ಪ್ರಜಾಪ್ರಭುತ್ವದ ಮಹತ್ವ ಸಾರಲಿರುವ “ಪ್ರಜಾರಾಜ್ಯ” ಚಿತ್ರ ಇದೇ ಮಾರ್ಚ್ 3 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಈ ಚಿತ್ರ ಹಾಡು ಹಾಗೂ ಟ್ರೇಲರ್ ಮೂಲಕ ಜನರ ಮನ ಗೆದ್ದಿದೆ. ಉತ್ತಮ ಸಂದೇಶವಿರುವ ಚಿತ್ರ ಕೂಡ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎಂಬ ಭರವಸೆಯಿದೆ.ಇತ್ತೀಚೆಗೆ “ಪ್ರಜಾರಾಜ್ಯ” ಚಿತ್ರಕ್ಕಾಗಿ ಸಂದೀಪ್ ಹೆಗ್ಗದ್ದೆ ಬರೆದಿರುವ “ಏನಾಗಲಿ ಎದ್ದೇಳು” ಎಂಬ ಹಾಡು ವಿಜಯ್ ಪ್ರಕಾಶ್ ಅವರ ಕಂಠಸಿರಿಯಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಇತ್ತೀಚಿಗೆ ಜಿ.ಟಿ ಮಾಲ್ ನಲ್ಲಿ ಡಾ||ಪೂಜಾ ಪ್ರಶಾಂತ್ ಅವರು ಆಯೋಜಿಸಿದ್ದ ಮಕ್ಕಳ ಫ್ಯಾಷನ್ ಶೋನಲ್ಲಿ ಈ ಹಾಡು ಬಿಡುಗಡೆಯಾಯಿತು. ನಿರ್ಮಾಪಕ ಡಾ||ವರದರಾಜು ಅವರೆ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ವಿಜೇತ್ ಮಂಜಯ್ಯ ಸಂಗೀತ ನೀಡಿದ್ದಾರೆ.ಹಾಡು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ಮಾಪಕ ಡಾ||ವರದರಾಜು ಡಿ.ಎನ್, ಸದ್ಯದಲ್ಲೇ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಮಹತ್ವ ಸಾರುವ ನಮ್ಮ “ಪ್ರಜಾ ರಾಜ್ಯ” ಚಿತ್ರ ಮಾರ್ಚ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗೂ ಟ್ರೇಲರ್ ಗೆ ದೊರಕಿರುವ ಪ್ರತಿಕ್ರಿಯೆಗೆ ಮನತುಂಬಿ ಬಂದಿದೆ.ಈಗ ಬಿಡುಗಡೆಯಾಗಿರುವ “ಏನಾಗಲಿ ಎದ್ದೇಳು” ಹಾಡಂತೂ ನಿರೀಕ್ಷೆಗೂ ಮೀರಿ ಎಲ್ಲರ ಮನ ಸೆಳೆಯುತ್ತಿದೆ ಎಂದರು.ಪುನೀತ್ ರಾಜಕುಮಾರ್ ಅವರು ಮಾಡಿರುವ ಸತ್ಕಾರ್ಯ ನಮಗೆ ಸ್ಪೂರ್ತಿಯಾಗಬೇಕು. ಆ ನಿಟ್ಟಿನಲ್ಲಿ ನಾವು ಸಾಗಬೇಕು ಎಂದು ತಿಳಿಸಿದ ನಿರ್ಮಾಪಕ ಡಾ||ವರದರಾಜು ಅವರು, ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಐದು ಅನಾಥ ಮಕ್ಕಳಿಗೆ ವಿಶೇಷ ಉಡುಗೊರೆ ನೀಡಿದರು. ಚಿತ್ರದಲ್ಲಿ ನಟಿಸಿರುವ ಚಿಕ್ಕಹೆಜ್ಜಾಜಿ ಮಹದೇವ್ ಅವರು ಸಹ “ಪ್ರಜಾರಾಜ್ಯ” ದ ಬಗ್ಗೆ ಮಾತನಾಡಿದರು.ವಿಜಯ್ ಭಾರ್ಗವ್ ನಿರ್ದೇಶನದ ಈ ಚಿತ್ರದ ತಾರಾಬಳಗದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್, ನಾಗಾಭರಣ, ಡಾ||ವರದರಾಜು, ಅಚ್ಯತಕುಮಾರ್, ವಿಜಯ್ ಭಾರ್ಗವ, ಸುಧಾ ಬೆಳವಾಡಿ, ದಿವ್ಯ ಗೌಡ, ಸುಧಾರಾಣಿ, ಸಂಪತ್ ಮೈತ್ರೇಯ, ಚಿಕ್ಕಹೆಜ್ಜಾಜಿ ಮಹದೇವ್ ಮುಂತಾದವರಿದ್ದಾರೆ.ರಾಕೇಶ್ ಸಿ ತಿಲಕ್ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada