ಪಾಂಡವರ ಅಜ್ಞಾತವಾಸದ ಮುಕ್ತಾಯ. ಕೃಷ್ಣನ ಆಗಮನ. ಅಭಿಮನ್ಯುವಿನೊಂದಿಗೆ ಉತ್ತರೆಯ ವಿವಾಹ.
ಮರುದಿನದ ಬೆಳಗು ಅತ್ಯಂತ ಸುಂದರವಾಗಿತ್ತು. ಪಾಂಡವರ ಪಾಲಿಗೆ ಅದು ಮಂಗಳದ ಮುಂಬೆಳಗು. ಅವರು ಎದ್ದು ಮಂಗಳಸ್ನಾನ ಮಾಡಿ ಅಲಂಕಾರಗಳೊಂದಿಗೆ ಓಲಗಶಾಲೆಗೆ ಬಂದರು. ಸೇವಕರು ಇವರನ್ನು ಕಂಡು ಅಚ್ಚರಿಗೊಂಡು ದೇವಲೋಕದವರೇ ಬಂದಿರುವರೆಂದು ಬಗೆದು ವಿರಾಟನ ಗಮನಕ್ಕೆ ತಂದರು. ವಿರಾಟನು ಸಕಲ ಪರಿವಾರದೊಂದಿಗೆ ಬಂದು ನೋಡಲು ಉತ್ತರನು ಎಲ್ಲರನ್ನೂ ಪರಿಚಯಿಸಿದನು. ವಿರಾಟ ಧರ್ಮಜನ ಕಾಲಿಗೆ ಬಿದ್ದು ಕ್ಷಮೆ ಕೇಳಿದನು. ಉತ್ತರೆಯನ್ನು ಅರ್ಜುನನಿಗೆ ಕೊಡುವ ಬಗ್ಗೆ ಹೇಳಿದಾಗ ಅರ್ಜುನನು ತಾನು ಅವಳಿಗೆ ಒಂದು ವರ್ಷ ವಿದ್ಯೆ ಕಲಿಸಿದ್ದೇನೆ. ಅವಳು ನನಗೆ ಮಗಳ ಹಾಗೆ ಎಂದು ಹೇಳಿ ತನ್ನ ಮಗ ಅಭಿಮನ್ಯುವಿಗೆ ಕೊಡಬಹುದು ಎಂದನು. ಎಲ್ಲರೂ ಒಪ್ಪಿದರು.
ಎಲ್ಲವನ್ನೂ ಶ್ರೀ ಕೃಷ್ಣನಿಗೆ ತಿಳಿಸಲು ಓಲೆ ಬರೆದು ದೂತರನ್ನು ಕಳಿಸಿದರು. ಕೃಷ್ಣನು ಇವರನ್ನು ಮಾತನಾಡಿಸಿ ಉಡುಗೊರೆಗಳನ್ನು ಸ್ವೀಕರಿಸಿ ಪತ್ರ ಓದಿದನು. ಕ್ಷೇಮ ಸಮಾಚಾರದೊಂದಿಗೆ ಆರಂಭವಾದ ಪತ್ರ ತಾವು ಇದುವರೆಗೂ ನಿನ್ನ ಕೃಪೆಯಿಂದ ಎಲ್ಲಾ ಕಷ್ಟಗಳನ್ನೂ ದಾಟಿ ಈಗ ಅಜ್ಞಾತವಾಸದ ಅವಧಿಯನ್ನು ಪೂರೈಸಿರುವೆವು. ಕರುಣಾನಿಧಿಯಾದ ನಿನ್ನ ದರ್ಶನ ನಮಗೆ ಈಗ ಅತ್ಯಂತ ಸುಖಪ್ರದವಾಗಿದೆ. ಆಗಮಿಸಿ ಕರುಣಿಸತಕ್ಕದ್ದು. ಉತ್ತರೆಯ ವಿವಾಹ ಅಭಿಮನ್ಯುವಿನೊಂದಿಗೆ ಮಾಡಲು ಇಲ್ಲಿ ಮಾತುಗಳು ನಡೆದಿವೆ. ಎಲ್ಲವನ್ನೂಬಲ್ಲ ನೀನು ಬಂದು ನಿಂತು ದಾರಿ ತೋರಿಸು ಎಂದು ವಿವರವಾಗಿ ಬರೆದಿದ್ದರು.
ಹರ್ಷಗೊಂಡ ಕೃಷ್ಣನು ಸಕಲ ಪರಿವಾರದೊಂದಿಗೆ ಹೊರಟನು. ಅತ್ತ ದ್ರುಪದ, ಪಾಂಚಾಲ, ಇತ್ಯಾದಿ ರಾಜರುಗಳೂ ತಮ್ಮ ಸೈನ್ಯ ಸಮೇತ ವಿವಿಧ ಉಡುಗೊರೆಗಳೊಂದಿಗೆ ಬಂದರು. ವಿರಾಟನಗರದ ಹೊರಗೆ ಉಪಪ್ಲಾವ್ಯವೆಂಬ ನಗರ ನಿರ್ಮಾಣವಾಗಿ ಪಾಂಡವರು ಅಲ್ಲಿ ಇದ್ದರು. ಬಂದವರೆಲ್ಲರನ್ನೂ ಸ್ವಾಗತಿಸಿ ಸತ್ಕರಿಸಿದರು. ಕೃಷ್ಣನ ಆಗಮನವಾಯಿತು.
ದೇವೋತ್ತಮನಾದ ಶ್ರೀಕೃಷ್ಣನು ಎಂಥವನೆಂದರೆ, ವೇದಗಳು ತನ್ನನ್ನು ಹುಡುಕಿಕೊಂಡು ಬಂದರೆ ಅತ್ತಿತ್ತ ಸರಿದು ಅವಕ್ಕೆ ಸಿಗುವವನಲ್ಲ. ಮನನಶೀಲರಾದ ಮುನಿಗಳ ಮನಸ್ಸಿಗೆ ತೋರುವವನಲ್ಲ. ನನ್ನ ಮಕ್ಕಳು ದೂರನಿಲ್ಲಲಿ, ಭಕ್ತರನ್ನು ನನ್ನ ಹತ್ತಿರಕ್ಕೆ ಕರೆಯಿರಿ, ಅವರಿಗೆ ನನ್ನನ್ನೇ ಕೊಟ್ಟುಕೊಂಡು ಜೀವಿಸುತ್ತೇನೆ ಎನ್ನುವಂತಹ ಮನೋಭಾವದ ಸಾಧು, ಅವನು ಪಾಂಡವರತ್ತ ನಡೆದು ಬಂದನು.
ಈ ನೆಪದಲ್ಲಿ ನಮಗೆಲ್ಲರಿಗೂ ಕೃಷ್ಣನ ದರ್ಶನ ಭಾಗ್ಯವೊದಗಿತು ಎಂದು ಎಲ್ಲರೂ ಸಂತಸಪಟ್ಟರು. ಭವ್ಯವಾದ ಸ್ವಾಗತವಾಯಿತು. ಕರುಣಾಳು ಕೃಷ್ಣನು ಎಲ್ಲರನ್ನೂ ಮಾತನಾಡಿಸಿದನು. ಧರ್ಮಜನನ್ನು ಬಿಗಿದಪ್ಪಿದನು. ಇತರರನ್ನು ಸಂತೈಸಿದನು. ದ್ರೌಪದಿಯನ್ನು ಮಾತನಾಡಿಸಿದನು. ಎಲ್ಲರಿಗೂ ಉಡುಗೊರೆಗಳಾದವು.
ಅಭಿಮನ್ಯುವಿನ ವಿವಾಹಕ್ಕೆ ಕೃಷ್ಣನ ಅನುಮತಿ ಸಿಕ್ಕಿತು. ಸುಂದರವಾದ ಚಪ್ಪರದಲ್ಲಿ ವೈಭವದಿಂದ ಎಲ್ಲರೂ ಸೇರಿ ಅಭಿಮನ್ಯು ಮತ್ತು ಉತ್ತರೆಯ ವಿವಾಹವನ್ನು ನೆರವೇರಿಸಿದರು. ಸಕಲ ಬಂಧು ಬಳಗದವರು ಸೇರಿದ್ದರಿಂದ ಅಲ್ಲಿ ಮಂಗಳದ ವಾತಾವರಣ ಉಂಟಾಯಿತು. ವಿವಾಹದ ಮರುದಿನ ಓಕುಳಿ ಆಟವು ನಡೆಯಿತು. ಎಲ್ಲೆಲ್ಲಿಯೂ ಸಂಭ್ರಮ. ಶ್ರೀ ಕೃಷ್ಣನ ಚರಣಕಮಲ ದರ್ಶನದಿಂದ ಎಲ್ಲರೂ ಪುಳಕಿತರಾದರು.
Please follow and like us: