ಉದ್ಘಾಟನೆಯಾದ ದಿನದಿಂದಲೂ ಒಂದಿಲ್ಲೊಂದು ಕಾರಣಕ್ಕೆ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ ಚರ್ಚೆಗೆ ಗ್ರಾಸವಾಗುತ್ತಲೇ ಇದೆ. ಕೆಲವರು ಎಕ್ಸ್ಪ್ರೆಸ್ವೇಯಿಂದ ಸಾಕಷ್ಟು ಅನುಕೂಲ ಆಗಿದೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ವಿವಿಧ ಕಾರಣಗಳನ್ನು ನೀಡಿ ಟೀಕೆ ಮಾಡುತ್ತಲೇ ಇದ್ದಾರೆ.
ಇದೀಗ ಬಿಗ್ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಆ ಮಾರ್ಗದಲ್ಲಿ ಪ್ರಯಾಣಿಸಿ ವಿಡಿಯೋ ಮಾಡಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಮಾರ್ಚ್ 12ರಂದು ಪ್ರಧಾನಿ ಮೋದಿ ಬೆಂಗಳೂರು ಮೈಸೂರು ಹೆದ್ದಾರಿಯನ್ನು ಲೋಕಾರ್ಪಣೆಗೊಳಿಸಿದ್ದರು. ಸುಗಮ ಸಂಚಾರಕ್ಕಾಗಿ 118 ಕಿ.ಮೀ ಉದ್ದದ ಬೆಂಗಳೂರು – ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಈ ಹೆದ್ದಾರಿಯ ಮೂಲಕ ಬೆಂಗಳೂರಿನಿಂದ ಮೈಸೂರಿಗೆ ಒಂದೂವರೆ ಗಂಟೆಯಲ್ಲಿ ತಲುಪಬಹುದಾಗಿದೆ. ಆದರೆ ರಸ್ತೆಯ ಟೋಲ್ ದರದ ಬಗ್ಗೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದರು. ರಸ್ತೆ ಮಾರ್ಗವಾಗಿ ಸಂಚರಿಸುವವರು ತಟ್ಟೆ ಇಡ್ಲಿ, ಮದ್ದೂರು ವಡೆ ತಿನ್ನಲು ಸಾಧ್ಯವಾಗುತ್ತಿಲ್ಲ. ಇದರಿಂದ ಹೋಟೆಲ್ನವರಿಗೂ ನಷ್ಟ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದೇ ವಿಚಾರವಾಗಿ ಕೀರ್ತಿ ತಮ್ಮ ಅಭಿಪ್ರಾಯ ಬಿಚ್ಚಿಟ್ಟಿದ್ದಾರೆ.
“ನನಗೂ ಈ ರಸ್ತೆಯ ಬಗ್ಗೆ ಸುಮಾರು ಸಮಸ್ಯೆಗಳಿವೆ ಎಂದು ಹೇಳಿದ್ದರು. ನಾನು ಕೂಡ ಅಯ್ಯೋ ಇಷ್ಟೆಲ್ಲಾ ಸಮಸ್ಯೆ ಇದ್ಯಾ? ಎಂದುಕೊಂಡಿದ್ದೆ. ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಪ್ರಯಾಣ ಬೆಳೆಸಿದೆ. ಹೋಗಿ ಸಂಸದ ಪ್ರತಾಪ್ ಸಿಂಹ ಅವರೊಟ್ಟಿಗೆ ಚರ್ಚೆ ನಡೆಸಿದೆ. ಅವರು ಎಲ್ಲದರ ಬಗ್ಗೆ ವಿವರಣೆ ನೀಡಿದರು. ನಂತರ ಆ ರಸ್ತೆಯಲ್ಲಿ ಪ್ರಯಾಣದ ಅನುಭವ ಹೇಗಿದೆ ಅನ್ನೋದನ್ನು ನೋಡಲು ಅದೇ ರಸ್ತೆಯಲ್ಲಿ ಬಂದೆ. ನಿಜ ಹೇಳ್ತೀನಿ ನಮ್ಮ ಜನರಿಗೆ ಚೂರು ತಲೆ ಇಲ್ಲ. ಎಲ್ಲರಿಗೂ ಹೇಳುತ್ತಿಲ್ಲ. ವಿರೋಧ ಮಾಡುವವರಿಗೆ ಹೇಳ್ತಿದ್ದೀನಿ. ರಾಜಕೀಯವಾಗಿ ಇದನ್ನು ನೋಡುವುದು ಸರಿಯಿಲ್ಲ”
“ಅಭಿವೃದ್ಧಿಗೆ ವಿರುದ್ಧವಾಗಿ ಜನ ಈ ಮಟ್ಟಿಗೆ ಹೋಗಿದ್ದನ್ನು ನಾನು ಯಾವತ್ತು ನೋಡಿಲ್ಲ. ಯಾಕೆ ಈ ಮಾತು ಹೇಳ್ತಿದ್ದೀನಿ ಅಂದ್ರೆ, ಏನ್ರೀ ಈ ರೋಡ್, ಸಕತ್ತಾಗಿದೆ. ಅದ್ಭುತವಾಗಿದೆ. ನಿಜ ಹೇಳ್ತೀನಿ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದು ಗೊತ್ತೇ ಆಗಲಿಲ್ಲ. ಅಷ್ಟು ಅದ್ಭುತವಾದ ರಸ್ತೆ. ಇಂತಹ ರಸ್ತೆಯನ್ನು ಯಾಕೆ ವಿರೋಧಿಸುತ್ತಾರೆ ಎಂದು ನೋಡಿದರೆ ಗೊತ್ತಾಗಿದ್ದು ರಾಜಕೀಯ. ಮೊದಲು ಎಲ್ಲರೂ ತಮ್ಮದು ತಮ್ಮದು ಎಂದು ಹೇಳಿಕೊಳ್ಳಲು ಆರಂಭಿಸಿದರು. ಯಾವಾಗ ಆಗಲ್ಲ ಎಂದು ಗೊತ್ತಾಯ್ತೋ ಆಗ ವಿರೋಧಿಸಲು ಆರಂಭಿಸಿದರು.”
“ಟೋಲ್ ಟೋಲ್ ಟೋಲ್ ಅಂತ ಹೇಳ್ತಾರೆ. ಟೋಲ್ ಇಲ್ಲದೇ ಯಾವ ರಸ್ತೆ ಮಾಡಲು ಸಾಧ್ಯ? ನೆಲಘಟ್ಟದಿಂದ ಬೆಂಗಳೂರುವರೆಗಿನ ರಸ್ತೆಗೆ ಟೋಲ್ ತಗೋತ್ತಿದ್ದಾರೆ. ಟೋಲ್ ಕೊಡುತ್ತೀರಾ ಸರಿ. 120 ಕಿಲೋ ಮೀಟರ್ ಪ್ರಯಾಣಿಸುವಾಗ ಎಷ್ಟು ಇಂಧನ ಉಳಿಯುತ್ತೆ ಗೊತ್ತಾ? ಮಾಮೂಲಿ ಮಾರ್ಗದಲ್ಲಿ ಬಂದರೆ ಕ್ಲಚ್ ಹಿಡ್ದು ಗೇರ್ ಬದಲಿಸಿ ಎಷ್ಟು ಇಂಧನ ವ್ಯರ್ಥ ಆಗುತ್ತದೆ. ಅಷ್ಟೇ ಅಲ್ಲ 4 ಗಂಟೆ ಇಂಜಿನ್ ಆನ್ ಅಲ್ಲಿ ಇರೋದಕ್ಕೂ ಒಂದೂವರೆ ಗಂಟೆ ಆನ್ ಇರೋದಕ್ಕೂ ವ್ಯತ್ಯಾಸ ಇದೆ. ಪ್ರಯಾಣದ ವೇಳೆ ಕ್ಲಚ್, ಬ್ರೇಕ್ ಹಿಡಿಯುವಂತಿಲ್ಲ. ಸರ್ವಿಸ್ ರೋಡ್ ಕೂಡ ಇದೆ. ಸಣ್ಣ ಸಮಸ್ಯೆ ಇದೆ ಅದು ಸರಿ ಹೋಗುತ್ತದೆ.”
“ನಾನು ಅತ್ತ ಇತ್ತ ಹೋಗೋಕ್ಕಾಗಲ್ಲ, ತಟ್ಟೆ ಇಡ್ಲಿ ತಿನ್ನೋಕೆ ಆಗಲ್ಲ ಅಂದುಕೊಂಡಿದ್ದೆ. ಆದರೆ ಅಲ್ಲಿ ಹೋದಮೇಲೆ ಗೊತ್ತಾಯಿತು ಆ ತರ ಇಲ್ಲ ಅಂತ. ನಾನು ಕೂಡ ಬಿಡದಿ ತಟ್ಟೆ ಇಡ್ಲಿ ತಿಂದೆ. ಯಾಕೆ ಸುಖಾಸುಮ್ಮನೆ ಇಲ್ಲದನ್ನೆಲ್ಲಾ ಹೇಳ್ತೀರಾ. ಸಮಸ್ಯೆ ಆಗುತ್ತದೆ. ಮೊಬೈಲ್ ಬಂದ್ರೆ ಎಸ್ಟಿಡಿ ಬೂತ್ ಹೋಗುತ್ತೆ ಅಂದುಕೊಂಡರೆ ಮೊಬೈಲ್ ಬಳಸಲು ಆಗುತ್ತಿರಲಿಲ್ಲ. ಹೆದ್ದಾರಿ ಬಿಟ್ಟು ಹಳೇ ರಸ್ತೆ ಕೂಡ ಇದೆ. ಆ ಮಾರ್ಗದಲ್ಲಿ ನೀವು ಅಲ್ಲಲ್ಲಿ ಗಾಡಿ ನಿಲ್ಲಿಸಿ, ಏನು ಬೇಕೋ ತಿಂದು ಹೋಗಬಹುದು. ಟೋಲ್ ಬೇಡ ಅಂದ್ರೆ ಹಳೇ ಮಾರ್ಗದಲ್ಲೇ ಹೋಗಬಹುದು. ಎಕ್ಸ್ಪ್ರೆಸ್ ವೇ ಆಗಿರುವುದರಿಂದ 130 ರೂ. ಟೋಲ್ ಕಟ್ಟಿ ಓಡಾಡಿ.”
“ಬೆಂಗಳೂರು ಮೈಸೂರು ರಸ್ತೆ ಬಹಳ ಚೆನ್ನಾಗಿದೆ. ಆರಾಮಾಗಿ ಓಡಾಡಿ, ಇಲ್ಲಿ ರೇಸ್ ಬೇಡ” ಎಂದು ಕಿರಿಕ್ ಕೀರ್ತಿ ಕಿವಿಮಾತು ಹೇಳಿದ್ದಾರೆ. ರಾಜಕೀಯಕ್ಕಾಗಿ ಸುಮ್ಮನೆ ಟೀಕೆ ಬೇಡ ಎಂದಿದ್ದಾರೆ. ಇನ್ನು ಫೇಸ್ಬುಕ್ನಲ್ಲಿ ವಿಡಿಯೋ ಮಾಡಿ ಶೇರ್ ಮಾಡಿರುವ ಕೀರ್ತಿ, ಕಾಮೆಂಟ್ ಸೆಕ್ಷನ್ ಆಫ್ನಲ್ಲೇ ಮುಂದುವರೆಸಿದ್ದಾರೆ. “ಒಂದು ವರ್ಷದ ಹಿಂದೇನೇ ಕಮೆಂಟ್ ಸೆಕ್ಷನ್ ಆಫ್ ಮಾಡಿದೀನಿ…ಕಾರಣ ನೀವೆ…ಸೈದ್ದಾಂತಿಕ ವಿಚಾರಗಳನ್ನ ಪರ್ಸನಲ್ ಆಗಿ ತಗೋತೀರಿ…ಕೆಟ್ಟ ಕೊಳಕಾ ಮಾತಾಡ್ತೀರಿ… ಏನಾದ್ರೂ ಹೇಳ್ಬೇಕಾ..? ವೀಡಿಯೋ ಶೇರ್ ಮಾಡಿ ಹೇಳಿ” ಎಂದು ಕಾಮೆಂಟ್ ಮಾಡಿ ಸುಮ್ಮನಾಗಿದ್ದಾರೆ. ಕಿರಿಕ್ ಕೀರ್ತಿ ವಿಡಿಯೋವನ್ನು ಸಂಸದ ಪ್ರತಾಪ್ ಸಿಂಹ ಕೂಡ ಶೇರ್ ಮಾಡಿದ್ದಾರೆ.
https://play.google.com/store/apps/details?id=com.speed.newskannada