ಭಾರೀ ಹಿಮಪಾತಕ್ಕೆ 10 ಮಕ್ಕಳು ಸೇರಿದಂತೆ 22 ಜನರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಪಿರ್ ಪಂಜಾಲ್ ಶ್ರೇಣಿಯ ಗಲ್ಯತ್ ಪ್ರದೇಶದ ರೆಸಾರ್ಟ್ ಟೌನ್ ಮುರ್ರಿ ಹಿಲ್ ಸ್ಟೇಷನ್ನಲ್ಲಿ ನಡೆದಿದೆ.
ಪ್ರವಾಸಿಗರ ದಟ್ಟಣೆಯ ಹೆಚ್ಚಳದಿಂದಾಗಿ ಈ ದುರಂತ ಸಂಭವಿಸಿದ್ದು, ಮುರ್ರೆಯನ್ನು ವಿಪತ್ತು ಪ್ರದೇಶವೆಂದು ಘೋಷಿಸಲಾಗಿದೆ.
ಪಾಕಿಸ್ತಾನದ ಗಿರಿಧಾಮ ಮುರ್ರೆ ನೋಡಲು ಬಂದಿದ್ದ ಅನೇಕ ಪ್ರವಾಸಿಗರು ರಾತ್ರಿಯಿಡೀ ಭಾರೀ ಹಿಮಪಾತದ ನಡುವೆ ಸಿಲುಕಿದ್ದಾರೆ. ಇಲ್ಲಿನ ರಸ್ತೆಗಳು ಸಂಪೂರ್ಣವಾಗಿ ಮುಚ್ಚಿಹೋಗಿದ್ದು, ಸಾವಿರಾರು ವಾಹನಗಳು ಗಿರಿಧಾಮದಲ್ಲಿ ಸಿಲುಕಿಕೊಂಡಿವೆ. ಈ ವೇಳೆ ವಾಹನಗಳ ನೂಕು ನುಗ್ಗುವಿಕೆಯಿಂದಾಗಿ ಜನರು ಎಲ್ಲಿಯೂ ಹೋಗಲು ಸಾಧ್ಯವಾಗದೇ, ವಾಹನಗಳಲ್ಲೇ ಸಿಲುಕಿದ ಪರಿಣಾಮ ಹತ್ತು ಮಕ್ಕಳು ಸೇರಿದಂತೆ 22 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಬಗ್ಗೆ ತಿಳಿದ ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಜ್ದರ್ ಅವರು, ಶೀಘ್ರವೇ ರಕ್ಷಣಾ ಕಾರ್ಯವನ್ನು ತ್ವರಿತಗೊಳಿಸಿ ಸಿಕ್ಕಿಬಿದ್ದ ಪ್ರವಾಸಿಗರಿಗೆ ನೆರವು ನೀಡಲು ಸೂಚನೆ ನೀಡಿದ್ದಾರೆ. ಪಂಜಾಬ್ ಸರ್ಕಾರವು ಆಸ್ಪತ್ರೆಗಳು, ಪೊಲೀಸ್ ಠಾಣೆಗಳು ಮತ್ತು ಆಡಳಿತ ಕಚೇರಿಗಳಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದೆ.
15 ರಿಂದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಿರಿಧಾಮಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ದೊಡ್ಡ ಬಿಕ್ಕಟ್ಟನ್ನು ಸೃಷ್ಟಿಸಿದೆ ಎಂದು ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ. ಬಿಕ್ಕಟ್ಟನ್ನು ಪರಿಹರಿಸಲು ಆಡಳಿತದೊಂದಿಗೆ ಪೊಲೀಸರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಇದುವರೆಗೆ ಗಿರಿಧಾಮದಲ್ಲಿ 32 ಇಂಚುಗಳಷ್ಟು ಹಿಮಪಾತ ಹಾಗೂ 1 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ದಾಖಲಾಗಿದೆ. ಕಳೆದ ರಾತ್ರಿ ಮುರ್ರೆ ಮತ್ತು ಗಲಿಯತ್ ಜಿಲ್ಲೆಗಳಿಗೆ ಪ್ರವಾಸಿಗರು ಪ್ರವೇಶಿಸುವುದನ್ನು ಅಧಿಕಾರಿಗಳು ನಿಷೇಧಿಸಿದ್ದಾರೆ ಎಂದು ತಳಿದು ಬಂದಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada