ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ಮಾರಾಟ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಈಗ ತಮ್ಮ ಪತ್ನಿಗೆ ಕೋಟ್ಯಂತರ ಬೆಲೆ ಬಾಳುವ ಕೆಲವು ಆಸ್ತಿಗಳನ್ನು ನೀಡಿದ್ದಾರೆ.ಪ್ರಕರಣದ ಬಳಿಕ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಸಂಬಂಧದಲ್ಲಿ ತೊಡಕಾಗಿದೆ ಎನ್ನಲಾಗುತ್ತಿತ್ತು, ಆದರೆ ಈಗ ನೋಡಿದರೆ ಭಾರಿ ಬೆಲೆ ಬಾಳುವ ಆಸ್ತಿಗಳನ್ನು ರಾಜ್ ಕುಂದ್ರಾ, ಪತ್ನಿ ಶಿಲ್ಪಾ ಶೆಟ್ಟಿಗೆ ವರ್ಗಾಯಿಸಿದ್ದಾರೆ.ಉದ್ಯಮಿಯಾಗಿರುವ ರಾಜ್ ಕುಂದ್ರಾ ಮುಂಬೈ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಹಲವು ಆಸ್ತಿಗಳನ್ನು ಹೊಂದಿದ್ದಾರೆ. ಈಗ ಮುಂಬೈನಲ್ಲಿರುವ ಕೋಟ್ಯಂತರ ಮೌಲ್ಯದ ಕೆಲವು ಆಸ್ತಿಗಳನ್ನು ಶಿಲ್ಪಾ ಶೆಟ್ಟಿಗೆ ವರ್ಗಾಯಿಸಿದ್ದಾರೆ.ಮುಂಬೈನ ಜುಹುವಿನಲ್ಲಿನ ಒಂದು ಐಶಾರಾಮಿ ಅಪಾರ್ಟ್ಮೆಂಟ್ನಲ್ಲಿ ಐದು ಫ್ಲ್ಯಾಟ್ಗಳನ್ನು ರಾಜ್ ಕುಂದ್ರಾ ಹೊಂದಿದ್ದರು. ಆ ಐದೂ ಫ್ಲ್ಯಾಟ್ಗಳನ್ನು ರಾಜ್ ಕುಂದ್ರಾ ಈಗ ಶಿಲ್ಪಾ ಶೆಟ್ಟಿಗೆ ವರ್ಗಾಯಿಸಿದ್ದಾರೆ. ಈ ಐದು ಫ್ಲ್ಯಾಟ್ಗಳ ಒಟ್ಟು ಮೌಲ್ಯ 38.50 ಕೋಟಿ. ಈ ಆಸ್ತಿ ವರ್ಗಾವಣೆಯ ದಾಖಲೆಗಳನ್ನು ಸ್ಕ್ವೇರ್ಫೀಟ್ ಇಂಡಿಯಾ ಬಿಡುಗಡೆ ಮಾಡಿದೆ.ಓಷನ್ ವೀವ್ ಹೆಸರಿನ ಐಷಾರಾಮಿ ಅಪಾರ್ಟ್ಮೆಂಟ್ನ ಫ್ಲ್ಯಾಟ್ಗಳನ್ನು ವರ್ಗಾವಣೆ ಮಾಡಿದ್ದು, ಈ ಆಸ್ತಿಯ ಒಟ್ಟು ವಿಸ್ತೀರ್ಣ 5996 ಚದರ ಅಡಿ ಆಗಿದ್ದು. ಆಸ್ತಿಯು ಶಿಲ್ಪಾ ಶೆಟ್ಟಿ ಹೆಸರಿನ ಜನವರಿ 24 ರಂದು ನೊಂದಾವಣಿ ಆಗಿದೆ. ಆಸ್ತಿ ನೊಂದಾವಣಿ ಶುಲ್ಕವೇ 1.92 ಕೋಟಿ ಪಾವತಿಸಲಾಗಿದೆ. ಈಗ ನೊಂದಾವಣೆ ಆಗಿರುವ ಮನೆಯನ್ನೇ ತಮ್ಮ ವಾಸ್ತವ್ಯದ ವಿಳಾಸವೆಂದೂ ಈ ದಂಪತಿ ದಾಖಲೆಗಳಲ್ಲಿ ಹೇಳಿದ್ದಾರೆ ಎಂದು ಸ್ಕ್ವೇರ್ಫೀಟ್ ಇಂಡಿಯಾ ಹೇಳಿದೆ.ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಕಳೆದ ವರ್ಷ ಸಾಕಷ್ಟು ಕೆಟ್ಟ ಸಮಯವನ್ನು ಕಂಡರು. ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸುಮಾರು 60 ದಿನಗಳ ಕಾಲ ಕುಂದ್ರಾ ಜೈಲು ವಾಸ ಅನುಭವಿಸಿದರು. ರಾಜ್ ಕುಂದ್ರಾ ಜೈಲು ಸೇರಿದ ಸಂದರ್ಭ ಶಿಲ್ಪಾ ಶೆಟ್ಟಿ ಸಾಕಷ್ಟು ಮೂದಲಿಕೆಗಳಿಗೆ ಗುರಿಯಾಗಬೇಕಾಯಿತು. ಇದೇ ಸಮಯದಲ್ಲಿ ಕೆಲವು ಮಂದಿ ಶಿಲ್ಪಾ ಶೆಟ್ಟಿ ಮೇಲೆಯೂ ವಂಚನೆ ಪ್ರಕರಣಗಳನ್ನು ದಾಖಲಿಸಿದರು. ಶಿಲ್ಪಾ ಶೆಟ್ಟಿ ವಿರುದ್ಧ ಕೆಲವು ಮಾಧ್ಯಮಗಳು ಮಾನಹಾನಿಕಾರಕ ಸುದ್ದಿಗಳನ್ನು ಪ್ರಕಟಿಸಿದವು. ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ ಅವರುಗಳು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಯೂ ಆರೋಪಿ ಎಂದರು. ಈ ಪ್ರಕರಣದ ಬಗ್ಗೆ ಶಿಲ್ಪಾ ಶೆಟ್ಟಿ ಬಹುತೇಕ ಮೌನವಾಗಿಯೇ ಇದ್ದರು.ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಜುಲೈ 19ರಂದು ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಮುಂಬೈನಲ್ಲಿ ಸ್ಥಳೀಯ ನಟಿಯರಿಂದ ಅಶ್ಲೀಲ ವಿಡಿಯೋ ಚಿತ್ರೀಕರಿಸಿಕೊಂಡು ಅದನ್ನು ಲಂಡನ್ನಲ್ಲಿರುವ ತಮ್ಮ ಸಂಬಂಧಿಯೊಬ್ಬರ ಸಂಸ್ಥೆಯ ಮೂಲಕ ಹಾಟ್ಶಾಟ್ಸ್ ಹೆಸರಿನ ಅಪ್ಲಿಕೇಶನ್ಗೆ ಅಪ್ಲೋಡ್ ಮಾಡಿಸುತ್ತಿದ್ದರು, ಆ ಮೂಲಕ ದಿನಕ್ಕೆ ಲಕ್ಷಾಂತರ ಹಣವನ್ನು ರಾಜ್ ಕುಂದ್ರಾ ಗಳಿಸುತ್ತಿದ್ದರು ಎಂದು ಮುಂಬೈ ಪೊಲೀಸರು ಆರೋಪ ಮಾಡಿದ್ದರು. ಸೆಪ್ಟೆಂಬರ್ 20 ರಂದು ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದರು ಕುಂದ್ರಾ. ಜೈಲಿನಿಂದ ಹೊರಬಂದ ಕೆಲ ದಿನಗಳ ಬಳಿಕ ಮಾತನಾಡಿದ ಕುಂದ್ರಾ, ”ನನಗೂ ಆ ಪ್ರಕರಣಕ್ಕೂ ಸಂಬಂಧವೇ ಇಲ್ಲವೆಂದು, ನನ್ನ ಕುರಿತು ಮಾಧ್ಯಮಗಳಲ್ಲಿ ಆಧಾರವಿಲ್ಲದ ಅನೇಕ ಮಾಹಿತಿಗಳು ಬಿತ್ತರ ಆಗಿವೆ. ದಾರಿ ತಪ್ಪಿಸುವಂತಹ ಸುದ್ದಿಗಳನ್ನು ಬಿತ್ತರ ಮಾಡಲಾಗಿದೆ. ನನ್ನ ಜೀವನದಲ್ಲಿ ನಾನು ನೀಲಿ ಸಿನಿಮಾ ನಿರ್ಮಾಣ ಮತ್ತು ವಿತರಣೆ ಮಾಡುವುದರಲ್ಲಿ ಭಾಗಿ ಆಗಿಲ್ಲ. ನನ್ನ ಮೌನವನ್ನು ದೌರ್ಬಲ್ಯ ಎಂದು ಪರಿಗಣಿಸಲಾಗಿದೆ. ಈ ಪ್ರಕರಣ ಈಗ ವಿಚಾರಣೆಯ ಹಂತದಲ್ಲಿದೆ. ಹಾಗಾಗಿ ನಾನು ಸ್ಪಷ್ಟನೆ ನೀಡಲಾಗುವುದಿಲ್ಲ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ದುರದೃಷ್ಟ ಏನೆಂದರೆ, ವಿಚಾರಣೆ ಮುಗಿಯುವುದಕ್ಕಿಂತಲೂ ಮುನ್ನವೇ ಮಾಧ್ಯಮದವರು ನನ್ನನ್ನು ಆರೋಪಿಯ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಇದರಿಂದ ನನಗೂ ಮತ್ತು ನನ್ನ ಕುಟುಂಬದವರಿಗೆ ನಿರಂತರವಾಗಿ ನೋವಾಗಿದೆ” ಎಂದಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada