ಬೆಂಗಳೂರು: ರಾಜ್ಯದಲ್ಲಿ ಹಿಜಾಬ್-ಹಲಾಲ್ ಬಳಿಕ ಉಂಟಾಗಿರುವ ಲೌಡ್ಸ್ಪೀಕರ್ ವಿವಾದ ಮತ್ತೊಂದು ಕೋಮುಸಂಘರ್ಷಕಕ್ಕೆ ಎಡೆ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ, ಅದು ಮುಂದೆ ರಾತ್ರಿ ನಾಟಕಗಳಿಗೂ ಸಂಚಕಾರ ತರಲಿವೆಯೇ ಎಂಬ ಆತಂಕ ಮೂಡಿಸಿದೆ.
ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಹಾಕುವ ಕುರಿತ ಉಂಟಾಗಿರುವ ವಿವಾದದ ವಿಚಾರವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ವಂಶಿಕೃಷ್ಣ, ಇದುವರೆಗೆ ಆ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಇಂದು ಜಿಲ್ಲಾಡಳಿತ ಭವನದಲ್ಲಿ ವಿವರ ನೀಡಿದರು.
ಎಲ್ಲೆಲ್ಲಿ ಲೌಡ್ ಸ್ಪೀಕರ್ ಬಳಕೆ ಮಾಡುತ್ತಾರೋ ಅವರಿಗೆಲ್ಲ ಈಗಾಗಲೇ ನೋಟಿಸ್ ನೀಡಲಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 156 ಮಸೀದಿಗಳು, 171 ದೇವಸ್ಥಾನಗಳು, 41 ಚರ್ಚ್ಗಳು ಸೇರಿ ಒಟ್ಟು 374 ನೋಟಿಸ್ ನೀಡಲಾಗಿದೆ, ಜತೆಗೆ 14 ಬಾರ್ಗಳು ಮತ್ತು ಒಂದು ರೆಸ್ಟೋರೆಂಟ್ಗೂ ನೀಡಲಾಗಿದೆ ಎಂದು ಅವರು ತಿಳಿಸಿದರು.
ಧ್ವನಿವರ್ಧಕದ ಸಂಬಂಧ ಹೈಕೋರ್ಟ್ ನಿರ್ದೇಶನವಿದೆ. ಹೀಗಾಗಿ ನಿಯಮ ಮೀರುವವರ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು ಹಳ್ಳಿಗಳಲ್ಲಿ ರಾತ್ರಿ ಹೊತ್ತು ನಡೆಯುವ ನಾಟಕಗಳ ಕುರಿತ ಪ್ರಶ್ನೆಗೂ ಪ್ರತಿಕ್ರಿಯಿಸಿದರು.
ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ರೀತಿಯ ಶಬ್ದ ಬಳಕೆ ಮಾಡಬಾರದು ಎಂದು ನಿಯಮವಿದೆ. ಹೀಗಾಗಿ ಅದರ ಬಗ್ಗೆ ಕೂಡ ಚರ್ಚೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದು, ಇನ್ನು ರಾತ್ರಿಯ ಸಂದರ್ಭದಲ್ಲಿ ನಾಟಕ ಕೂಡ ಆಡಲು ಅವಕಾಶ ಇರುತ್ತದೋ ಇಲ್ಲವೋ ಎಂಬ ಆತಂಕ ಮೂಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada