ಮೂಡಿಗೆರೆ: ‘ಮಾಜಿ ಸಚಿವೆ ಮೋಟಮ್ಮ ಅವರ ವಿರುದ್ಧ ನೈಜತೆಯನ್ನು ಮರೆಮಾಚಿ ವಿಡಿಯೊವನ್ನು ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಅಂಶುಮಂತ್ ದೂರಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಬಾಳೆಹೊನ್ನೂರಿನ ನಾರಾಯಣಗುರು ಭವನದಲ್ಲಿ ಗುರುವಾರ ನಡೆದ ಸದಸ್ಯತ್ವ ಅಭಿಯಾನ ಪರಿಶೀಲನೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು.
ಅದೇ ಊರಿನ ರಂಭಾಪುರಿ ಮಠದಲ್ಲಿ ನಡೆದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಮಾಜಿ ಸಚಿವೆ ಮೋಟಮ್ಮ ಭಾಗವಹಿಸಿದ್ದರು. ಡಿ.ಕೆ.ಶಿವಕುಮಾರ್ ಅವರು ತುರ್ತಾಗಿ ತೆರಳುವ ಸಂದರ್ಭದಲ್ಲಿ ಮೋಟಮ್ಮ ತಮ್ಮ ಗೃಹಪ್ರವೇಶಕ್ಕೆ ಆಹ್ವಾನ ನೀಡಲು ಶಿವಕುಮಾರ್ ಬಳಿ ಬಂದು, ‘ತಾನು ಬರೋದು ತಡವಾಯ್ತು, ಸಾರಿ’ ಎಂದು ಹೇಳಿದರು. ಅದಕ್ಕೆ ಶಿವಕುಮಾರ್ ‘ನೊ, ನೊ, ನನಗೂ ಲೇಟಾಗಿದೆ’ ಎಂದು ಹೆಲಿಕಾಫ್ಟರ್ ಕಡೆ ತೆರಳಿದರು. ಈ ಸನ್ನಿವೇಶದ ಒಂದು ಸಣ್ಣ ವಿಡಿಯೊ ಕಟ್ ಮಾಡಿ, ನೈಜತೆಯನ್ನು ಮರೆ ಮಾಚಿ, ಬಿಜೆಪಿಯವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಈ ಸನ್ನಿವೇಶದ ಜತೆಗೆ ಮೋಟಮ್ಮ ಸಹಿತ ಎಲ್ಲ ಮುಖಂಡರಿಗೆ ಡಿ.ಕೆ.ಶಿವಕುಮಾರ್ ತರಾಟೆಗೆ ತೆಗೆದುಕೊಡಿದ್ದಾರೆಂದು ಅಪಪ್ರಚಾರ ಮಾಡಿರುವುದು ಬೇಸರ ತಂದಿದೆ’ ಎಂದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ‘ತನ್ನ ವಿರುದ್ಧ ಅಪಪ್ರಚಾರ ಮಾಡಿ ಬಿಜೆಪಿಯವರಿಗೆ ಲಾಭವಿಲ್ಲ. ವಿಡಿಯೊದಲ್ಲಿರುವ ಘಟನೆ ಸತ್ಯಕ್ಕೆ ದೂರವಾಗಿದೆ. ಶಿವಕುಮಾರ್ ಹಾಗೂ ತನ್ನ ನಡುವೆ ಉತ್ತಮ ಬಾಂಧವ್ಯವಿದೆ. ಅವರು ಪಕ್ಷದ ಬಲವರ್ಧನೆಗೆ ಶ್ರಮಿಸು ತ್ತಿದ್ದಾರೆ. ಇದರಿಂದ ಕಾರ್ಯಕರ್ತರಿಗೆ ಹುರುಪು ಹೆಚ್ಚಾಗಿದೆ’ ಎಂದರು.
ಎಚ್.ಜಿ. ಸುರೇಂದ್ರ, ಪಟ್ಟಣ ಪಂಚಾಯಿತಿ ಸದಸ್ಯರಾದ ಎಚ್.ಪಿ. ರಮೇಶ್, ಹಂಝಾ, ಸಂಪತ್ ಬಿಳಗುಳ, ಸಂಪತ್ ಮುಗ್ರಹಳ್ಳಿ, ಪ್ರಭಾಕರ್, ರಾಮು, ಅಜೀಜ್, ನಿಶಾಂತ್ ಪಟೇಲ್, ಎಂ.ಎಸ್. ಅನಂತ್ ಇದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada