ಭುವನೇಶ್ವರ: ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಗ್ರಾಮಸ್ಥರಿಂದಲೇ ಮೌಖಿಕ ಮತ್ತು ಲಿಖಿತ ಪರೀಕ್ಷೆ ನಡೆದಿದೆ.ಚುನಾವಣೆಗೆ ಸ್ಪರ್ಧಿಸಲು ಕಾರಣವೇನು? ಗ್ರಾಮದ ಅಭಿವೃದ್ಧಿಗೆ ನೀವು ಮಾಡಬೇಕೆಂದಿರುವ 5 ಪ್ರಮುಖ ಕಾರ್ಯಗಳಾವುವು?ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಗ್ರಾಮಗಳು ಮತ್ತು ವಾರ್ಡ್ಗಳ ಮಾಹಿತಿ ಸೇರಿದಂತೆ ಹಲವು ಪ್ರಶ್ನೆಗಳನ್ನು ಗ್ರಾಮಸ್ಥರು ಮುಂದಿಟ್ಟಿದ್ದರು. ಇದಕ್ಕೆಲ್ಲಾ ಚುನಾವಣಾ ಅಭ್ಯರ್ಥಿಗಳು ಮೌಖಿಕ ಮತ್ತು ಲಿಖಿತವಾಗಿ ಉತ್ತರಿಸಿದ್ದಾರೆ ಎಂದು ವರದಿಯಾಗಿದೆ.ಇಂತಹ ಘಟನೆ ಒಡಿಶಾದ ಸುಂದರ್ಗಢ್ ಜಿಲ್ಲೆಯ ಬುಡಕಟ್ಟು ಪ್ರಾಬಲ್ಯವುಳ್ಳ ಗ್ರಾಮವೊಂದರಲ್ಲಿ ನಡೆದಿದೆ. ಒಡಿಶಾದಲ್ಲಿ ಗ್ರಾಪಂ ಚುನಾವಣೆ ನಡೆಯುತ್ತಿದ್ದು, ಫೆ.18ರಂದು 2ನೇ ಹಂತದಲ್ಲಿ ಕುತ್ರ ಗ್ರಾಮ ಪಂಚಾಯಿತಿಗೆ ಮತದಾನ ನಡೆಯಲಿದೆ. ಈ ಹಿನ್ನೆಲೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲು ಯೋಚಿಸಿದ ಕುತ್ರ ಗ್ರಾಪಂ ವ್ಯಾಪ್ತಿಯ ಮಲುಪದವು ಗ್ರಾಮಸ್ಥರು ಅಖಾಡದಲ್ಲಿರುವ 9 ಮಂದಿಯನ್ನೂ ಫೆ.10ರಂದು ಗ್ರಾಮದ ಶಾಲಾ ಆವರಣಕ್ಕೆ ಕರೆಸಿ ಸಾರ್ವಜನಿಕ ಸಭೆ ನಡೆಸಿದ್ದಾರೆ. ಅಭ್ಯರ್ಥಿಗಳ ಗುರಿ ಮತ್ತು ಧೈಯ ಅರಿಯಲು ಪರೀಕ್ಷೆ ನಡೆಸುವುದಾಗಿ ಗ್ರಾಮಸ್ಥರು ಹೇಳಿದ್ದು, ಇದಕ್ಕೆ ಅಭ್ಯರ್ಥಿಗಳೂ ಒಪ್ಪಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.ಅಂದು ರಾತ್ರಿ 8 ಗಂಟೆವರೆಗೂ ಪ್ರವೇಶ ಪರೀಕ್ಷೆ ನಡೆಯಿತು. ನಾನು ಚೆನ್ನಾಗಿಯೇ ಬರೆದಿರುವೆ. ಮತದಾನಕ್ಕೂ ಮುನ್ನಾ ದಿನ ರಿಸಲ್ಟ್ ಗೊತ್ತಾಗಲಿದೆ ಎಂದು ಸರಪಂಚ್ ವಾರ್ಡ್ನ ಅಭ್ಯರ್ಥಿಯೊಬ್ಬರು ತಿಳಿಸಿದ್ದಾರೆ.ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳಿಗೆ ಗ್ರಾಮಸ್ಥರು ಪರೀಕ್ಷೆ ಕೊಟ್ಟ ಬಗ್ಗೆ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಎಂದು ಚುನಾವಣಾಧಿಕಾರಿ ರಬಿಂದ ಸೇಥಿ ಹೇಳಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada