ಚಂಡಿಗಢ: ಪ್ರಕರಣವೊಂದರಲ್ಲಿ ಜೈಲು ಶಿಕ್ಷೆಗೊಳಗಾಗಿ ನಿನ್ನೆಯಷ್ಟೇ ಶರಣಾಗಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಜೈಲಿನಲ್ಲಿ ಮೊದಲ ದಿನ ಕಳೆದಿದ್ದಾರೆ.
ರಸ್ತೆ ಗಲಾಟೆ ಪ್ರಕರಣವೊಂದರಲ್ಲಿ ಸಿಧುಗೆ ಸುಪ್ರೀಂಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು.
ನ್ಯಾಯಾಲಯಕ್ಕೆ ಹಾಜರಾಗಲು ಗಡುವು ನೀಡಿತ್ತು. ಈ ಹಿನ್ನಲೆಯಲ್ಲಿ ಶುಕ್ರವಾರ ಪೊಲೀಸರ ಮುಂದೆ ಶರಣಾಗಿದ್ದರು.
ಇದೀಗ ಪಟಿಯಾಲ ಜೈಲಿನಲ್ಲಿ ಕಾಲ ಕಳೆಯುತ್ತಿರುವ ಸಿಧು ಅವರಿಗೆ ಸದ್ಯಕ್ಕೆ ಯಾವುದೇ ವಿಶೇಷ ಆತಿಥ್ಯ ನೀಡಿಲ್ಲ, ಸಾಮಾನ್ಯ ಖೈದಿಯಂತೆ ಇದ್ದಾರೆ ಎಂದು ಜೈಲಧಿಕಾರಿಗಳು ತಿಳಿಸಿದ್ದಾರೆ.
ಐಷಾರಾಮಿ ಬದುಕು ಕಂಡಿರುವ ಸಿಧುಗೆ ಇದು ತೀರಾ ಹೊಸತು. ಜೈಲಿನಲ್ಲಿ ಕಾಲ ಕಳೆಯುವುದು ಅವರಿಗೆ ತುಂಬಾ ಕಷ್ಟವಾಗುತ್ತಿದೆ. ಮೊದಲ ದಿನ ರಾತ್ರಿ ಊಟ ಮಾಡದೇ ಮಾತ್ರೆ ನುಂಗಿ ಮಲಗಿದ್ದಾರಂತೆ. ಇವರಿಗಾಗಿ ವಿಶೇಷ ಆಹಾರದ ವ್ಯವಸ್ಥೆಯೇನೂ ಮಾಡಿಲ್ಲವಂತೆ. ಇನ್ನು ಅವರ ಖೈದಿ ಸಂಖ್ಯೆ 241383 ಹೀಗಿದೆ.
ಸದ್ಯ ಕೆಲ ಕಾಯಿಲೆಗಳು ಇರುವುದರಿಂದ ಅವರು ಮಾತ್ರೆಗಳನ್ನು ಸೇವಿಸಲೇಬೇಕಿದೆ. ಇತರೆ ಆಹಾರ ಅಗತ್ಯವಿದ್ದರೆ, ಜೈಲಿನಲ್ಲಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ಅವರೇ ತಯಾರಿಸಿಕೊಳ್ಳಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada