ವಿಜಯಪುರ: ಕಳೆದ ಕೆಲವು ತಿಂಗಳಿನಿಂದ ನೂರರ ಗಡಿ ದಾಟಿರುವ ಪೆಟ್ರೋಲ್ ದರ ಸದ್ಯಕ್ಕೆ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಪೆಟ್ರೋಲ್ ಬೆಲೆಯಿಂದ ಕಂಗಾಲಾಗಿರುವ ಕೆಲವರು ತಮ್ಮ ಸ್ವಂತ ವಾಹನಗಳನ್ನು ಬಿಟ್ಟು ಬಸ್ಗಳ ಮೊರೆ ಹೋಗಿದ್ದಾರೆ. ಇನ್ನು ಕೆಲವರು ಎಲ್ಲೆಲ್ಲಿ ಪೆಟ್ರೋಲ್ ಖರ್ಚು ಉಳಿಸಲು ಸಾಧ್ಯವೋ, ಆ ಪ್ರಯತ್ನವೆಲ್ಲ ಮಾಡುತ್ತಿದ್ದಾರೆ.
ಆದರೆ, ಇಲ್ಲೊಬ್ಬ ಉದ್ಯಮಿ ಮಾಡಿರುವ ಕೆಲಸ ಎಲ್ಲರ ಗಮನ ಸೆಳೆದಿದೆ.
ಪೆಟ್ರೋಲ್ ಪ್ರಯಾಣ ದುಬಾರಿ ಆಗಿರುವುದರಿಂದ ಉದ್ಯಮಿಯೊಬ್ಬ ಕುದುರೆಯನ್ನು ಖರೀದಿಸಿ ಅದರಲ್ಲೇ ಪ್ರಯಾಣ ಮಾಡುತ್ತಿದ್ದಾರೆ. ಇದನ್ನು ಕೇಳಲು ತಮಾಷೆ ಎನಿಸಬಹುದು. ಆದರೆ, ಪೆಟ್ರೋಲ್ ಬೆಲೆ ಓರ್ವ ಉದ್ಯಮಿ ಮೇಲೆಯೇ ಇಷ್ಟೊಂದು ಪ್ರಭಾವ ಬೀರಿರಬೇಕಾದರೆ, ಜನಸಾಮಾನ್ಯರ ಗತಿಯೇನು ಎಂಬ ಪ್ರಶ್ನೆ ತಮ್ಮ ತಲೆಗೆ ಬರದೇ ಇರದು.
ಬಾಬುಲಾಲ್ ಚೌಹಾಣ್ (49) ಎಂಬ ಕರ್ನಾಟಕದ ವಿಜಯಪುರ ಮೂಲದ ಉದ್ಯಮಿ ಕೇವಲ ವಿನೂತನ ಐಡಿಯಾ ಮಾಡಿದ್ದಲ್ಲದೆ, ಅದನ್ನು ಕಾರ್ಯರೂಪಕ್ಕೂ ತಂದಿದ್ದಾರೆ. ಇತ್ತೀಚೆಗಷ್ಟೇ ಅವರೊಂದು ಗುಜರಾತಿ ಕುದುರೆಯನ್ನು ಖರೀದಿ ಮಾಡಿದ್ದಾರೆ. ಕೇವಲ ಪ್ರಯಾಣಕ್ಕಾಗಿ ಮಾತ್ರವಲ್ಲದೇ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಲು ಇದು ನೆರವಾಗುತ್ತದೆ ಎಂದು ಬಾಬುಲಾಲ್ ಹೇಳಿದ್ದಾರೆ. ಪ್ರತಿ ತಿಂಗಳು ಜಿಮ್ಗೆ 4 ಸಾವಿರ ರೂ. ಖರ್ಚು ಮಾಡುತ್ತಿದ್ದರಂತೆ. ಅಲ್ಲದೆ, ಪೆಟ್ರೋಲ್ಗೂ ಕೂಡ ಖರ್ಚಾಗುತ್ತಿತ್ತಂತೆ. ಇದೀಗ ಕುದುರೆ ಖರೀದಿಸಿರುವ ಬಾಬುಲಾಲ್ಗೆ ಎರಡೆರಡು ಖರ್ಚು ಉಳಿಯುತ್ತಿದೆಯಂತೆ.
ಈ ಬಗ್ಗೆ ಮಾತನಾಡಿರುವ ಅವರು ಕುದುರೆ ಸವಾರಿಯಿಂದ ದೇಹದ ಫಿಟ್ನೆಸ್ ಚೆನ್ನಾಗಿ ಇಟ್ಟುಕೊಳ್ಳಬಹುದು. ಅಲ್ಲದೆ, ವಾಯುಮಾಲಿನ್ಯ ಕಡಿಮೆ ಮಾಡಲು ಸಹಕಾರಿ ಆಗುತ್ತದೆ ಎಂದಿದ್ದಾರೆ. ಬಾಬುಲಾಲ್ ಅವರು ಪ್ರತಿದಿನ ಮನೆಯಿಂದ ಕಚೇರಿಗೆ 30 ಕಿ.ಮೀ ಪ್ರಯಾಣಿಸುತ್ತಾರಂತೆ. 6 ಮಂದಿಯ ಕುಟುಂಬದಲ್ಲಿ ಒಂದು ಕಾರು ಮತ್ತು 4 ಬೈಕ್ಗಳಿವೆ. ಇದೀಗ ದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ನೂರರ ಗಡಿ ದಾಟಿರುವುದರಿಂದ, ಯಾರೊಬ್ಬರು ಬಾಬುಲಾಲ್ ನಿರ್ಧಾರವನ್ನು ಗೇಲಿ ಮಾಡಲು ಆಗುವುದಿಲ್ಲ. ಏಕೆಂದರೆ, ಪೆಟ್ರೋಲ್ ದರ ಹೆಚ್ಚಳದ ಬರೆ ಎಲ್ಲರಿಗೆ ತಗುಲಿರುವುದು ನೂರಕ್ಕೆ ನೂರು ಸತ್ಯ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada