ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪೂರ್ವ ವಲಯ ವ್ಯಾಪ್ತಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೋಟರಿ ಬೆಂಗಳೂರು ರಾಜ್ ಮಹಲ್ ವಿಲಾಸ್, ರೋಟರಿ ಬೆಂಗಳೂರು ಹೆಚ್.ಎಸ್.ಆರ್ ಹಾಗೂ ಐವ್ಯಾಲ್ಯೂ ಇನ್ಫೋಸೆಲ್ಯೂಷನ್ಸ್ ಫ್ರೈ.ಲಿ.ವತಿಯಿಂದ ವೈದ್ಯಕೀಯ ಸೇವೆಗಳಿಗಾಗಿ ಪರಿಸರ ಸ್ನೇಹಿ ಸಂಚಾರಿ ‘ಇ-ಸಂಜೀವಿನಿ’ 12 ದ್ವಿಚಕ್ರ ವಾಹನಗಳನ್ನು ಉಚಿತವಾಗಿ ಹಸ್ತಾಂತರಿಸಿದರು.ಈ ಹಿಂದೆ ಸಂಜಯ್ ನಗರ ವಾರ್ಡ್ ನಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೋಟರಿ ಬೆಂಗಳೂರು ರಾಜ್ ಮಹಲ್ ವಿಲಾಸ್ ಪ್ರಾಯೋಗಿಕವಾಗಿ 2 ಇ-ಸಂಜೀವಿನಿ ವಾಹನಗಳನ್ನು ಹಸ್ತಾಂತರಿಸಿತ್ತು. ಅದು ಯಶಸ್ವಿಯಾದ ಹಿನ್ನೆಲೆ ಇಂದು ಪೂರ್ವ ವಲಯ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಿಗೆ ಇನ್ನೂ 12 ಪರಿಸರ ಸ್ನೇಹಿ ದ್ವಿಚಕ್ರ ವಾಹನಗಳನ್ನು ನೀಡಿರುತ್ತಾರೆ.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರಾದ ಶ್ರೀ ಭೈರತಿ ಸುರೇಶ್ ರವರು, ರೋಟರಿ ರಾಜಮಹಲ್ ವಿಲಾಸ್ ಜನರಿಗೆ ಸಾಕಷ್ಟು ಸಹಾಯ ಮಾಡುತ್ತಿರುವ ಸಂಸ್ಥೆಯಾಗಿದ್ದು, ಕೋವಿಡ್ ಸಮಯದಲ್ಲಿ ಪಾಲಿಕೆಯ ಜೊತೆ ಕೈಜೋಡಿಸಿ ಬಹಳಷ್ಟು ಕೆಲಸ ಮಾಡಿದೆ. ಈ ಹಿಂದೆ ಸಂಜಯ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾರಂಭಿಸಿದ್ದ ಇ-ಸಂಜೀವಿನಿ ಯೋಜನೆಯನ್ನು ಇಂದು ಪೂರ್ವ ವಲಯ ವ್ಯಾಪ್ತಿಯ ಇನ್ನಿತರೆ ಪ್ರಾಥಮಿ ಆರೋಗ್ಯ ಕೇಂದ್ರಗಳಿಗೂ ವಿಸ್ತರಿಸಲಾಗಿದೆ. ಈ ರೀತಿ ಸಮಾಜಕ್ಕೆ ನೀಡುತ್ತಿರುವ ಕೊಡುವೆ ಶ್ಲಾಘನೀಯವಾದುದು ಎಂದು ತಿಳಿಸಿದರು.ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತ ರವರು ಮಾತನಾಡಿ, ಪಾಲಿಕೆಯ ಪೂರ್ವ ವಲಯ ವ್ಯಾಪ್ತಿಯ ಸಂಜಯ್ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನರಿಗೆ ತ್ವರಿತಗತಿಯಲ್ಲಿ ವೈದ್ಯಕೀಯ ಸೇವೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ವತಿಯಿಂದ ಪ್ರಾರಂಭಿಸಿದ್ದ ಇ-ಸಂಜೀವಿನಿ ಯೋಜನೆಯು ಇಂದು ಪೂರ್ವ ವಲಯದ ಹೆಬ್ಬಾಳ, ಪುಲಕೇಶಿನಗರ ಹಾಗೂ ಶಿವಾಜಿನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿಸ್ತರಿಸಿದೆ. ಇದನ್ನು ಪೂರ್ವ ವಲಯ ಸೇರಿದಂತೆ ಇನ್ನಿತರೆ ವಲಯಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.ರೋಟರಿ ರಾಜಮಹಲ್ ವಿಲಾಸ್, ರೋಟರಿ ಹೆಚ್.ಎಸ್.ಆರ್ ಹಾಗೂ ಐವ್ಯಾಲ್ಯೂ ಇನ್ಫೋಸೆಲ್ಯೂಷನ್ಸ್ ಫ್ರೈ.ಲಿ. ಉಚಿತವಾಗಿ 12 ಎಲೆಕ್ಟ್ರಿಕ್ ಸಂಚಾರಿ ವೈದ್ಯಕೀಯ ದ್ವಿಚಕ್ರ ವಾಹನ(ಇ-ಸಂಜೀವಿನಿ)ಗಳನ್ನು ನೀಡಿದ್ದು, ಈ ಸೇವೆ ಮಾಡಿರುವ ಸಂಸ್ಥೆಗಳ ಕಾರ್ಯವೈಖರಿಗೆ ಶ್ಲಾಘನೀಯ ಎಂದು ಹೇಳಿದರು.ಸಂಜಯ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಈಗಾಗಲೇ 2 ದ್ವಿಚಕ್ರ ವಾಹನ ನೀಡಿದ್ದು, ಇದೀಗ ಇನ್ನೂ 12 ದ್ವಿಚಕ್ರ ವಾಹನಗಳನ್ನು ನೀಡಿರುವುದರಿಂದ, ಪೂರ್ವ ವಲಯ ವ್ಯಾಪ್ತಿಯ ಸ್ಥಳೀಯ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಲು ಬಹಳ ಉಪಯೋಗಕರಿಯಾಗಿದೆ. ಇದರಿಂದ ತಕ್ಷಣ ಮನೆ ಬಾಗಿಲಿಗೆ ತೆರಳಿ ಆರೋಗ್ಯ ಸೇವೆಯನ್ನು ನೀಡಬಹುದಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಸಿಬ್ಬಂದಿ, ಎನ್ಎನ್ಎಂ, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ಆಶಾಕಾರ್ಯಕರ್ತರು ಇಮ್ಯುನೈಸೇಶನ್, ವಿಶೇಷ ಆರೋಗ್ಯ ಶಿಬಿರ, ಪೌಷ್ಟಿಕ ಕಾರ್ಯಕ್ರಮ, ಅಂಗನವಾಡಿ ತಪಾಸಣೆ, ಲಸಿಕೆ ಹಾಕುವುದು, ಸಮೀಕ್ಷೆ ಮಾಡುವುದು ಸೇರಿದಂತೆ ಇನ್ನಿತರೆ ಕಾರ್ಯಗಳಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಳಸಿಕೊಳ್ಳಲಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಾಸಕರಾದ ಭೈರತಿ ಸುರೇಶ್, ವಲಯ ಆಯುಕ್ತರಾದ ಮನೋಜ್ ಜೈನ್, ವಲಯ ಜಂಟಿ ಆಯುಕ್ತರಾದ ಶಿಲ್ಪಾ, ಆರೋಗ್ಯ ವೈದ್ಯಾಧಿಕಾರಿ ಡಾ. ವೇದಾ, ರೋಟರಿ ಅಂತರಾಷ್ಟ್ರೀಯ ಡಿಸ್ಟಿçಕ್ಟ್ ಗವರ್ನರ್ 3190 ರೋಟರಿಯನ್ ಡಾ. ಫಜಲ್ ಮಹಮೂದ್, ರೋಟರಿ ಬೆಂಗಳೂರು ರಾಜಮಹಲ್ ವಿಲಾಸ್ ಅಧ್ಯಕ್ಷ ರೋಟರಿಯನ್ ಶಂಕರ್ ಸುಬ್ರಮಣಿಯನ್, ರೋಟರಿ ಬೆಂಗಳೂರು ಹೆಚ್.ಎಸ್.ಆರ್ ನ ಅಧ್ಯಕ್ಷ ರೋಟರಿಯನ್ ಕೆ.ಸಿ.ಎನ್ ರೆಡ್ಡಿ, ಐವ್ಯಾಲ್ವು ಇನ್ಫೋಸೆಲ್ಯೂಷನ್ಸ್ ಫ್ರೈ.ಲಿ. ನ ಸಿಎಫ್ಒ ಸ್ವರೂಪ್ ಉಪಸ್ಥಿತರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada