‘ಬಿಲ್ಲು ಮತ್ತು ಬಾಣ’ದ ಹೋರಾಟ ಈಗ ಸುಪ್ರೀಂ ಕೋರ್ಟ್ ಅಂಗಳ ತಲುಪಲಿದೆ. ಭಾರತೀಯ ಚುನಾವಣಾ ಆಯೋಗವು (ECI) ಮುಖ್ಯಮಂತ್ರಿ ಏಕನಾಥ್ ಶಿಂದೆ ಬಣವನ್ನು ಅಧಿಕೃತ ಶಿವಸೇನಾ ಎಂದು ಗುರುತಿಸಿ, ಬಿಲ್ಲು ಬಾಣವನ್ನು ಪಕ್ಷದ ಚಿಹ್ನೆಯಾಗಿ ನಿಗದಿ ಪಡಿಸಿದೆ. ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.ಉದ್ಧವ್ ಠಾಕ್ರೆ ಅವರ ತಂದೆ ಬಾಳ್ ಠಾಕ್ರೆ ಅವರು 1966ರಲ್ಲಿ ಶಿವಸೇನಾ ಸ್ಥಾಪಿಸಿದರು. ಈಗ ಪಕ್ಷವು ಅವರ ಮಗನ ಕೈತಪ್ಪಿದೆ. ಇದರಿಂದ ಸಿಟ್ಟಿಗೆದ್ದಿರುವ ಉದ್ಧವ್ ಠಾಕ್ರೆ ಬಣವು, ಮುಂಬಯಿನ ಶಿವಸೇನಾ ಭವನದಲ್ಲಿ ಸೋಮವಾರ ಸಭೆ ಸೇರುತ್ತಿದೆ. ಠಾಕ್ರೆ ಬಣದ ಎಲ್ಲ ಶಾಸಕರು, ಮುಖಂಡರು ಭಾಗಿಯಾಗುವ ಸಾಧ್ಯತೆ ಇದೆ.ಈ ನಡುವೆ ಉದ್ಧವ್ ಠಾಕ್ರೆ ಅವರ ಬಣವು ಆನ್ಲೈನ್ ಸಮರಕ್ಕೆ ಮುಂದಾಗಿದೆ. ಶಿವಸೇನಾದ ಅಧಿಕೃತ ವೆಬ್ಸೈಟ್ ( shivsena.in) ಅನ್ನು ಸ್ಥಗಿತಗೊಳಿಸಲಾಗಿದೆ. ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹೆಸರನ್ನು ‘ಶಿವಸೇನಾ-ಉದ್ಧವ್ ಬಾಳಾಸಾಹೇಬ್ ಠಾಕ್ರೆ’ ಎಂದು ಬದಲಿಸಲಾಗಿದೆ. ಇದರೊಂದಿಗೆ ಆ ಖಾತೆಯ ಅಧಿಕೃತತೆ (ಬ್ಲೂ ಟಿಕ್) ಮರೆಯಾಗಿದೆ. ಶಿವಸೇನಾ ವೆಬ್ಸೈಟ್ ತೆರೆದುಕೊಳ್ಳದಿದ್ದರೂ, ಟ್ವಿಟರ್ ಖಾತೆಲ್ಲಿ ಅದರ ಲಿಂಕ್ ಹಾಗೇ ಉಳಿಸಿಕೊಳ್ಳಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada