ಸರಸ್ವತಿ ವಟ್ಟಂ ಅಂದರೆ, ತಕ್ಷಣ ನೆನಪಾಗೋದು ಅಂದಿನ ದಿನಗಳಲ್ಲಿ ದೂರದರ್ಶನದಲ್ಲಿ ಕಾಣುತ್ತಿದ್ದ ಮಧುರ ಧ್ವನಿಯ, ಸಾಂಸ್ಕೃತಿಕ ಅಭಿವ್ಯಕ್ತಿಯ ಪ್ರಶಾಂತ ಮಂದಹಾಸ.
ಜನವರಿ 20, ಸರಸ್ವತಿ ವಟ್ಟಂ ಅವರು ಜನಿಸಿದ ದಿನ. ಹುಟ್ಟಿ ಓದಿ ಬೆಳೆದ ಊರು ಮೈಸೂರು. ತಂದೆ ಪತ್ರಿಕಾಲೋಕದ ಭೀಷ್ಮರಲ್ಲಿ ಒಬ್ಬರೆನಿಸಿದ್ದ ಕೃಷ್ಣ ವಟ್ಟಂ. ವಾಣಿಜ್ಯ ಪದವಿ ನಂತರದಲ್ಲಿ ವಾಣಿಜ್ಯ ಮತ್ತು ಮಾರುಕಟ್ಟೆಗಳಂತಹ ವಿಚಾರಗಳಲ್ಲಿ ಭಾರತ ಮತ್ತು ಅಮೆರಿಕಗಳಲ್ಲಿ ಅವರು ಎಂಬಿಎ ಮತ್ತು ಹಲವು ಸ್ನಾತಕೋತ್ತರ ಕಿರೀಟಗಳನ್ನೇರಿಸಿಕೊಂಡವರು.
ಮನೆಯಲ್ಲಿದ್ದ ಮಧ್ಯಮ ವರ್ಗದ ಸರಳ, ಸದಭಿರುಚಿಗಳ ಸಾಂಸ್ಕೃತಿಕ ವಾತಾವರಣ, ತಂದೆಯವರಿಗಿದ್ದ ವ್ಯಾಪಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಒಡನಾಟ ಇವೆಲ್ಲ ಸರಸ್ವತಿ ವಟ್ಟಂ ಅವರ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದವು.
ಸರಸ್ವತಿ ವಟ್ಟಂ ಹಲವು ವರ್ಷ ಭಾರತ ಮತ್ತು ಅಮೆರಿಕದ ಕಾಲೇಜುಗಳಲ್ಲಿ ಬೋಧಿಸಿದರು. “ದಿನಾ ಖುಷಿ ಖುಷಿಯಾಗಿ ಹೋಗಿ ಬೋಧಿಸಿ ಎಲ್ಲ ವಿದ್ಯಾರ್ಥಿಗಳೊಂದಿಗೆ ಅಪ್ತಭಾವ ಹೊಂದಿದ್ದೆ ” ಎನ್ನುವ ಅವರಿಗೆ ಇಂದೂ ಅವರ ವಿದ್ಯಾರ್ಥಿಗಳನೇಕರು ಆಪ್ತ ಸಂವಹನದಲ್ಲಿದ್ದಾರೆ.
ಸರಸ್ವತಿ ವಟ್ಟಂ ದೂರದರ್ಶನದಲ್ಲಿನ ಕನ್ನಡ ವಾರ್ತಾ ವಾಚಿಕೆಗೆ ಶೋಭೆ ತಂದವರಲ್ಲೊಬ್ಬರು. ಅಲ್ಲಿ ಅವರ ಭಾಗವಹಿಕೆ 15 ವರ್ಷಗಳ ಸುದೀರ್ಘ ಕಾಲದ್ದು. ಇಂದೂ ದೂರದರ್ಶನವೆಂದರೆ ಜನ ಆಪ್ತವಾಗಿ ನೆನೆಯುವ ಪ್ರಮುಖ ಹೆಸರುಗಳಲ್ಲಿ ಸರಸ್ವತಿ ವಟ್ಟಂ ಒಬ್ಬರು.
ಸರಸ್ವತಿ ವಟ್ಟಂ ಅವರಿಗೆ ಸಂಗೀತ ಮತ್ತು ದಾಸ ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಅವರು ಈ ನಿಟ್ಟಿನ ಆಸಕ್ತಿಯನ್ನು ಇಂದೂ ಶ್ರದ್ಧೆಯಿಂದ ಮತ್ತು ಆಪ್ತತೆಯಿಂದ ಪೋಷಿಸಿಕೊಂಡು ನಡೆದಿದ್ದಾರೆ. ಸಮಾನಾಸಕ್ತಿಯ ಸಂಘಟನೆಗಳಲ್ಲಿ ಸಕ್ರಿಯರೂ ಆಗಿದ್ದಾರೆ.
ಸರಸ್ವತಿ ವಟ್ಟಂ ವಿಶಿಷ್ಟ ಸ್ನೇಹಮಯಿ. ಸ್ವಯಂ ಮಗುವಿನಂತಿದ್ದು ಎಲ್ಲರಲ್ಲೂ ಅಂತದ್ದೇ ಭಾವವನ್ನು ಗುರುತಿಸುವ ಮಮತಾಹೃದಯಿ. ಮತ್ತೊಬ್ಬರನ್ನು ಮೆಚ್ಚುವ ಅವರ ರೀತಿಯೇ ಛಂದ. ಅದು ನಮಗೆ ಮತ್ತಷ್ಟು ಕೆಲಸ ಮಾಡಬೇಕು, ಇಂತಹ ಹೃದಯವಂತಿಕೆಯ ಸ್ಪಂದನೆ ಲೋಕದಲ್ಲಿ ನಮಗೆ ಎಲ್ಲೆಲೂ ಕಾಣಬೇಕು ಎಂಬ ವ್ಯಾಪಕ ಅಭಿಲಾಷೆ ಉದ್ಭವಿಸುವಂತೆ ಮಾಡುವಂತದ್ದು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: