ಖಾಸಗಿ ಹೋಟೆಲ್ನಲ್ಲಿ ‘ಕ್ರಾಂತಿ’ ಸಕ್ಸಸ್ ಮೀಟ್ ಭರ್ಜರಿಯಾಗಿ ನೆರವೇರಿದೆ. ಇಡೀ ಚಿತ್ರತಂಡ ಭಾಗಿಯಾಗಿ ಸಕ್ಸಸ್ ಸಂತಸ ಹಂಚಿಕೊಂಡಿದೆ. ಕೇಕ್ ಕತ್ತರಿಸಿ ಕುಣಿದು ಸಂಭ್ರಮಿಸಿದೆ. ಜೊತೆಗೆ ಚಿತ್ರವನ್ನು ಗೆಲ್ಲಿಸಿದ ಎಲ್ಲರಿಗೂ ಚಿತ್ರತಂಡ ಧನ್ಯವಾದ ತಿಳಿಸಿದೆ.
ಗಣರಾಜ್ಯೋತ್ಸವ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ ‘ಕ್ರಾಂತಿ’ ಸಿನಿಮಾ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ವಿ. ಹರಿಕೃಷ್ಣ ನಿರ್ದೇಶನದ ಆಕ್ಷನ್ ಎಂಟರ್ಟೈನರ್ ಸಿನಿಮಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡ್ತಿದೆ. ದರ್ಶನ್ ಒನ್ಮ್ಯಾನ್ ಶೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಭಿಮಾನಿಗಳು ಕೇಳುವ ಕಮರ್ಷಿಯಲ್ ಅಂಶಗಳ ಜೊತೆಗೆ ಒಂದೊಳ್ಳೆ ಸಂದೇಶವನ್ನು ಹೊತ್ತು ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಸಿನಿಮಾ ಕಲೆಕ್ಷನ್ ಮಾಡ್ತಿಲ್ಲ ಎನ್ನುವವರಿಗೆ ಸಕ್ಸಸ್ ಮೀಟ್ನಲ್ಲಿ ತಂಡ ಉತ್ತರ ನೀಡಿದೆ.
“25ನೇ ಸಿನಿಮಾ ಭೂಪತಿ ಮ್ಯಾಟನಿ ಶೋಗೆ ಬಿದ್ದು ಹೋಯ್ತು”: ಸೋಲು ಎಂದವ್ರಿಗೆ ದರ್ಶನ್ ‘ಕ್ರಾಂತಿ’
ಇನ್ನು ‘ಕ್ರಾಂತಿ’ ಸಕ್ಸಸ್ ಮೀಟ್ ವೇಳೆ ದರ್ಶನ್ ಅಭಿಮಾನಿ ಅವಿನಾಶ್ ಕೂಡ ತಮ್ಮ ನೆಚ್ಚಿನ ನಟನನ್ನ ಭೇಟಿ ಮಾಡಲು ಬಂದಿದ್ದರು. ‘ಕ್ರಾಂತಿ’ ಚಿತ್ರಕ್ಕಾಗಿ ಬೈಕ್ ಏರಿ ಪ್ರಚಾರ ಮಾಡಿದ್ದ ಅವಿನಾಶ್ ಇದೇ ಕಾರಣಕ್ಕೆ ಕೆಲಸವನ್ನು ಕಳೆದುಕೊಂಡಿದ್ದಾರೆ.
ಅವಿನಾಶ್ ಬೈಕ್ ಪ್ರಚಾರ ‘ಕ್ರಾಂತಿ’
‘ಕ್ರಾಂತಿ’ ಚಿತ್ರಕ್ಕಾಗಿ ಅವಿನಾಶ್ ನಾಗರಾಜ್ ಎಂಬುವವರು ವಿಶೇಷವಾಗಿ ಪ್ರಚಾರ ಮಾಡಿದ್ದರು. ತಮ್ಮ ಬುಲೆಟ್ ಬೈಕ್ಗೆ ‘ಕ್ರಾಂತಿ’ ಪೋಸ್ಟರ್ಗಳನ್ನು ಅಂಟಿಸಿಕೊಂಡು ರಾಜ್ಯಾದ್ಯಂತ ಸುತ್ತಾಡಿದ್ದರು. ಉಪೇಂದ್ರ, ಅಭಿಷೇಕ್, ವಿನೋದ್ ಪ್ರಭಾಕರ್ ಸೇರಿದಂತೆ ಸ್ಟಾರ್ ನಟರ ಮನೆ ಬಳಿ ಹೋಗಿ ಅವರಿಂತ ಬೈಕ್ ಚಲಾಯಿಸಿ ಆ ಫೋಟೊಗಳನ್ನು, ವಿಡಿಯೋಗಳನ್ನು ಶೇರ್ ಮಾಡಿದ್ದರು. ಅವಿನಾಶ್ ವಿಭಿನನ ಪ್ರಚಾರ ಗಮನ ಸೆಳೆದಿತ್ತು. ಆದರೆ ‘ಕ್ರಾಂತಿ’ ಸಿನಿಮಾ ಪ್ರಚಾರ 2 ತಿಂಗಳು ಕೆಲಸಕ್ಕೆ ಹೋಗದ ಕಾರಣ ಕಂಪೆನಿಯಿಂದ ಅವರನ್ನು ಟರ್ಮಿನೇಟ್ ಮಾಡಿದ್ದಾರೆ.
ಏನಪ್ಪಾ ಕೆಲಸ ಕಳ್ಕೊಂಡಾ?
‘ಕ್ರಾಂತಿ’ ಸಕ್ಸಸ್ ಮೀಟ್ ವೇಳೆ ದರ್ಶನ್ ಭೇಟಿಗೆ ಅವಿನಾಶ್ ಬಂದಿದ್ದರು. ದರ್ಶನ್ ಅಶೋಕ ಹೋಟೆಲ್ಗೆ ಒಳಗೆ ಎಂಟ್ರಿ ಆಗುತ್ತಿದ್ದಂತೆ ಅವಿನಾಶ್ ಅವರಿಗೆ ಎದುರಾಗಿದ್ದರು. ಆಗ ದರ್ಶನ್ ತಮ್ಮದೇ ಸ್ಟೈಲ್ ಪ್ರತಿಕ್ರಿಯಿಸಿ “ಏನಪ್ಪಾ ಕೆಲಸ ಕಳ್ಕೊಂಡ” ಎಂದು ಹೊರಟು ಹೋದರು. ಆ ವಿಡಿಯೋ ವೈರಲ್ ಆಗಿದೆ. ಅವಿನಾಶ್ ತಾವು ಈ ರೀತಿ ಬೈಕ್ ಪ್ರಚಾರ ಮಾಡುತ್ತೇನೆ ಎಂದಾಗ ದರ್ಶನ್ ಬೇಡ ಎಂದಿದ್ದರು. ಆದರೂ ದರ್ಶನ್ ಮಾತನ್ನು ಅವಿನಾಶ್ ಕೇಳಿರಲಿಲ್ಲ. ಅಭಿಮಾನ ಇರಬೇಕು, ಆದರೆ ಈ ರೀತಿ ವೈಯಕ್ತಿಕ ಜೀವನದಲ್ಲಿ ಸಮಸ್ಯೆ ತಂದುಕೊಳ್ಳಬಾರದು ಎಂದು ಸಾಕಷ್ಟು ಜನ ಕಾಮೆಂಟ್ ಮಾಡಿ ಅವಿನಾಶ್ಗೆ ಬುದ್ದಿ ಹೇಳುತ್ತಿದ್ದಾರೆ.
ಪರ್ಸನಲ್ ಲೈಫ್ಗೆ ಪೆಟ್ಟು ಬಿತ್ತು
ವಿಡಿಯೋ ಮಾಡಿ ಮಾತನಾಡಿದ್ದ ಅವಿನಾಶ್ ” ಕ್ರಾಂತಿ ಸಿನಿಮಾ ಪ್ರಮೋಷನ್ ಚೆನ್ನಾಗಿ ಆಯ್ತು. ಸಿನಿಮಾ 100 ಕೋಟಿ ಕಲೆಕ್ಷನ್ ಮಾಡಿದೆ. ಬಟ್ ನನ್ನ ಪರ್ಸನಲ್ ಲೈಫ್ ಅಲ್ಲಿ ದೊಡ್ಡ ಹೊಡೆತ ಬಿದ್ದಿದೆ. ಇದು ನನ್ನದೇ ತಪ್ಪು. ದರ್ಶನ್ ಸರ್ ಬೇಡ ಎಂದು ಹೇಳಿದ್ದರು. ಆದರೂ ಅವರ ಮಾತು ಕೇಳದೇ ಮಾಡ್ದೆ. ನಮ್ಮ ಕಂಪನಿಯವರು ನನಗೆ ಹೇಳದೇ ನನ್ನನ್ನು ಟರ್ಮಿನೇಟ್ ಮಾಡಿದ್ದಾರೆ. ಅಂದ್ರೆ ನನ್ನನ್ನು ಕೆಲಸದಿಂದ ತೆಗೆದುಬಿಟ್ಟಿದ್ದಾರೆ. ಇನ್ಫಾರ್ಮ್ ಮಾಡದೇ ಟರ್ಮಿನೇಟ್ ಮಾಡಿದ್ದಾರೆ” ಎಂದು ಅಲವತ್ತುಕೊಂಡಿದ್ದರು.
ಅಭಿಮಾನಿಗಳಿಗೆ ದರ್ಶನ್ ಧನ್ಯವಾದ
ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಹಲವು ತಿಂಗಳ ಮೊದಲಿನಿಂದಲೂ ಅಭಿಮಾನಿಗಳು ‘ಕ್ರಾಂತಿ’ ಸಿನಿಮಾ ಪ್ರಚಾರ ಮಾಡಿದ್ದರು. ಎಲ್ಲೆಲ್ಲೂ ಜಾತ್ರೆ, ಹಬ್ಬ ಎಲ್ಲಾ ಕಡೆ ‘ಕ್ರಾಂತಿ’ ಸಿನಿಮಾ ಪೋಸ್ಟರ್ ರಾರಾಜಿಸುವಂತೆ ಮಾಡಿದ್ದರು. ರಿಲೀಸ್ ಡೇಟ್ ಅನೌನ್ಸ್ ಆಗುವುದಕ್ಕಿಂತ ಹಲವು ತಿಂಗಳ ಮೊದಲೇ ಬೈಕ್ ರ್ಯಾಲಿಗಳ ಮೂಲಕ ‘ಕ್ರಾಂತಿ’ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದರು. ಸಕ್ಸಸ್ ಮೀಟ್ನಲ್ಲಿ ಕೂಡ ಚಿತ್ರಕ್ಕೆ ಬೆಂಬಲವಾಗಿ ನಿಂತ ಅಭಿಮಾನಿಗಳಿಗೆ ದರ್ಶನ್ ಧನ್ಯವಾದ ತಿಳಿಸಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada