೨೦೨೦ ರಲ್ಲಿ ತೆರೆಕಂಡ ಶಿವಾಜಿ ಸೂರತ್ಕಲ್ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ಈಗ ಶಿವಾಜಿ ಮತ್ತೆ ಬರುತ್ತಿದ್ದಾರೆ, ಮತ್ತೊಂದು ಕೇಸ್ ನೊಂದಿಗೆ. ಚಿತ್ರದ ಶೀರ್ಷಿಕೆ – “ಶಿವಾಜಿ ಸೂರತ್ಕಲ್, ದಿ ಮಿಸ್ಟೀರಿಯಸ್ ಕೇಸ್ ಆಫ಼್ ಮಾಯಾವಿ’. ಯಾರು ಈ ಮಾಯಾವಿ? ಶಿವಾಜಿ ತನಗೆ ಎದುರಾದ ಮತ್ತೊಂದು ವಿಚಿತ್ರ ಪ್ರಕರಣವನ್ನು ಹೇಗೆ ಪರಿಹರಿಸುತ್ತಾರೆ ಎಂಬುದೇ ಈ ಸಿನಿಮಾದ ಮೂಲ ಕಥೆ.ಈ ಬಾರಿ ನಾವು, ಶಿವಾಜಿಯವರ ಖಾಸಗಿ ಜೀವನವನ್ನು ಮತ್ತಷ್ಟು ಹತ್ತಿರದಿಂದ ನೋಡುತ್ತೇವೆ. ಚಿತ್ರವೂ ಮೂರು ಕಾಲಘಟ್ಟಗಳನ್ನು ಒಳಗೊಂಡಿದ್ದು, ಮೂರು ತಲೆಮಾರುಗಳನ್ನೂ ಒಟ್ಟಿಗೆ ತರಲಿದೆ. ಶಿವಾಜಿಯವರ ತಂದೆ ವಿಜೇಂದ್ರ ಸೂರತ್ಕಲ್ ಮೊದಲ ಬಾರಿಗೆ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಪಾತ್ರವನ್ನು ಹಿರಿಯ ನಟ ನಾಸರ್ ಅಭಿನಯಿಸುತ್ತಿದ್ದಾರೆ. ಅಷ್ಟೇ ಅಲ್ಲ. ಚಿತ್ರದಲ್ಲಿ ಶಿವಾಜಿಯ ಮಗಳಾದ ಸಿರಿ ಸೂರತ್ಕಲ್ ಕೂಡ ಬರುತ್ತಾರೆ. ಶಿವಾಜಿ ಅವಳನ್ನು ಮುದ್ದಿನಿಂದ ಚುಕ್ಕಿ ಎನ್ನುತ್ತಾರೆ. ಆ ಮುದ್ದು ಮಗಳು ಶಿವಾಜಿಗೆ ಸಿಕ್ಕಿದ್ದೆಲ್ಲಿ? ಈ ಪ್ರಶ್ನೆಗೆ ಉತ್ತರ ಬೇಕಾದಲ್ಲಿ, ನೀವು ಸಿನಿಮಾ ನೋಡಲೇ ಬೇಕು.
ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ೨೧ ದಿನಗಳ ಚಿತ್ರೀಕರಣ ಮುಗಿಸಿ ತಂಡ ಬೆಂಗಳೂರಿಗೆ ಮರಳಿದೆ. ಇನ್ನು ಬೆಂಗಳೂರಿನಲ್ಲಿ ಚಿತ್ರೀಕರಣ ಮುಂದುವರಿಯುತ್ತದೆ. ರಮೇಶ್ ಅರವಿಂದ್ ಶಿವಾಜಿ, ರಾಘು ರಮಣಕೊಪ್ಪ ಹಾಗೂ ರಾಧಿಕಾ ನಾರಾಯಣ್ ಅವರು ಮೊದಲ ಚಿತ್ರದಲ್ಲಿ ಕಾಣಿಸಿಕೊಂಡ ಪಾತ್ರಗಳಲ್ಲಿ ಮತ್ತೆ ನಿಮ್ಮ ಮುಂದೆ ಬರಲಿದ್ದಾರೆ. ಹೊಸ ತಾರಾಗಣದಲ್ಲಿ ಮೇಘನಾ ಗಾಂವ್ಕರ್ ಡಿಸಿಪಿ ದೀಪಾ ಕಾಮತ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಿರಿಯ ನಟರಾದ ಶೋಭರಾಜ್, ಶ್ರೀನಿವಾಸ ಪ್ರಭು ತಾರಾಗಣವನ್ನು ಸೇರಿದ್ದಾರೆ. ಯುವ ಕಲಾವಿದ ಸುಮಂತ್ ಭಟ್ ಕೂಡ ಒಂದೊಳ್ಳೆ ಪಾತ್ರ ವಹಿಸುತ್ತಿದ್ದಾರೆ. ಸೃಷ್ಟಿ ಶೆಟ್ಟಿ ಹಾಗೂ ಮಧುರಾ ಗೌಡ ಈ ಚಿತ್ರದಿಂದ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.ತಾಂತ್ರಿಕ ವರ್ಗಕ್ಕೆ ಬಂದರೆ, ಡೇಟ್ಸ್ ಕಾರಣದಿಂದಾಗಿ, ಚಿತ್ರದ ಛಾಯಾಗ್ರಹಣವನ್ನು ದರ್ಶನ್ ಅಂಬಟ್ ವಹಿಸಿಕೊಂಡಿದ್ದಾರೆ. ಇವರು ಬಹುದೊಡ್ಡ ಛಾಯಾಗ್ರಾಹಕ ಮಧು ಅಂಬಟ್ ಅವರ ಮಗ. ಈಗಾಗಲೇ ಕೆಲವು ಮಲಯಾಳಂ ಹಾಗೂ ತೆಲುಗು ಚಿತ್ರಗಳಿಗೆ ಕ್ಯಾಮರಾ ಹಿಡಿದಿರುವ ಇವರು, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಚಿತ್ರದ ಸಂಗೀತವನ್ನು ನಕುಲ್ ಅಭಯಂಕರ್ ಸಂಯೋಜಿಸುತ್ತಿದ್ದಾರೆ. ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ಅಂಜನಾದ್ರಿ ಸಿನಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದು ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ.ಇದೇ ಮಹಾಶಿವರಾತ್ರಿಯಂದು, ಅಂದರೆ ಮಾರ್ಚ್ ೧, ೨೦೨೨ ರಂದು, ಬೆಳಿಗ್ಗೆ ೧೦:೦೧ ಕ್ಕೆ ಚಿತ್ರದ ಎರಡನೇ ಪೋಸ್ಟರ್ ಬಿಡುಗಡೆಗೊಳ್ಳುತ್ತಿದೆ. ಶಿವಾಜಿ ಸುರತ್ಕಲ್ ನ ಮೊದಲ ಸಿನಿಮಾ ೨೦೨೦ ಮಹಾಶಿವರಾತ್ರಿಯಂದು ತೆರೆ ಕಂಡಿತ್ತು. ಎರಡು ವರ್ಷಗಳ ನಂತರ ಅದೇ ಸಂದರ್ಭದಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆಯಾಗುತ್ತಿರುವುದು ಸಂತೋಷದ ಸಂಗತಿ.ನಿಮ್ಮೆಲ್ಲರ ಆಶೀರ್ವಾದ ಹಾಗೂ ಹಾರೈಕೆ ಸದಾ ನಮ್ಮ ಮೇಲಿರಲಿ. ಹಿಂದೆ ನಮಗೆ ಎಲ್ಲಾ ರೀತಿಯಲ್ಲಿಯೂ ಬೆಂಬಲವಾಗಿ ನಿಂತ ನೀವು ಈಗಲೂ ನಮ್ಮೊಂದಿಗೆ ನಿಲ್ಲುತ್ತೀರಿ ಎಂದು ಆಶಿಸುತ್ತೇವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada