂದೆ ಹಿಜಾಬ್ ಧರಿಸುತ್ತಿದ್ದರು. ಆದರೆ ಈಗ ಸರ್ಕಾರದ ಆದೇಶದ ಪ್ರಕಾರ, ಕಾಲೇಜುಗಳಲ್ಲಿ ಹಿಜಾಬ್ ಧರಿಸುವಂತಿಲ್ಲ,” ಎಂದಿದ್ದಾರೆ.ಈ ನಡುವೆ ಫೆಬ್ರವರಿ 8 ರಂದು ಬಂಟ್ವಾಳ ತಾಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಮತ್ತು ಬಾಲಕಿಯರು ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ. ಹಾಗೆಯೇ ಕಾಲೇಜು ತರಗತಿಯೊಳಗೆ ಹಿಜಾಬ್ ಹಾಕಬಾರದು ಎಂದು ಘೋಷಣೆ ಕೂಗಿದರು. ಪರಿಸ್ಥಿತಿ ಉದ್ವಿಗ್ನವಾಗುತ್ತಿರುವುದನ್ನು ಗಮನಿಸಿ ಎರಡು ದಿನ ಕಾಲೇಜಿಗೆ ರಜೆ ಘೋಷಿಸಲಾಗಿದೆ.ದಿ ಹಿಂದೂ ಜೊತೆ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ (ಆಡಳಿತ) ಸಿ.ಕೆ.ಕಿಶೋರ್ ಕುಮಾರ್, “ಈಗಾಗಲೇ ತರಗತಿಗಳು ತಡವಾಗಿ ನಡೆಯುತ್ತಿದೆ. ಅಡಚಣೆಯನ್ನು ತಪ್ಪಿಸಲು ರಜೆ ಘೋಷಿಸಿದ ಕಾಲೇಜುಗಳಿಗೆ ಆನ್ಲೈನ್ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ. ಲಾಕ್ಡೌನ್ಗಳು ಮತ್ತು ಕೋವಿಡ್ ನಿರ್ಬಂಧಗಳ ಹಿನ್ನೆಲೆ ಈಗಾಗಲೇ ತರಗತಿಗಳು ವಿಳಂಬವಾಗಿದೆ. ಶೈಕ್ಷಣಿಕ ವಾತಾವರಣವು ಹಾಳಾಗಿರುವುದು ದುರದೃಷ್ಟಕರ,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸುಮಾರು ಒಂದು ತಿಂಗಳ ಹಿಂದೆ ದಕ್ಷಿಣ ಕನ್ನಡದ ಇನ್ನೊಂದು ಪದವಿ ಕಾಲೇಜು, ಐಕಳದ ಪೊಂಪೈ ಕಾಲೇಜಿನಲ್ಲಿ ಈ ವಿವಾದ ಕಾಣಿಸಿಕೊಂಡಿತ್ತು. ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಿ ಕಾಲೇಜಿಗೆ ಆಗಮಿಸಲು ಒಪ್ಪಿದ ಬಳಿಕ ಸಮಸ್ಯೆ ಬಗೆಹರಿಯಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada