ಬೆಂಗಳೂರು: ಪೆಟ್ರೋಲ್, ಡೀಸೆಲ್ ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಶನಿವಾರ ರಾತ್ರಿಯಿಂದ ಕಡಿತ ಮಾಡಿದೆ. ರಾಜ್ಯದ ಸುಂಕವನ್ನು ಕಡಿತ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನಲ್ಲಿ ನವೆಂಬರ್ನಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ, ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶಕ್ಕೆ ಮುನ್ನ ಉತ್ಸಾಹದಾಯಕ ಬೆಳವಣಿಗೆಗಳಾಗಿವೆ.
ಭಾರತಕ್ಕೆ 2021-22ರಲ್ಲಿ ಅತಿಹೆಚ್ಚು ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದ್ದು, ಕರ್ನಾಟಕವೇ ನಂಬರ್ ಒನ್ ಸ್ಥಾನದಲ್ಲಿ ಇರುವುದು ಸಂತಸದ ಸಂಗತಿ. ಹಿಂದಿನ ನಾಲ್ಕು ತ್ರೈಮಾಸಿಕಗಳಲ್ಲೂ ರಾಜ್ಯ ಮುಂಚೂಣಿ ಕಾಯ್ದಯಕೊಂಡಿತ್ತು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಅನುಷ್ಠಾನವೂ ಆಗಲಿದೆ
ದೇಶ- ವಿದೇಶದ ಕಂಪನಿಗಳು, ಉದ್ಯಮಿಗಳ ಜತೆಗೆ ಯೋಜನೆಗಳ ಕುರಿತು ಪರಸ್ಪರ ಒಡಂಬಡಿಕೆ ಮಾತ್ರವಲ್ಲ, ಅನುಷ್ಠಾನವೂ ಆಗಲಿದೆ. ಹಲವು ಕೈಗಾರಿಕೆಗಳು ಸ್ಥಾಪನೆಗೆ ಸಂಬಂಧಿಸಿದ ಪ್ರಸ್ತಾವನೆಗಳು ಸರ್ಕಾರದ ಮುಂದಿದ್ದು, ದಾವೋಸ್ ಪ್ರವಾಸದಿಂದ ಮರಳಿದ ನಂತರ ಕಾರ್ಯರೂಪಕ್ಕೆ ತರಲು ಒತ್ತು ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ದಾವೋಸ್ ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಳ್ಳಲು ಇಂದು ತೆರಳುತ್ತಿದ್ದು, ಮುಖ್ಯ ಅಧಿವೇಶನದಲ್ಲಿ ಸೋಮವಾರ ಮತ್ತು ಮಂಗಳವಾರದ ತಲಾ ಒಂದು ಅವಧಿಯಲ್ಲಿ ಮಾತನಾಡುವ ಅವಕಾಶ ದೊರೆತಿವೆ. ಪರಿಸರ ಹಾಗೂ ಆರ್ಥಿಕತೆ ವಿಷಯಗಳ ಕುರಿತು ವಿಚಾರ ಮಂಡಿಸುವೆ. ಕರ್ನಾಟಕದ ಪೆವಿಲಿಯನ್ ನಲ್ಲಿ ವಿಶ್ವ ಪ್ರಸಿದ್ಧ ಕಂಪನಿಗಳು, ಬಹು ರಾಷ್ಟ್ರೀಯ ಉದ್ಯಮಪತಿಗಳು, ತಜ್ಞರು ಸೇರಿ 18 ಕಂಪನಿಗಳ ಜತೆಗೆ ಮಾತುಕತೆ, ವಿಚಾರ- ವಿನಿಮಯ ನಡೆಯಲಿದ್ದು, ಕರ್ನಾಟಕದಲ್ಲಿ ಉದ್ಯಮಗಳ ಸ್ಥಾಪನೆ, ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ತಿಳಿಸಿ, ಆಹ್ವಾನ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada