ಆರ್ ನಾಗೇಶ್

ಆರ್ ನಾಗೇಶ್ ಕರ್ನಾಟಕ ರಂಗಭೂಮಿಗೆ ಹೊಸ ದಾರಿಹಾಕಿಕೊಟ್ಟ ನವ್ಯ ಪರಂಪರೆಯಲ್ಲಿನ ಪ್ರಮುಖರು. ಅವರು ರಂಗನಟ, ನಿರ್ದೇಶಕ, ಬೆಳಕು ತಜ್ಞ, ರಂಗ ವಿನ್ಯಾಸಕ ಹೀಗೆ ರಂಗಭೂಮಿಯ ಹಲವಾರು ಆಯಾಮಗಳಲ್ಲಿ ದುಡಿದವರು.
ಆರ್. ನಾಗೇಶ್ 1943ರ ಮಾರ್ಚ್ 13ರಂದು ಬೆಂಗಳೂರು ಸಮೀಪದ ರಾಮೋಹಳ್ಳಿಯಲ್ಲಿ ಜನಿಸಿದರು. ತಂದೆ ರಾಮರಾಜ ಅರಸು. ತಾಯಿ ಲಕ್ಷ್ಮೀದೇವಮ್ಮ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿ ಮೊದಲು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯಲ್ಲಿ ನಂತರ, ತಮ್ಮ ಅಭಿರುಚಿಗೆ ತಕ್ಕಂತೆ ವಾರ್ತಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಗೇಶ್ ಹಲವಾರು ವರ್ಷಗಳ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು. ಕನ್ನಡವೆಂದರೆ ಅವರಿಗೆ ಪಂಚಪ್ರಾಣ. ಕನ್ನಡ ಸೇನಾನಿ ಮ. ರಾಮಮೂರ್ತಿ ಆವರ ಜೊತೆ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಕನ್ನಡ ಸಾಹಿತ್ಯ ಕಲಾ ಸಂಘವನ್ನು ಸ್ಥಾಪಿಸಿದರು. ಬಿ. ವಿ. ಕಾರಂತರು ಬೆಂಗಳೂರಿಗೆ ಬರಲು ಆರ್. ನಾಗೇಶ್ ಪ್ರಮುಖ ಕಾರಣಕರ್ತರಾದರು.
1950-60ರ ದಶಕದಲ್ಲಿ ಕೆ. ಗುಂಡಣ್ಣ, ಪರ್ವತವಾಣಿ, ಎ.ಎಸ್. ಮೂರ್ತಿ, ಕೈವಾರ ರಾಜಾರಾಯರ ನಗೆ ನಾಟಕಗಳು ಹೆಚ್ಚು ಪ್ರಚಲಿತವಿದ್ದ ಕಾಲ. ಅಂಥ ಸಂದರ್ಭದಲ್ಲಿ ವೈಚಾರಿಕ ನಾಟಕಗಳನ್ನು ರಂಗಕ್ಕೆ ತಂದವರಲ್ಲಿ ನಾಗೇಶ್ ಪ್ರಮುಖರು.
1969 ರಲ್ಲಿ ಪ್ರೊ.ಬಿ.ಚಂದ್ರಶೇಖರ್‌ ನಿರ್ದೇಶನದಲ್ಲಿ ಸಿ. ಆರ್. ಸಿಂಹರ ಅಭಿನಯದಲ್ಲಿ ಗಿರೀಶ್‌ಕಾರ್ನಾಡ್‌ ಅವರ ‘ತೊಘಲಕ್‌’ ನಾಟಕ ಪ್ರದರ್ಶನ ಸಂಘಟಿಸಿದ ನಾಗೇಶ್‌ ಆ ಮೂಲಕ ಹಲವಾರು ಕಲಾವಿದರು ಮತ್ತು ತಂತ್ರಜ್ಞರು ಹವ್ಯಾಸಿ ರಂಗಭೂಮಿಗೆ ಪಾದಾರ್ಪಣೆ ಮಾಡಲು ಕಾರಣರಾದರು. ಈ ನಾಟಕ ಪ್ರದರ್ಶನದ ನಂತರ ಇಡೀ ರಂಗಭೂಮಿಯ ದಿಕ್ಕೇ ಬದಲಾಯಿತು. ಬಿ. ವಿ. ಕಾರಂತರ ನಿರ್ದೇಶನದಲ್ಲಿ ಅವರು ನಿರ್ಮಿಸಿದ ‘ಸ್ವರ್ಗಕ್ಕೆ ಮೂರೇ ಬಾಗಿಲು’ ಮತ್ತೊಂದು ವಿಶಿಷ್ಟ ಯಶಸ್ವೀ ಪ್ರದರ್ಶನವೆನಿಸಿತು. 1972ರಲ್ಲಿ ರವೀಂದ್ರ ಕಲಾಕ್ಷೇತ್ರದ ಹೊರಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಜತೆಗೂಡಿ ಬಿ.ವಿ.ಕಾರಂತರ ನಿರ್ದೇಶನದಲ್ಲಿ ‘ದೊರೆ ಈಡಿಪಸ್‌’, ‘ಸಂಕ್ರಾಂತಿ’, ಹಾಗೂ ‘ಜೋಕುಮಾರಸ್ವಾಮಿ’ ನಾಟಕ ಪ್ರದರ್ಶನ ಮಾಡಿದರು. ಇದು ರಂಗಭೂಮಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. ಈ ಕಾರ್ಯಕ್ರಮದ ನಂತರ ರಂಗಸಂಪದ, ಬೆನಕ, ನಟರಂಗ, ಸಮುದಾಯ, ಕಲಾಗಂಗೋತ್ರಿ, ಕಾಲಾನಂತರದಲ್ಲಿ ಸ್ಪಂದನ ಮುಂತಾದ ಪ್ರಸಿದ್ಧ ತಂಡಗಳು ಸೃಷ್ಟಿಯಾದವು. ನೂರಾರು ಕಲಾವಿದರು ಬೆಳಕಿಗೆ ಬಂದರು. ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಇದೊಂದು ಸ್ವರ್ಣಯುಗ.
1970ರ ದಶಕ ವೈಚಾರಿಕ ನಾಟಕಗಳ ಸುಗ್ಗಿಕಾಲ. 1972ರಲ್ಲಿ ಜೆ. ಲೋಕೇಶ್, ಆನಂದ್, ಹರಿಕೃಷ್ಣರೊಡಗೆ ‘ರಂಗ ಸಂಪದ’; 1984ರಲ್ಲಿ ಮಾಲತಿರಾವ್ ಅವರೊಡನೆ ‘ಸೂತ್ರಧಾರ’; 1989ರಲ್ಲಿ ಎಲ್. ಕೃಷ್ಣಪ್ಪ, ಮಾನು, ಹುಲಿವಾನ ಗಂಗಾಧರಯ್ಯ ಅವರೊಡನೆ ಜನ ನಾಟ್ಯಮಂಡಲಿ ಹೀಗೆ ಹಲವಾರು ನಾಟ್ಯ ಸಂಸ್ಥೆಗಳೊಡನೆ ನಾಗೇಶ್ ಒಡನಾಟದಲ್ಲಿದ್ದರು. ಶ್ರೀರಂಗ, ಲಂಕೇಶ್, ಕಾರ್ನಾಡ್, ಚಂದ್ರಶೇಖರ ಪಾಟೀಲ, ಟಿ. ಎನ್. ಸೀತಾರಾಮ್, ಚಂದ್ರಶೇಖರ ಕಂಬಾರರ ನಾಟಕಗಳನ್ನು ರಂಗಕ್ಕೆ ತಂದುದೇ ಅಲ್ಲದೆ ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ, ಶ್ರೀಕೃಷ್ಣ ಆಲನಹಳ್ಳಿ, ಕಾರಂತರ ಕಾದಂಬರಿಗಳಿಗೆ ರಂಗ ರೂಪಕೊಟ್ಟವರು ಆರ್ ನಾಗೇಶ್. ಹೀಗೆ ನಾಗೇಶ್ ಕನ್ನಡದ ಮಹತ್ವದ ಪ್ರತಿಭೆಗಳೊಂದಿಗೆ ಕೂಡಿ ಕಥೆಯಾಧಾರಿತ ನಾಟಕಗಳಿಗೆ ಹೊಸ ಪ್ರೇಕ್ಷಕ ವರ್ಗ ಹುಟ್ಟಲು ಕಾರಣಕರ್ತರೂ ಆದರು.
ಟಿ. ಎನ್. ಸೀತಾರಾಮ್ Seetharam Talagavar ಅವರು ರಚಿಸಿ, ನಾಗೇಶ್ ಅವರು ನಿರ್ದೇಶಿಸಿದ ‘ಆಸ್ಫೋಟ’ ಮತ್ತು ‘ನಮ್ಮೊಳಗೊಬ್ಬ ನಾಜೂಕಯ್ಯ’ ನಾಟಕಗಳು ನೂರಾರು ಪ್ರದರ್ಶನಗಳನ್ನು ಕಂಡ ಅತ್ಯಂತ ಯಶಸ್ವೀ ಮತ್ತು ಮಹತ್ವ ಪ್ರಯೋಗಗಳಲ್ಲಿ ಸೇರಿದಂತಹವು. ಆರ್. ನಾಗೇಶ್ ಮತ್ತು ಸೀತಾರಾಮ್ ಜೋಡಿಯಾಗಿ ‘ಆಸ್ಫೋಟ’ ನಾಟಕವನ್ನು ಆಧರಿಸಿ ಬೆಂಗಳೂರು ದೂರದರ್ಶನಕ್ಕೆ ಧಾರಾವಾಹಿಯಾಗಿಸಿದ್ದು, ಅದರ ತಾಜಾತನ ಮತ್ತು ವಿಶಿಷ್ಟ ಭಾಷೆಯಿಂದಾಗಿ ಅತ್ಯಂತ ಯಶಸ್ವಿ ಧಾರಾವಾಹಿ ಎನಿಸಿಕೊಂಡಿತ್ತು.
ನೀ ಕೊಡೆ ನಾ ಬಿಡೆ, ಕುಬಿ ಮತ್ತು ಇಯಾಲ, ತಾಮ್ರ ಪತ್ರದಲ್ಲಿ ನೀಡಿದ ಮನೋಜ್ಞ ಅಭಿನಯ; ಪ್ರಸನ್ನರ ನಿರ್ದೇಶನದ ಗೆಲಿಲಿಯೋ, ಕದಡಿದ ನೀರು, ವೈಕುಂಠರಾಜುರವರ ಸನ್ನಿವೇಶ ನಾಟಕಗಳಿಗೆ ಬೆಳಕಿನ ವಿನ್ಯಾಸ; ಅಸಂಗತ ನಾಟಕಗಳಿಗೆ ರಚಿಸಿದ ರಂಗಸಜ್ಜಿಕೆ; ಚೋಮ, ತಬರನ ಕಥೆ, ಯಯಾತಿ, ಕೃಷ್ಣೇಗೌಡನ ಆನೆ, ಮುಂತಾದವುಗಳಿಗೆ ಮಹತ್ವದ ನಿರ್ದೇಶನ, ಹಲವಾರು ತಂಡಗಳನ್ನು ಸೇರಿಸಿ ಬಿ. ಚಂದ್ರಶೇಖರ್ ನಿರ್ದೇಶಿಸಿದ ತುಘಲಕ್ ಇವೇ ಮುಂತಾದುವು ಆರ್ ನಾಗೇಶರ ವಿಭಿನ್ನ ವೈಶಿಷ್ಟ್ಯಪೂರ್ಣ ಸಾಧನೆಗಳು.
ರಂಗಭೂಮಿಯ ಕುರಿತು ದೂರದರ್ಶನಕ್ಕಾಗಿ ನಾಗೇಶ್ ‘ರಂಗವಿಹಂಗಮ’ ಎಂಬ ಸಾಕ್ಷಚಿತ್ರ ತಯಾರಿಸಿದ್ದರು. ರಂಗಭೂಮಿ ಮಾಸಿಕ ಪತ್ರಿಕೆ ‘ಸೂತ್ರಧಾರ’ ಹೊರತಂದ ಕೀರ್ತಿಯೂ ಆರ್‌.ನಾಗೇಶ್‌ ಅವರಿಗೆ ಸಲ್ಲುತ್ತದೆ.
ಕರ್ನಾಟಕ ನಾಟಕ ಅಕಾಡೆಮಿ, ಕೆಂಪೇಗೌಡ, ಆರ್ಯಭಟ, ರಾಜ್ಯೋತ್ಸವ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ಆರ್ ನಾಗೇಶರನ್ನು ಅರಸಿ ಬಂದವು. 2003-06 ನೇ ಸಾಲಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ನಾಗೇಶ್‌ ಸೇವೆ ಸಲ್ಲಿಸಿದ್ದರು. ಜಿಲ್ಲೆಯ ನಾಟಕ ತಂಡಗಳಿಗೆ ನೀಡಿದ ಪ್ರಾತಿನಿಧ್ಯ, ತಿಂಗಳ ಬೆಳಕಲ್ಲಿ ರಂಗದ ಬೆರಗು-ದಾವಣಗೆರೆಯಲ್ಲಿ ಪ್ರತಿ ತಿಂಗಳ ವಿಶಿಷ್ಟ ನಾಟಕ ಪ್ರದರ್ಶನ ಮುಂತಾದವು ಅವರ ಮನೋಜ್ಞ ಕಾರ್ಯಸಾಧನೆಗಳಾಗಿವೆ.
2010 ಸೆಪ್ಟಂಬರ್ 18ರಂದು ಆರ್ ನಾಗೇಶರ ನಿರ್ದೇಶನದ ಪೂರ್ಣಚಂದ್ರ ತೇಜಸ್ವಿಯರ ‘ಕೃಷ್ಣೇಗೌಡನ ಆನೆ’ ಕಥೆಯ ಪ್ರಸಿದ್ಧ ನಾಟಕರೂಪವು ತನ್ನ ನೂರನೆಯ ಪ್ರದರ್ಶನವನ್ನು ಬೆಂಗಳೂರಿನಲ್ಲಿ ಕಾಣುತ್ತಿತ್ತು. ಅದಕ್ಕೆ ಆರ್. ನಾಗೇಶರು ಅದು ಹೇಗೆತಾನೇ ಗೈರು ಹಾಜರು ಎಂದು ಮಿತ್ರರು ಅಚ್ಚರಿಪಡುತ್ತಿದ್ದರು. ಈ ಮಹಾನ್ ರಂಗಯಾತ್ರಿ ಇತ್ತಕಡೆ ಈ ಭೂಲೋಕವೆಂಬ ರಂಗಯಾತ್ರೆಯಿಂದ ಹೊರಕ್ಕೆ ತಮ್ಮ ಯಾತ್ರೆಯನ್ನು ಪ್ರಾರಂಭಿಸಿಬಿಟ್ಟಿದ್ದರು. ನಾಡು ಅವರನ್ನು ನಾಯಕ ತಾರೆಯರಂತೆ ಮೆರೆಸಲಿಲ್ಲ ನಿಜ. ಆದರೆ ಅವರು ಈ ನಾಡಿನ ಕಲಾರಂಗದಲ್ಲಿ ಅಘೋಷಿತ ನಿತ್ಯತಾರೆಯಾಗಿ ಮಿನುಗುವಂತಹ ಶ್ರೇಷ್ಠರು. ಈ ನಮ್ಮ ಕರ್ನಾಟಕದಲ್ಲಿ ರಂಗಯಾತ್ರಿಯಾಗಿ ಹಾದುಹೋದ ಈ ಕ್ರಿಯಾಶೀಲ ಆರ್ ನಾಗೇಶ್ ಎಂಬ ವ್ಯಕ್ತಿತ್ವಕ್ಕೆ ನಮ್ಮ ನಮನ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಂಸಗೀತೆಯಲ್ಲಿ ಬದುಕುತ್ತಿದ್ದ,ಪುನೀತ್ ರಾಜ್ಕುಮಾರ್!

Mon Mar 14 , 2022
ಪುನೀತ್ ರಾಜ್‌ಕುಮಾರ್ ಅವರ ಕೊನೆಯ ವಾಣಿಜ್ಯ ಚಿತ್ರವಾದ ‘ಜೇಮ್ಸ್’ ಮಾರ್ಚ್ 17 ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಕಳೆದ ಅಕ್ಟೋಬರ್‌ನಲ್ಲಿ ಅವರ ಹಠಾತ್ ನಿಧನದ ಆಘಾತದಿಂದ ಅಭಿಮಾನಿಗಳು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲವಾದ್ದರಿಂದ, ಸ್ವಾಭಾವಿಕವಾಗಿ, ಇದು ನಟನ ಅತಿದೊಡ್ಡ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತದೆ. ಜೇಮ್ಸ್ ಹೊರತುಪಡಿಸಿ, ಕರ್ನಾಟಕದ ವನ್ಯಜೀವಿಗಳ ಕುರಿತು ಅಮೋಘವರ್ಷ ಅವರ ಸಾಕ್ಷ್ಯಚಿತ್ರದಲ್ಲಿ ಪುನೀತ್ ಕಾಣಿಸಿಕೊಳ್ಳಲಿದ್ದಾರೆ. ಅವರು ನಾಗೇಂದ್ರ ಪ್ರಸಾದ್ ಅವರ ‘ಲಕ್ಕಿ ಮ್ಯಾನ್’ ನಲ್ಲಿ ಪ್ರಭುದೇವ ಅವರೊಂದಿಗೆ ಕಾಲು […]

Advertisement

Wordpress Social Share Plugin powered by Ultimatelysocial