‘ಜೇಮ್ಸ್’ ಚಿತ್ರಕ್ಕೆ ಪುನೀತ್ ಧ್ವನಿಯನ್ನು ತಂತ್ರಜ್ಞಾನದ ನೆರವಿನಿಂದ ರಿ ಕ್ರಿಯೇಷನ್ ಮಾಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್, ”ಈ ವಿಚಾರ ನನಗೆ ನಿಜಕ್ಕೂ ಆಶ್ಚರ್ಯ ಮೂಡಿಸಿದೆ” ಎಂದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೇಮ್ಸ್ ಚಿತ್ರಕ್ಕೆ ಪುನೀತ್ ರಾಜ್ಕುಮಾರ್ ಅವರ ಧ್ವನಿಯನ್ನೇ ಪುನರ್ ಬಳಕೆ ಮಾಡಿಕೊಳ್ಳಬಹುದು ಎಂಬ ವಿಷಯ ತಿಳಿದು ಸಂತೋಷವಾಗಿದೆ.
ಈ ಪ್ರಯೋಗವನ್ನು ಬಿಡುಗಡೆಗೂ ಮುನ್ನವೇ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದರು.
”ಈ ರೀತಿಯ ತಂತ್ರಜ್ಞಾನವೂ ಇದೆಯೇ ಎಂಬುದೇ ವಿಶೇಷ. ತಂತ್ರಜ್ಞರು ಜೇಮ್ಸ್ ಚಿತ್ರದ ಕಂಪ್ಲೀಟ್ ವಾಯ್ಸ್ ಅನ್ನು ರಿ ಗೇಯ್ನ್ ಮಾಡಬಹುದು ಅಂತ ಹೇಳಿದ್ದಾರೆ. ಇದು ಯಾವ ರೀತಿ ಸಾಧ್ಯವಾಗುತ್ತದೆ ಎಂಬ ವಿಚಾರ ನನಗೆ ಗೊತ್ತಿಲ್ಲ. ಈ ವಿಷಯ ತಿಳಿದ ಮೇಲೆ ಮೊದಲೇ ಈ ತಂತ್ರಜ್ಞಾನ ಬಳಕೆ ಮಾಡಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು,” ಎಂದರು.
ಹತ್ತು ‘ಕೆಜಿಎಫ್’ ಚಿತ್ರಕ್ಕೆ ಒಂದು ‘ಪುಷ್ಪ’ ಸಿನಿಮಾ ಸಮಾನ ಎಂಬ ತೆಲುಗಿನ ನಿರ್ಮಾಪಕನ ಹಳೆಯ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ”ಇದು ನನಗೆ ಬೇಕಿಲ್ಲದ ವಿಚಾರ. ಅದನ್ನು ಜನತೆಗೆ ಬಿಡೋಣ. ಯಾವ ವಿಚಾರ ಏನಾಗುತ್ತಿದೆ ಎಂದು ದೇವರಿಗೆ ತಿಳಿದಿದೆ. ಯಾವುದನ್ನೂ ವಿವಾದ ಮಾಡಬಾರದು,” ಎಂದರು.
ಶಿವರಾಜ್ ಕುಮಾರ್ ಅವರು ಶಕ್ತಿಧಾಮದಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರ ಉದ್ಘಾಟನೆಗೆಂದು ಮೈಸೂರಿಗೆ ಆಗಮಿಸಿದ್ದರು. ಶಕ್ತಿಧಾಮದಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ಆಯೋಜಿಸಲಾಗಿದ್ದು, ಮಕ್ಕಳಿಗೆ ಹಲವು ಪಠ್ಯೇತರ ಚಟುವಟಿಕೆಗಳನ್ನು ಈ ಶಿಬಿರದಲ್ಲಿ ಕಲಿಸಲಾಗುತ್ತದೆ. ಮಕ್ಕಳಿಗೆ ಹಾಡು, ನೃತ್ಯ ಸೇರಿದಂತೆ ಇತರೆ ಜನಪದ ಕಲೆಗಳ ಪರಿಚಯವನ್ನು ಸಹ ಈ ಶಿಬಿರದಲ್ಲಿ ಮಾಡಿಕೊಡಲಾಗುತ್ತದೆ.
ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ”ನಮ್ಮ ಮಕ್ಕಳು ಮಾತ್ರವಲ್ಲ ನೆರೆಯ ಎಲ್ಲ ಮಕ್ಕಳು ಈ ಶಿಬಿರಕ್ಕೆ ಬರಬೇಕು. ಶಿಬಿರದಲ್ಲಿ ಪಾಲ್ಗೊಂಡು ಹೊಸ ಹೊಸ ಚಟುವಟಿಕೆಗಳನ್ನು ಮಾಡಬೇಕು, ಇತರ ಮಕ್ಕಳೊಟ್ಟಿಗೆ ಬೆರೆಯಬೇಕು. ಕೇವಲ ಪಾಠವಲ್ಲ, ಮನೊರಂಜನೆ, ಆಟವೂ ಮಕ್ಕಳಿಗೆ ಬೇಕಿದೆ. ಎಲ್ಲ ಮಕ್ಕಳು ಇಲ್ಲಿ ಬಂದು ಚಟುವಟಿಕೆಗಳಲ್ಲಿ ಭಾಗವಹಿಸಿ ಶಕ್ತಿಧಾಮವನ್ನು ಬೆಳಗಿಸಬೇಕು ಎಂಬುದು ನನ್ನ ಆಸೆ” ಎಂದರು.
”ನನಗೆ ಮಕ್ಕಳೊಂದಿಗೆ ಬೆರೆಯಲು, ನಿಮ್ಮೊಂದಿಗೆ ಬೆರೆಯಲು ಬಹಳ ಇಷ್ಟವಾದ್ದರಿಂದ ನಾನು ಪದೇ-ಪದೇ ಇಲ್ಲಿಗೆ ಬರುತ್ತಲೇ ಇರುತ್ತೇನೆ” ಎಂದು ಇದೇ ಸಂದರ್ಭದಲ್ಲಿ ಶಿವಣ್ಣ ಹೇಳಿದರು. ಕಾರ್ಯಕ್ರಮದಲ್ಲಿ ಮಕ್ಕಳೊಟ್ಟಿಗೆ ಸೇರಿ ಶಿವಣ್ಣ ಢೊಳ್ಳು ಭಾರಿಸಿದರು. ಬುಟ್ಟಿ ಹೆಣೆಯುವುದು ಕುತೂಹಲದಿಂದ ವೀಕ್ಷಿಸಿದರು. ಇನ್ನಿತರ ಕಾರ್ಯಕ್ರಮಗಳನ್ನು ನೋಡಿದರು. ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್ ಸಹ ಜೊತೆಯಾಗಿದ್ದರು.
ಇನ್ನು ‘ಜೇಮ್ಸ್’ ವಿಚಾರಕ್ಕೆ ಮರಳುವುದಾದರೆ, ‘ಜೇಮ್ಸ್’ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಪಾತ್ರಕ್ಕೆ ಶಿವರಾಜ್ ಕುಮಾರ್ ಧ್ವನಿ ನೀಡಿದ್ದಾರೆ. ಸಿನಿಮಾಕ್ಕೆ ಶಿವರಾಜ್ ಕುಮಾರ್ ನೀಡಿರುವ ಧ್ವನಿಯನ್ನೇ ಬಳಸಿಕೊಂಡು ಹೈದರಾಬಾದ್ನ ಸೌಂಡ್ ಎಂಜಿನಿಯರ್ಗಳು ಪುನೀತ್ ರಾಜ್ಕುಮಾರ್ ಧ್ವನಿ ತೆಗೆದಿದ್ದಾರೆ. ಏಪ್ರಿಲ್ 22 ನೇ ತಾರೀಖಿನಿಂದ ‘ಜೇಮ್ಸ್’ ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿರಗಳಲ್ಲಿ ಪುನೀತ್ ರಾಜ್ಕುಮಾರ್ ಧ್ವನಿಯಲ್ಲಿ ಸಿನಿಮಾವನ್ನು ನೋಡಬಹುದಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada