ಚನ್ನಪಟ್ಟಣ, ಏಪ್ರಿಲ್ 10: ನುಗ್ಗೆಕೇರಿ ಮುಸ್ಲಿಂ ವ್ಯಾಪಾರಿ ನಭೀಸಾಬ್ ಅಂಗಡಿ ಧ್ವಂಸ ಮಾಡಿರುವ ಘಟನೆ ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ಕೃತ್ಯ ನಡೆಸಿದವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.
ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ನಾಶ ಮಾಡಿದ ಹಿಂದೂ ಯುವಕರ ಮೇಲೆ HDK ಕೆಂಡಾಮಂಡಲ
ಚನ್ನಪಟ್ಟಣದ ಅಂಗರಹಳ್ಳಿಯಲ್ಲಿ ಶ್ರೀ ಬೆಟ್ಟದ ತಿಮ್ಮಪ್ಪ ಸ್ವಾಮಿ ದೇವಾಲಯದ ದ್ವಾರದ ಬಾಗಿಲು ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಯವರು ಧಾರವಾಡ ಗ್ರಾಮಾಂತರದ ನುಗ್ಗಿಕೇರಿಯಲ್ಲಿ ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ಹಣ್ಣಿನ ಅಂಗಡಿ ಧ್ವಂಸ ಮಾಡಿರುವ ಘಟನೆಯನ್ನು ಖಂಡಿಸಿದರು.
ನುಗ್ಗಿಕೇರಿಯ ಶ್ರೀ ಆಂಜನೇಯಸ್ವಾಮಿ ದೇಗುಲದ ಬಳಿ 15 ವರ್ಷದಿಂದ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿಯ ಅಂಗಡಿ ಮೇಲೆ ದಾಳಿ ಮಾಡಿ ಕಲ್ಲಂಗಡಿ ಹಣ್ಣುಗಳನ್ನು ನಾಶ ಮಾಡಿದ್ದಾರೆ.
ಸುಮಾರು 70 ಸಾವಿರ ಮೌಲ್ಯದ ಕಲ್ಲಂಗಡಿ ಹಣ್ಣುಗಳನ್ನು ನಾಶ ಮಾಡಿದ್ದಾರೆ. ಕಲ್ಲಂಗಡಿ ರಸ್ತೆಗೆ ಹಾಕಿ ತುಳಿದಿರುವ ಘಟನೆ ಏನಿದೆ, ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು, ದುಷ್ಕರ್ಮಿಗಳನ್ನು ತಕ್ಷಣ ಸರ್ಕಾರ ಬಂಧಿಸುವಂತೆ ಒತ್ತಾಯಿಸಿದರು.
ಕಿಡಿಗೇಡಿಗಳನ್ನು ಬಂಧಿಸುವ ಮೂಲಕ ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು. ಇಂತಹ ಚಟುವಟಿಕೆಗಳನ್ನು ಮುಂದುವರಿಸಿದರೆ, ಇದರಿಂದಲೇ ಜೀವ ಹಾನಿಗಳು ಆಗುವಂತಹ ಸನ್ನಿವೇಶ ಉಂಟಾಗುತ್ತದೆ, ಒಂದು ಸಮಾಜದ ನಡುವೆ ಈ ರೀತಿಯ ಆಕ್ರೋಶದ ವಾತಾವರಣ ನಿರ್ಮಾಣ ಮಾಡಿ, ಒಂದು ಸಮಾಜದವರ ಹೊಟ್ಟೆಯ ಮೇಲೆ ಹೊಡೆಯಲು ಹೊರಟಾಗ ಯಾವುದೇ ಒಬ್ಬ ಮನುಷ್ಯ ಎಲ್ಲಿಯವರೆಗೆ ಸಹಿಸಲು ಸಾಧ್ಯ,ಅವರು ತಿರುಗಿ ಬಿದ್ದರೆ ಯಾವ ಸರ್ಕಾರಗಳು ಉಳಿಯಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್ಡಿಕೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಮಾಜದಲ್ಲಿ ದ್ವೇಷ ಭಾವನೆಗಳಿಗೆ ಅವಕಾಶ ನೀಡದೆ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು, ಎಲ್ಲಾ ವರ್ಗ, ಸಮಾಜದ ಜನರು ನೆಮ್ಮದಿಯಿಂದ ಬದುಕುವ ಕೆಲಸ ಸರ್ಕಾರ ಮಾಡಬೇಕಿದೆ. ಸರ್ಕಾರ ನಿಷ್ಕ್ರಿಯವಾದ್ರೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಇದಕ್ಕೆ ಅವಕಾಶ ಕಲ್ಪಿಸಬೇಡಿ ಎಂದು ಹೆಚ್ಡಿಕೆ ಆಗ್ರಹಸಿದರು
ಶೋಭಾಯಾತ್ರೆ ಮಾಡೋದು ನಾನು ಬೇಡ ಅನ್ನಲ್ಲ. ಒಳ್ಳೆಯ ರೀತಿಯಲ್ಲಿ ಶೋಭಾಯಾತ್ರೆ ನಡೆಸಲಿ, ಶೋಭಾಯಾತ್ರೆ ಹೆಸರಿನಲ್ಲಿ ಸಾಮರಸ್ಯ ಕೆಡಿಸಬೇಡಿ. ಇವತ್ತು ರಾಮನಿಗೆ ಭಕ್ತಿಯನ್ನು ತೋರಿಸಬೇಕು,ರಾಮನ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಶೋಭಾಯಾತ್ರೆ ಹೆಸರಲ್ಲಿ ಇನ್ನೊಂದು ಸಮಾಜವನ್ನು ಉದ್ರೇಕಿಸಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು.
ಶೋಭಾಯಾತ್ರೆ ಮಾಡುವ ಬರದಲ್ಲಿ ಅನ್ಯಧರ್ಮಿಯರು ವಾಸಿಸುವ ಬೀದಿಗಳಲ್ಲಿ ಬಾರಿ ಸದ್ದು ಮಾಡುವ ಡಿಜೆ ಸೆಟ್ ಹಾಕಿಕೊಂಡು ಡ್ಯಾನ್ಸ್ ಮಾಡುವ ಮೂಲಕ ಅಹಿತಕರ ವಾತಾವರಣ ನಿರ್ಮಾಣ ಮಾಡೋದು ನಿಲ್ಲಿಸಿ. ಬೇಕಿದ್ದರೆ ಮೆರವಣಿಗೆ ಅದ್ದೂರಿಯಾಗಿ ಮಾಡಿ ರಾಮನ ಬಗ್ಗೆ ಭಕ್ತಿ ತೋರಿಸಿ ನಾನು ನಿಮ್ಮೊಂದಿಗೆ ಇದ್ದೇನೆ, ರಾಮನ ಹೆಸರಲ್ಲಿ ಅಹಿತಕರ ಘಟನೆಗಳಿಗೆ ಅವಕಾಶ ನೀಡಬೇಡಿ ಎಂದು ಮಾಜಿ ಸಿಎಂ ಎಚ್ಡಿಕೆ ಹೇಳಿದರು.
ಇನ್ನು ಕಲ್ಲಂಗಡಿಯನ್ನು ಕಳೆದುಕೊಂಡು ಬೀದಿಗೆಬಿದ್ದ ಹಿರಿಯ ಜೀವ, ನಬಿಸಾಬಿ ಅವರ ಆವೇದನೆಯನ್ನು ಒಮ್ಮೆ ಕೇಳಿ. ಅವರ ಸಂಕಟದಲ್ಲಿ ನಾವೆಲ್ಲರೂ ಭಾಗಿಯಾಗಿ ಒಟ್ಟಾಗಿ ಅವರಿಗೆ ಬದುಕು ಕಟ್ಟಿಕೊಡೋಣ ಎಂದು ಎಚ್ಡಿಕೆ ಟ್ವೀಟ್ ಮಾಡಿದ್ದಾರೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada