ಮೊನ್ನೆಯಷ್ಟೇ ನಾಲ್ಕನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ ಕಾರ್ಯಕ್ರಮ ಜರುಗಿತು. ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ ಒಂದರಲ್ಲಿ ನಡೆದ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 2022ರಲ್ಲಿ ಬಿಡುಗಡೆಗೊಂಡು ಅತ್ಯುತ್ತಮ ಸಾಧನೆ ಮಾಡಿದ ಚಿತ್ರಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಳೆದ ವರ್ಷ ಅಬ್ಬರಿಸಿದ ಕೆಜಿಎಫ್ ಚಾಪ್ಟರ್ 2 ಹಾಗೂ ಕಾಂತಾರ ಚಿತ್ರಗಳು ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡವು. ನಿರ್ದೇಶನದ ಜತೆಗೆ ನಟನೆಯನ್ನೂ ಸಹ ಮಾಡಿ ಕಾಂತಾರ ಚಿತ್ರದ ದೊಡ್ಡ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ರಿಷಬ್ ಶೆಟ್ಟಿಗೂ ಸಹ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಒಲಿದು ಬಂದಿತ್ತು. ಅತ್ಯುತ್ತಮ ನಟ ಪ್ರಶಸ್ತಿ ರಿಷಬ್ ಶೆಟ್ಟಿ ಪಾಲಾಯಿತು.
ಇನ್ನು ತನಗೆ ಬಂದ ಪ್ರಶಸ್ತಿಯನ್ನು ಸ್ವೀಕರಿಸಲು ವೇದಿಕೆ ಮೇಲೆ ಬಂದ ರಿಷಬ್ ಶೆಟ್ಟಿಗೆ ಸ್ಯಾಂಡಲ್ವುಡ್ನ ಎವರ್ಗ್ರೀನ್ ಕ್ವೀನ್ ರಮ್ಯಾ ಪ್ರಶಸ್ತಿಯನ್ನು ಪ್ರದಾನ ಮಾಡಿ ಶುಭ ಕೋರಿದರು. ಪ್ರಶಸ್ತಿ ಪಡೆದುಕೊಂಡ ಬಳಿಕ ಮಾತನಾಡಿದ ರಿಷಬ್ ಶೆಟ್ಟಿ ತಮ್ಮ ಕಾಲೇಜು ದಿನಗಳ ಕ್ರಶ್ ಯಾರೆಂಬುದನ್ನು ಬಿಚ್ಚಿಟ್ಟಿದ್ದಾರೆ.
ಮೊದಲಿಗೆ ಪ್ರಶಸ್ತಿ ಬಂದದ್ದಕ್ಕೆ ಖುಷಿ ಹಂಚಿಕೊಂಡ ರಿಷಬ್ ಶೆಟ್ಟಿ ಸಿನಿಮಾ ವಿಮರ್ಶಕರೆಂದರೆ ಭಯ ಎಂದರು. ಚಿತ್ರಗಳನ್ನು ಮಾಡುವಾಗ ಏನು ಬರೆದುಬಿಡ್ತಾರೋ, ಎಷ್ಟು ಸ್ಟಾರ್ ಕೊಡ್ತಾರೋ ಎನ್ನುವ ಭಯ ಇರುತ್ತೆ, ಅಂಥವರು ಈಗ ಇಂತಹ ಅವಾರ್ಡ್ ಕಾರ್ಯಕ್ರಮವನ್ನು ನಡೆಸಿ ಉತ್ತಮ ಕೆಲಸ ಮಾಡಿದವರಿಗೆ ಅಭಿನಂದಿಸಲು ಮುಂದಾಗಿರುವುದು ನಿಜಕ್ಕೂ ಖುಷಿಯ ವಿಚಾರ ಎಂದರು. ಅಲ್ಲದೇ ನಾಲ್ಕು ವರ್ಷಗಳ ಹಿಂದೆ ಸಣ್ಣ ಹೊಟೇಲ್ನಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಒಂದನೇ ಆವೃತ್ತಿ ನಡೆದಿತ್ತು, ಈಗ ದೊಡ್ಡ ಹೊಟೇಲ್ನಲ್ಲಿ ನಡೆದಿದೆ, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟಕ್ಕೆ ನಡೆಯಲಿ ಎಂದರು.
ಕಾರ್ಯಕ್ರಮದ ಆಯೋಜಕರಿಗೆ ಧನ್ಯವಾದ ತಿಳಿಸಿದ ರಿಷಬ್ ಶೆಟ್ಟಿ ಪ್ರಶಸ್ತಿಯನ್ನು ತನ್ನ ನೆಚ್ಚಿನ ನಟಿ ರಮ್ಯಾ ಅವರ ಕೈನಲ್ಲಿ ಕೊಡಿಸಿದ್ದು ಇನ್ನೂ ಖುಷಿಯ ವಿಚಾರ ಎಂದರು. ಏಕೆಂದರೆ ರಮ್ಯಾ ಅವರು ನಮ್ಮ ಕಾಲೇಜ್ ಕ್ರಶ್ ಎಂದು ರಿಷಬ್ ಶೆಟ್ಟಿ ತಿಳಿಸಿದರು. ರಿಷಬ್ ಶೆಟ್ಟಿ ಹೇಳಿದ ಮಾತನ್ನು ಕೇಳಿ ನಾನು ಹೇಗೆ ನಿಮ್ಮ ಕಾಲೇಜ್ ಕ್ರಶ್, ನಾನು ಅಷ್ಟೊಂದು ದೊಡ್ಡವಳಾ ಎನ್ನುವ ರೀತಿ ಪ್ರತಿಕ್ರಿಯಿಸಿದರು. ಈ ಸಂದರ್ಭದಲ್ಲಿ ಉತ್ತರಿಸಿದ ರಿಷಬ್ ಶೆಟ್ಟಿ ಅಂದರೆ ನೀವು ಬೇಗ ಇಂಡಸ್ಟ್ರಿಗೆ ಬಂದ್ರಿ, ನಾವು ಲೇಟ್ ಎಂಟ್ರಿ ಎಂದು ತಿಳಿಸಿದರು.
ಪ್ರಶಸ್ತಿ ಗೆದ್ದವರ ಪಟ್ಟಿ: ಈ ಬಾರಿಯ ಚಂದನವನ ಫಿಲ್ಮ್ ಕ್ರಿಟಿಕ್ ಅವಾರ್ಡ್ನಲ್ಲಿ ‘ಕಾಂತಾರ’ ಚಿತ್ರದ ಶಿವನ ಪಾತ್ರಕ್ಕಾಗಿ ‘ಅತ್ಯುತ್ತಮ ನಟ ಪ್ರಶಸ್ತಿಯನ್ನು ರಿಷಬ್ ಶೆಟ್ಟಿ ಪಡೆದರು ಹಾಗೂ ಗಾಳಿಪಟ 2 ಚಿತ್ರಕ್ಕಾಗಿ ಶರ್ಮಿಳಾ ಮಾಂಡ್ರೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಇನ್ನುಳಿದಂತೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಕೂಡ ‘ಕಾಂತಾರ’ ಪಾಲಾಯಿತು. ಅತ್ಯುತ್ತಮ ಸಂಗೀತ ಕಾಂತಾರ ಚಿತ್ರಕ್ಕಾಗಿ ಅಜನೀಶ್ ಲೋಕನಾಥ್ ಪಡೆದುಕೊಂಡರೆ, ಅತ್ಯುತ್ತಮ ಸಾಹಸ ಸಂಯೋಜನೆಗಾಗಿ ವಿಕ್ರಮ್ ಮೋರ್ ಸಾಹಸ ಸಂಯೋಜನೆಗಾಗಿ ಪ್ರಶಸ್ತಿ ಸ್ವೀಕರಿಸಿದರು.
ಯಶ್ ಹಾಗೂ ಪ್ರಶಾಂತ್ ನೀಲ್ ಜೋಡಿಯ ‘KGF’- 2 ಸಿನಿಮಾ ಒಟ್ಟು ಮೂರು ಪ್ರಶಸ್ತಿಗಳು ಬಾಚಿಕೊಂಡಿದೆ. ಛಾಯಾಗ್ರಹಣಕ್ಕಾಗಿ ಭುವನ್ ಗೌಡ, ಅತ್ಯುತ್ತಮ ಸಂಕಲನಕ್ಕಾಗಿ ಪ್ರಜ್ವಲ್ ಕುಲಕರ್ಣಿ ಹಾಗೂ ಅತ್ಯುತ್ತಮ ವಿಎಫ್ಎಕ್ಸ್ಗಾಗಿ ಉದಯ ರವಿ ಹೆಗಡೆ ಪ್ರಶಸ್ತಿ ಪಡೆದುಕೊಂಡರು. ‘777 ಚಾರ್ಲಿ’ ಚಿತ್ರದ ನಿರ್ದೇಶನಕ್ಕಾಗಿ ಕಿರಣ್ ರಾಜ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada