ಬೆಂಗಳೂರು, ಮೇ. 13: “ಮುಂದಿನ ಸಂಪುಟ ಪುನಾರಚನೆಯಾಗಲೀ, ಅಥವಾ ವಿಧಾನಸಭೆ ಚುನಾವಣೆಯಾಗಲೀ ಬರ್ತ್ ಸರ್ಟಿಫಿಕೇಟ್ ಮತ್ತು ಮ್ಯಾರೇಜ್ ಸರ್ಟಿಫಿಕೇಟ್ ಗೆ ಬಿಜೆಪಿ ಆದ್ಯತೆ ಕೊಡಲ್ಲ. ಅಂತಹ ಸಂದರ್ಭ ಎದುರಾದರೆ ಪಕ್ಷಕ್ಕಾಗಿ ವರ್ಷಗಳಿಂದ ದುಡಿದಿರುವರಿಗೆ ಆದ್ಯತೆ”
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.
ಸಂತೋಷ್ ಅವರ ಈ ಫಾರ್ಮುಲಾ ಇದೀಗ ಬಿಜೆಪಿ ಪಾಳಯದಲ್ಲಿ ತಳಮಳ ಸೃಷ್ಟಿಸಿದೆ. ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಬಿಜೆಪಿ ಈ ಫಾರ್ಮುಲಾ ಅಳವಡಿಸಿಕೊಳ್ಳಲಿದೆ ಎಂಬ ಸಂದೇಶವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇತ್ತೀಚೆಗೆ ಮೈಸೂರಿನಲ್ಲಿ ರವಾನಿಸಿದ್ದರು.
ಕೇಂದ್ರದಲ್ಲಿ ಬಿಜೆಪಿ ಪಕ್ಷದ ಪಾಲಿಸಿ ವಿಚಾರಕ್ಕೆ ಬಂದ್ರೆ, ಅಮಿತ್ ಷಾ, ನರೇಂದ್ರ ಮೋದಿ ಹಾಗೂ ಬಿ.ಎಲ್. ಸಂತೋಷ್ ಅವರ ತಿರ್ಮಾನಗಳೇ ಅಂತಿಮ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಈ ಫಾರ್ಮುಲಾ ಅಳವಡಿಸಿಕೊಂಡಿದ್ದೇ ಆದಲ್ಲಿ ಬಿಜೆಪಿಯ ಸುಮಾರು 30 ಕ್ಕೂ ಹೆಚ್ಚು ನಾಯಕರು ಟಿಕೆಟ್ ವಂಚಿತರಾಗಲಿದ್ದಾರೆ.
ಮ್ಯಾರೇಜ್ ಸರ್ಟಿಫಿಕೇಟ್ ಮತ್ತು ಬರ್ತ್ ಸರ್ಟಿಫಿಕೇಟ್ ಫಾರ್ಮುಲಾ :
ಅಪ್ಪ ಬಿಜೆಪಿಯಲ್ಲಿ ಶಾಸಕರಾಗಿದ್ದರೆ, ಅವರ ಮಗನಿಗೆ ಟಿಕೆಟ್ ಕೊಡುವಂತಿಲ್ಲ. ಗಂಡ ಪಕ್ಷದ ಶಾಸಕರಾಗಿದ್ದರೆ ಹೆಂಡತಿಗೆ ಟಿಕೆಟ್ ಕೊಡಲ್ಲ. ಅಂದರೆ ಕುಟುಂಬ ರಾಜಕಾರಣಕ್ಕೆ ಸಂಪೂರ್ಣ ಬ್ರೇಕ್ ಹಾಕುವ ಈ ಫಾರ್ಮುಲಾ ಮುಂದಿಟ್ಟುಕೊಂಡು ಹೊಸ ಮುಖಗಳ ಅನ್ವೇಷಣೆಗೆ ಬಿಜೆಪಿ ಮುಂದಾಗಿದೆ. ಆದರೆ, ಬಾಂಬೆ ನಾಯಕರು ಒಳಗೊಂಡಂತೆ ಬಿಜೆಪಿಯಲ್ಲಿ ಈ ಫಾರ್ಮುಲಾ ಅನುಷ್ಠಾನಕ್ಕೆ ಬಂದ್ರೆ 30 ಕ್ಕೂ ಹೆಚ್ಚು ನಾಯಕರು ಬಿಜೆಪಿಯ ಸಕ್ರಿಯ ರಾಜಕಾರಣದಿಂದಲೇ ದೂರ ಉಳಿಯಬೇಕಾದೀತು.
ಕುಟಂಬ ರಾಜಕಾರಣದಲ್ಲಿ..
ಬಿಜೆಪಿಯ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಿವೃತ್ತಿ ಬಳಿಕ ಪುತ್ರ ವಿಜಯೇಂದ್ರ ಅವರಿಗೆ ರಾಜ್ಯಾಧಿಕಾರ ಚುಕ್ಕಾಣಿ ಕೊಡಿಸುವ ತುಡಿತದಲ್ಲಿದ್ದಾರೆ. ಇದಕ್ಕೆ ಬ್ರೇಕ್ ಬೀಳಲಿದೆ. ಇದೇ ರೀತಿ ಮತ್ತೊಬ್ಬ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ವಸತಿ ಸಚಿವ ವಿ. ಸೋಮಣ್ಣ, ಡಿ.ಎಚ್. ಶಂಕರ್ ಮೂರ್ತಿ ಸೇರಿದಂತೆ ಬಹುತೇಕ ನಾಯಕರು ತಮ್ಮ ಮಕ್ಕಳಿಗೆ ರಾಜಕೀಯ ಭವಿಷ್ಯವನ್ನು ಕಟ್ಟಿಕೊಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಪಡೆದು ಮಕ್ಕಳ ರಾಜಕೀಯ ಭವಿಷ್ಯ ಪರೀಕ್ಷೆಗೆ ಒಳಪಡಿಸಲು ಪೂರ್ವ ತಯಾರಿ ನಡೆಸುತ್ತಿದ್ದಾರೆ. ಹೀಗೆ ಲೆಕ್ಕ ಹಾಕಿದರೆ ಮಕ್ಕಳನ್ನು ರಾಜಕೀಯಕ್ಕೆ ಇಳಿಸಲು ಪ್ರಯತ್ನಿಸುತ್ತಿರುವ ನಾಯಕರ ಸಂಖ್ಯೆ 30 ಕ್ಕೂ ಹೆಚ್ಚಾಗಲಿದೆ.
ಬಿ.ಎಲ್. ಸಂತೋಷ್ ಅವರ ಮಾತಿಗೆ ಕೇಂದ್ರದಲ್ಲಿ ಎದುರು ಹೇಳುವರೇ ಇಲ್ಲ. ಈಗ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ. ಅಧ್ಯಕ್ಷ ಸ್ಥಾನ ಹೊರತು ಪಡಿಸಿದರೆ ಪಕ್ಷದ ಪರಮೋನ್ನತ ಎರಡನೇ ಸ್ಥಾನದಲ್ಲಿ ಬಿ.ಎಲ್. ಸಂತೋಷ್ ಕೂತಿದ್ದಾರೆ. ಅವರ ಮಾತುಗಳಿಗೆ ಬಿಜೆಪಿ ಒತ್ತು ನೀಡಲಿದೆ. ಈಗಾಗಲೇ ಎರಡು ಭಾರಿ ಬರ್ತ್ ಸರ್ಟಿಫಿಕೇಟ್ ಮತ್ತು ಮ್ಯಾರೇಜ್ ಸರ್ಟಿಫಿಕೇಟ್ ಬಗ್ಗೆ ಬಿ.ಎಲ್. ಸಂತೋಷ್ ಸ್ಪಷ್ಟನೆ ನೀಡಿದ್ದಾರೆ.
ಈ ಸಂದೇಶ ಇದೀಗ ಬಿಜೆಪಿಯ ಕುಟುಂಬ ರಾಜಕಾರಣ ಮಾಡಲು ಹೊರಡಿರುವ ನಾಯಕರ ನಿದ್ದೆ ಗೆಡಿಸಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಸಂಪೂರ್ಣ ಬ್ರೇಕ್ ಹಾಕಲು ಬಿಜೆಪಿ ಚಿಂತನೆ ನಡೆಸಿದೆ. ಬಿಜೆಪಿ ಪಕ್ಷದ ಈ ನಿರ್ಧಾರ ಹಲವು ನಾಯಕರ ನಿದ್ದೆ ಕಸಿದುಕೊಂಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada