ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಕೊನೆ ಚುನಾವಣೆ ಆದರೂ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ. ಅಳೆದು ತೂಗಿ ಕೊನೆಗೂ ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ.2023ರ ಚುನಾವಣೆ ಅವರ ಪಾಲಿಗೆ ಬಹುತೇಕ ಕೊನೆ ಚುನಾವಣೆ. ಕೊನೆಯ ಅವಕಾಶಕ್ಕಾಗಿ ಪುತ್ರ ಯತೀಂದ್ರ ಭವಿಷ್ಯದ ಅವಕಾಶಗಳಿಗೆ ತೊಡಕಾಗಬೇಡಿ ಎಂಬ ಕುಟುಂಬದ ಆಗ್ರಹಕ್ಕೆ ಮಣಿದು, ತಮ್ಮ ಪಾಲಿಗೆ ಸುರಕ್ಷಿತ ಎಂದು ಭಾವಿಸಿದ್ದ ವರುಣದಿಂದ ಸ್ಪರ್ಧಿಸುವ ಚಿಂತನೆ ಕೈಬಿಟ್ಟಿದ್ದಾರೆ. ಬೆಂಬಲಿಗರ ಒತ್ತಾಸೆಯಂತೆ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಜತೆಗೆ, ಬಾದಾಮಿ ಕ್ಷೇತ್ರದಿಂದಲೂ ಅಭ್ಯರ್ಥಿಯಾಗಲು ಬಯಸಿದ್ದಾರೆ. ಆದರೆ, ಎರಡು ಕಡೆ ಸ್ಪರ್ಧೆಗೆ ಹೈಕಮಾಂಡ್ ಒಪ್ಪುತ್ತಾ ಎಂಬುದು ಕುತೂಹಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾರೊಬ್ಬರೂ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.ಸಿದ್ದರಾಮಯ್ಯ ಅವರ ಸ್ಪರ್ಧೆಯಿಂದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪಕ್ಷಕ್ಕೆ ಬೂಸ್ಟ್ ಸಿಗಲಿದೆ ಎಂಬ ಲೆಕ್ಕಾಚಾರದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ನಿರಂತರ ಒತ್ತಡ ಹಾಕಿದ್ದರು. ಆದರೆ, ಪಕ್ಷದೊಳಗೆ ಮತ್ತು ಹೊರಗಿನ ಶತ್ರುಗಳ ತಂತ್ರಗಾರಿಕೆ ನಡುವೆ ಕೋಲಾರದಿಂದ ಸ್ಪರ್ಧಿಸುವುದು ರಿಸ್ಕ್, ಬೇಡ ಎಂದು ಆಪ್ತ ವಲಯ ಎಚ್ಚರಿಸುತ್ತಲೇ ಇತ್ತು. ಸುಸೂತ್ರ ಗೆಲುವಿನ ದೃಷ್ಟಿಯಿಂದ ವರುಣದಿಂದಲೇ ಸ್ಪರ್ಧೆ ಮಾಡುವಂತೆ ಪುತ್ರ ಯತೀಂದ್ರ ಕೂಡ ಸಲಹೆ ನೀಡಿದ್ದರು. ಆದರೆ, ನಾನಾ ಲೆಕ್ಕಾಚಾರ ನಡೆಸಿದ ಸಿದ್ದರಾಮಯ್ಯ ಕೊನೆಗೂ ಕೋಲಾರದಿಂದಲೇ ಸ್ಪರ್ಧೆ ಮಾಡುವ ಸ್ಪಷ್ಟ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada