ರುಕ್ಮಿಣಿದೇವಿ ಅರುಂಡೇಲ್ ಅವರು ಥಿಯೋಸೋಫಿಸ್ಟರಾಗಿ, ಭರತನಾಟ್ಯ ಕಲಾವಿದೆಯಾಗಿ, ನೃತ್ಯ ದಿಗ್ದರ್ಶಕರಾಗಿ, ನೃತ್ಯ ಸಂಯೋಜಕರಾಗಿ, ಪ್ರಸಿದ್ಧ ಕಲಾಕ್ಷೇತ್ರ ಹುಟ್ಟುಹಾಕಿದವರಾಗಿ ಭಾರತದಲ್ಲಿ ಜನಜನಿತರು.
ರುಕ್ಮಿಣಿದೇವಿ ಅರುಂಡೇಲ್ 1904ರ ಫೆಬ್ರುವರಿ 29ರಂದು ಜನಿಸಿದರು. ಭಾರತಿಯ ಸಾಂಸ್ಕೃತಿಕ ಇತಿಹಾಸದಲ್ಲಿ ಭರತನಾಟ್ಯಕಲೆಯನ್ನು ಅದರ ಮೂಲಸ್ವರೂಪವಾದ ‘ಸಾಧಿರ್’ ಎಂಬ ಪದ್ಧತಿಯಲ್ಲಿ ಪುನರೋತ್ಥಾನಗೈದವರೆಂದು ರುಕ್ಮಿಣಿದೇವಿಯವರನ್ನು ನಮ್ಮ ದೇಶದ ವಿದ್ವಾಂಸರು ಪರಿಗಣಿಸಿದ್ದಾರೆ. ಅಂದಿನ ದಿನಗಳಲ್ಲಿ ಭರತನಾಟ್ಯವೆಂಬುದು ಕೇವಲ ದೇವಸ್ಥಾನಗಳ ಸೇವಾಕರ್ತೆಯರು ಮತ್ತು ದೇವದಾಸಿಯರಿಗೆ ಸೀಮಿತವಾಗಿದ್ದು, ಅದನ್ನು ಭಾರತೀಯ ಸಾಂಸ್ಕೃತಿಕ ರಂಗದ ಮುಖ್ಯವೇದಿಕೆಗೆ ತಂದ ಶ್ರೇಯಸ್ಸು ರುಕ್ಮಿಣಿದೇವಿ ಅವರಿಗೆ ಸಲ್ಲುತ್ತದೆ. ಭರತನಾಟ್ಯ ಮಾತ್ರವಲ್ಲದೆ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿನ, ಕಲೆ ಮತ್ತು ಕೌಶಲ್ಯದ ಪುನರುತ್ಥಾನಕ್ಕಾಗಿ ರುಕ್ಮಿಣಿದೇವಿ ಅವರು ಅಪಾರ ಸಾಧನೆ ಮಾಡಿದವರಾಗಿದ್ದಾರೆ. ಪ್ರಾಣಿಸಂಕುಲದ ಉಳಿವಿನ ಬಗ್ಗೆ ಕೂಡಾ ಅವರು ವಹಿಸಿದ ಶ್ರಮ ಗಣನೀಯ ಪ್ರಮಾಣದ್ದಾಗಿದೆ.ಅಂದಿನ ದಿನಗಳಲ್ಲಿ ಮೇಲ್ಪಂಗಡದ ಜನ ಭರತನಾಟ್ಯದಲ್ಲಿ ಪಾಲ್ಗೊಳ್ಳುವುದು ಅಶ್ಲೀಲವಾದ ಕಾರ್ಯವೆನ್ನುವಂತಹ ಸಂಕುಚಿತ ಮನೋಭಾವವುಳ್ಳ ವಾತಾವರಣವಿತ್ತು. ಭರತನಾಟ್ಯದಲ್ಲಿದ್ದ ಕಲೆ, ಸೌಂದರ್ಯ ಮತ್ತು ಆಧ್ಯಾತ್ಮ ದರ್ಶನಗಳನ್ನು ಮನಗಂಡ ರುಕ್ಮಿಣಿದೇವಿ ಅವರು ಭರತನಾಟ್ಯವನ್ನು ಸ್ವತಃ ಅಭ್ಯಸಿಸಿ ಸಾರ್ವಜನಿಕ ಪ್ರತಿಭಟನೆಗಳನ್ನೂ ಲೆಕ್ಕಿಸದೆ ಪ್ರಮುಖ ವೇದಿಕೆಗಳಲ್ಲಿ ಪ್ರದರ್ಶಿಸಿದರು.ಇಂಡಿಯಾ ಟುಡೇ ಪತ್ರಿಕೆ ಪರಿಗಣಿಸಿರುವ ನೂರು ಪ್ರಮುಖ ದೇಶ ನಿರ್ಮಾಪಕರಲ್ಲಿ ರುಕ್ಮಿಣಿ ದೇವಿ ಅವರು ಓರ್ವ ಪ್ರಮುಖರಾಗಿ ಪ್ರಸ್ತಾಪಿತರಾಗಿದ್ದು, ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ, ಕಾಳಿದಾಸ್ ಸಂಮಾನ್ ಮುಂತಾದ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ರಾಜ್ಯಸಭೆಯ ಪ್ರಥಮ ಮಹಿಳಾ ಸದಸ್ಯರಾಗಿ ಕೂಡಾ ಹಲವು ಕಾಲ ರುಕ್ಮಿಣಿ ದೇವಿ ಅವರು ಸೇವೆ ಸಲ್ಲಿಸಿದ್ದರು. ಜನತಾ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ರುಕ್ಮಿಣಿ ದೇವಿ ಅರುಂಡೇಲ್ ಅವರನ್ನು ರಾಷ್ಟ್ರಪತಿಯಾಗುವಂತೆ ಆಹ್ವಾನಿಸಿದ್ದನ್ನು ಅವರು ನಿರಾಕರಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: