ಬೆಂಗಳೂರು:ಕನಕಪುರದ ಬಂಡೆಯೊಂದು ಪಕ್ಷ ಪೂಜೆಯೇ ಅಂತಿಮ, ವ್ಯಕ್ತಿ ಪೂಜೆಯಲ್ಲ ಎಂದು ಗುಡುಗುತ್ತಿದೆ. ಆ ಬಂಡೆಗೆ ಡೈನಾಮೆಟ್ ಇಡಲು ಸಿದ್ದರಾಮಯ್ಯ ಸಜ್ಜಾಗಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮೋತ್ಸವದ ಬಳಿಕ ಕನಕಪುರದ ಬಂಡೆ ಛಿದ್ರವಾಗಲಿದೆಯೇ?
‘ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿದ್ದರಾಮಯ್ಯ ಅವರಿಗೆ ಸಿಎಂ ಕುರ್ಚಿಯ ಕನಸು ಹೆಚ್ಚಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರು ವ್ಯಕ್ತಿಗಿಂತ ಪಕ್ಷ ಮುಖ್ಯ ಎನ್ನುತ್ತಿದ್ದಾರೆ. ನಾನಿಲ್ಲದೆ ಕಾಂಗ್ರೆಸ್ ಇಲ್ಲ ಎಂದು ಸಿದ್ದರಾಮಯ್ಯ ಎನ್ನುತ್ತಿದ್ದಾರೆ.
ಆದರೆ, ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನೇ ತಿರಸ್ಕರಿಸಿದ್ದಾರೆ’ ಎಂದು ಟೀಕಿಸಿದೆ. ‘ಇದುವರೆಗೆ ತಮ್ಮ ಪಟಾಲಂ ಮೂಲಕ ಸಿದ್ದರಾಮಯ್ಯ ‘ತಾನೇ ಮುಂದಿನ ಮುಖ್ಯಮಂತ್ರಿ’ ಎಂಬ ಹೇಳಿಕೆ ಕೊಡಿಸುತ್ತಿದ್ದರು. ಈಗ ನೇರವಾಗಿ ‘ನಾನೇ ಮುಖ್ಯಮಂತ್ರಿ ಆಗಬೇಕೆಂದು ನನ್ನ ರಾಜಕೀಯ ಗುರುಗಳು ಆಶಿಸಿದ್ದರು’ ಎಂದು ಹೇಳುವ ಮೂಲಕ ಕುರ್ಚಿಯ ಆಸೆ ಬಿಚ್ಚಿಟ್ಟಿದ್ದಾರೆ. ಹಾಗಾದರೆ ಬೆವರು, ಬಂಡವಾಳ ಹೂಡುತ್ತಿರುವ ಡಿಕೆಶಿ ಏನು ಮಾಡಬೇಕು?’ ಎಂದು ಬಿಜೆಪಿ ಪ್ರಶ್ನಿಸಿದೆ.
ತಾವೇ ನಿರ್ದೇಶಿಸುತ್ತಿರುವ ಚಲನಚಿತ್ರಕ್ಕೆ ಸಿದ್ದರಾಮಯ್ಯ ನಾಯಕರಾಗಲು ಹೊರಟಿದ್ದಾರೆ. ಸಿದ್ದರಾಮೋತ್ಸವ ಎನ್ನುವುದು ಸಿದ್ದರಾಮಯ್ಯ ಬ್ಯಾನರ್ ಅಡಿ ತಯಾರಾಗುತ್ತಿರುವ ಚಿತ್ರ. ಈ ಚಿತ್ರದ ಮೂಲಕ ತಾವೇ ಮುಂದಿನ ಸಿಎಂ ಎಂಬ ಸಂದೇಶ ನೀಡುವುದು ಖಚಿತ. ಶ್ರಮ ಡಿಕೆಶಿ ಅವರದ್ದು, ಅಧಿಕಾರ ಮಾತ್ರ ಸಿದ್ದರಾಮಯ್ಯಗೆ’ ಎಂದು ಟ್ವೀಟ್ ಮಾಡಿದೆ.
ಕೆಪಿಸಿಸಿ ಅಧ್ಯಕ್ಷರ ವಿರೋಧ ನಡುವೆಯೂ ಸಿದ್ದರಾಮೋತ್ಸವ ನಡೆಯಲಿದೆ ಎಂದಾದರೆ ಡಿಕೆಶಿ ಇದ್ದೂ ಇಲ್ಲದಂತಾಗಿದ್ದಾರೆ. ಸಿದ್ದರಾಮೋತ್ಸವ ಕೇವಲ ಸಿದ್ದರಾಮಯ್ಯರ ಜನ್ಮದಿನೋತ್ಸವವಲ್ಲ. ಅದು ಡಿಕೆಶಿಯ ರಾಜಕೀಯ ಬೆಳವಣಿಗೆಗೆ ತೋಡುತ್ತಿರುವ ಗುಂಡಿ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿರುವ ಡಿ.ಕೆ.ಶಿವಕುಮಾರ್ ಹಲ್ಲಿಲ್ಲದ ಹಾವು’ ಎಂದು ಬಿಜೆಪಿ ಟೀಕಿಸಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada