ಇಂದೋರ್: 60 ವರ್ಷದ ಪ್ರಯಾಣಿಕನ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಮಧುರೈನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಶನಿವಾರ ಸಂಜೆ ಇಂದೋರ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾನವು ದೇವಿ ಅಹಲ್ಯಾಬಾಯಿ ಹೋಳ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ಪ್ರಯಾಣಿಕರನ್ನು ವಿಮಾನ ಸಮೀಪವಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ, ಅಲ್ಲಿ ವೈದ್ಯರು ಆತ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು ಎಂದು ಅವರು ಹೇಳಿದರು.
‘ಪ್ರಾಥಮಿಕ ಮಾಹಿತಿಯ ಪ್ರಕಾರ, ಇಂಡಿಗೋ ಏರ್ಲೈನ್ಸ್ 6E-2088 ವಿಮಾನದಲ್ಲಿದ್ದ ಅತುಲ್ ಗುಪ್ತಾ (60) ಅವರ ಬಾಯಿಯಿಂದ ರಕ್ತಸ್ರಾವವಾಗುತ್ತಿತ್ತು ಮತ್ತು ಪ್ರಯಾಣದ ಮಧ್ಯದಲ್ಲಿ ಅವರ ಸ್ಥಿತಿ ಹದಗೆಟ್ಟಿತು’ ಎಂದು ವಿಮಾನ ನಿಲ್ದಾಣ ಪ್ರಭಾರಿ ನಿರ್ದೇಶಕ ಪ್ರಬೋಧ್ ಚಂದ್ರ ಶರ್ಮಾ ಹೇಳಿದ್ದಾರೆ.
ಮೃತನನ್ನು ಗುಪ್ತಾ ಎಂದು ಗುರುತಿಸೊಆಲಗಿದೆ. ಗುಪ್ತಾ ಅವರನ್ನು ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಕರೆದೊಯ್ದ ವೈದ್ಯರ ಪ್ರಕಾರ, ಅವರು ಈಗಾಗಲೇ ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದರು ಎಂದು ಶರ್ಮಾ ಹೇಳಿದರು.
ವಿಮಾನವು ತನ್ನ ಗಮ್ಯಸ್ಥಾನಕ್ಕೆ (ನವದೆಹಲಿ) ಸಂಜೆ 6:40 ಕ್ಕೆ ಹೊರಟಿತು. ಮೃತ ಗುಪ್ತಾ ನೋಯ್ಡಾ ನಿವಾಸಿ ಎಂದು ಏರೋಡ್ರೋಮ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಅವರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
https://play.google.com/store/apps/details?id=com.speed.newskannada