ನಟಿ ಮಧುಬಾಲಾ ಹೆಸರು ಕೇಳದ ಸಿನಿ ಪ್ರೇಮಿಗಳು ಇರಲಾರರು. ಆಕೆಯ ಸಿನಿಮಾ ನೋಡಿರದಿದ್ದರೂ ಒಂದಲ್ಲ ಒಂದು ಬಾರಿಗೆ ಹೆಸರಂತೂ ಕೇಳಿಯೇ ಇರುತ್ತಾರೆ. ಭಾರತೀಯ ಸಿನಿಮಾ ಇತಿಹಾಸದಲ್ಲಿ ಅಳಿಸಲಾಗದ ಹೆಸರು ಮಧುಬಾಲಾ ಅವರದ್ದು.ಕೇವಲ 36 ವರ್ಷ ವಯಸ್ಸಿಗೆ ನಿಧನ ಹೊಂದಿದ ಮಧುಬಾಲಾ ತಮ್ಮ ವಾರಗೆಯ ನಟಿಯರಿಗೆ ಹೋಲಿಸಿದರೆ ಕಡಿಮೆ ಸಿನಿಮಾಗಳಲ್ಲಿಯೇ ನಟಿಸಿದ್ದು ಆದರೆ ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಮುದ್ರೆ ಒತ್ತಿ ಹೋಗಿದ್ದಾರೆ.ಮಧುಬಾಲಾ ಒಂದು ಕಾಲದ ಸೂಪರ್ ಸ್ಟಾರ್ ನಟಿ. ಪುರುಷ ಕಲಾವಿದರಿಗೂ ಸಿಗದಷ್ಟು ಸಂಭಾವನೆ ಮಧುಬಾಲಾಗೆ ಸಿಗುತ್ತಿತ್ತು. ಮುಂಬೈನ ಬಾಂದ್ರಾನಲ್ಲಿ ಮನೆ ಕಟ್ಟಿಕೊಂಡಿದ್ದ ಮಧುಬಾಲಾ ಅದಕ್ಕೆ ‘ಅರೇಬಿಯನ್ ವಿಲ್ಲಾ’ ಎಂದು ಹೆಸರಿಟ್ಟಿದ್ದರು. ಆ ಭಾರಿ ಐಷಾರಾಮಿ ಬಂಗ್ಲೆಯಲ್ಲಿ ಹಲವು ಕಾರುಗಳು, ಆಳು-ಕಾಳುಗಳಿದ್ದರು. 20 ಕ್ಕೂ ಹೆಚ್ಚು ವಿದೇಶಿ ತಳಿಯ ನಾಯಿಗಳನ್ನು ಮಧುಬಾಲಾ ಹಾಗೂ ಅವರ ಕುಟುಂಬ ಸಾಕಿತ್ತು. ಆದರೆ ಕಾಲ ಅದೆಷ್ಟು ಬೇಗ ಪಲ್ಲಟವಾಗಿದೆಯೆಂದರೆ ಅದೇ ಮಧುಬಾಲಾರ ಸ್ವಂತ ತಂಗಿಯನ್ನು ಮನೆಯಿಂದ ಹೊರಗೆ ದಬ್ಬಲಾಗಿದೆ.ಮಧುಬಾಲಾರ ಸಹೋದರಿ 96 ವರ್ಷದ ಕನೀಜ್ ಬಲ್ಸಾರಾ ಅನ್ನು ನ್ಯೂಜಿಲೆಂಡ್ನಲ್ಲಿ ಅವರ ಸೊಸೆಯೇ ಮನೆಯಿಂದ ಹೊರಗೆ ದಬ್ಬಿದ್ದಾರೆ. ಕೈಯಲ್ಲಿ ಹಣವೂ ಇಲ್ಲದ 96 ವರ್ಷದ ಕನೀಜ್ ಬಲ್ಸಾರಾ ಪಟ್ಟ ಕಷ್ಟಗಳ ಬಗ್ಗೆ ಅವರ ಮಗಳು ಪರ್ವೀಜ್ ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾರೆ.”ನನ್ನ ತಾಯಿ ಕನೀಜ್ಗೆ ಮಗ ಫೈರೋಜ್ ಎಂದರೆ ಬಹಳ ಪ್ರೀತಿ ಹಾಗಾಗಿ ಆಕೆ ಮಗನೊಂದಿಗೆ ಇರಲು ಹದಿನೆಂಟು ವರ್ಷಗಳ ಹಿಂದೆ ನ್ಯೂಜಿಲೆಂಡ್ಗೆ ತೆರಳಿದರು. ಅಲ್ಲಿ ನನ್ನ ಅಣ್ಣನ ಪತ್ನಿ ಸಮೀನ ನನ್ನ ಅಮ್ಮನನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ನನ್ನ ಅಮ್ಮನಿಗೆ ಊಟ ಸಹ ಮಾಡಿ ಬಡಿಸುತ್ತಿರಲಿಲ್ಲ ಆಕೆ. ನನ್ನ ಅಣ್ಣನೇ ಹತ್ತಿರದ ರೆಸ್ಟೊರೆಂಟ್ನಿಂದ ಊಟ ತರಿಸಿ ಕೊಡುತ್ತಿದ್ದ. ನನ್ನ ಅಮ್ಮನಿಗೆ ಸಮೀನ ಬಹಳ ಕಾಟ ಕೊಡುತ್ತಿದ್ದಳು” ಎಂದು ವಿವರಿಸಿದ್ದಾರೆ ಮಧುಬಾಲಾರ ಸಹೋದರಿ ಕನೀಜ್ರ ಮಗಳು ಪರ್ವೀಜ್.”ನನ್ನ ಅಣ್ಣ ಫೈರೋಜ್ ಕಳೆದ ವರ್ಷ ನ್ಯೂಜಿಲೆಂಡ್ನಲ್ಲಿ ನಿಧನನಾದ ಆ ಬಳಿಕ ನನ್ನ ತಾಯಿಗೆ ಕಷ್ಟಗಳು ಇನ್ನಷ್ಟು ಹೆಚ್ಚಾದವು. ಆಸ್ಟ್ರೇಲಿಯಾದಲ್ಲಿದ್ದ ನನ್ನ ಅಣ್ಣನ ಮಗಳು ಮನೆಗೆ ವಾಪಸ್ ಬಂದಳು ಅವಳೂ ಸಹ ಅಮ್ಮ ಕನೀಜ್ಗೆ ತೊಂದರೆ ಕೊಡಲು ಪ್ರಾರಂಭಿಸಿದರು. ವಾರಗಟ್ಟಲೆ ಊಟವೇ ನೀಡದೇ ಹಿಂಸೆ ಕೊಟ್ಟರು. ಕೊನೆಗೇ ನಾನೇ ನನ್ನ ತಾಯಿಯನ್ನು ಭಾರತಕ್ಕೆ ಕರೆದುಕೊಂಡು ಬರಲು ಹೇಳಿದೆ. ಕೆಲವು ದಿನಗಳ ಹಿಂದೆ ನನ್ನ 96 ವರ್ಷದ ಅಮ್ಮನನ್ನು ಭಾರತದ ವಿಮಾನ ಹತ್ತಿಸಿ ಅವರು ನ್ಯೂಜಿಲೆಂಡ್ನಲ್ಲಿ ಉಳಿದಿದ್ದಾರೆ. ಆಕೆಗೆ ಹಣವನ್ನೂ ನೀಡಿಲ್ಲ. ಬಹಳ ಕಷ್ಟಪಟ್ಟು ನನ್ನ 96 ವರ್ಷ ವಯಸ್ಸಿನ ಅಮ್ಮ ಮುಂಬೈಗೆ ಬಂದಿದ್ದಾರೆ. ಇಲ್ಲಿ ಆರ್ಟಿಪಿಸಿಆರ್ ಮಾಡಿಸಲು ಸಹ ಆಕೆಯ ಬಳಿ ಹಣವಿರಲಿಲ್ಲ” ಎಂದು ಕನೀಜ್ರ ಮಗಳು ಪರ್ವೀಜ್ ವಿವರಿಸಿದ್ದಾರೆ.ಕೊಡುಗೈ ದಾನಿಯಾಗಿದ್ದರು ಮಧುಬಾಲಾತನ್ನ ಸಹೋದರಿಗೆ ಬಂದ ಈ ಗತಿಯ ಬಗ್ಗೆ ಮಧುಬಾಲಾರ ಮತ್ತೊಬ್ಬ ಸಹೋದರಿ ಮಧುರ್ ಭೂಷಣ್ ತೀವ್ ಆಘಾತ ವ್ಯಕ್ತಪಡಿಸಿದ್ದಾರೆ. ಮಧು ಬಾಲಾ ಇದ್ದಾಗ ಅವರ ಕುಟುಂಬದವರೆಲ್ಲವೂ ಒಟ್ಟಿಗೆ ಇದ್ದರು. ಮಧುಬಾಲಾ ಆಗಿನ ಕಾಲಕ್ಕೆ ಭಾರಿ ದೇಣಿಗೆ ನೀಡುತ್ತಿದ್ದ ನಟಿಯಾಗಿದ್ದರು. ಆಕೆಯನ್ನು ‘ಕೊಡುಗೈ ರಾಣಿ’ (ಕ್ವೀನ್ ಆಫ್ ಚಾರಿಟಿ) ಎಂದು ಪತ್ರಿಕೆಗಳು ಕರೆದಿದ್ದವು. 1950 ರಲ್ಲಿ ಪೋಲಿಯೋ ಪೀಡಿತ ಪ್ರತಿ ಮಕ್ಕಳಿಗೆ 5000 ಹಣ ದೇಣಿಗೆ ನೀಡಿದ್ದರು. ಪೂರ್ವ ಬಂಗಾಳದ ಪರಿಹಾರ ನಿಧಿಗೆ 50 ಸಾವಿರ, ಜಮ್ಮು ಕಾಶ್ಮೀರ ಪರಿಹಾರ ನಿಧಿಗೆ 50,000 ಹೀಗೆ ಹಲವು ದೇಣಿಗೆಗಳನ್ನು ಮಧುಬಾಲಾ ನೀಡುತ್ತಿದ್ದರು. ಆಕೆ ನೀಡುತ್ತಿದ್ದ ದಾನಗಳಿಂದ ಕೆಲ ವಿವಾದಗಳು ಸಹ ಸೃಷ್ಟಿಯಾದವೆಂದರೆ ಆಕೆಯ ಕೊಡುಗೈ ಎಂಥಹುದ್ದಿತ್ತೆಂದು ಊಹಿಸಬಹುದು. ಆದರೆ ಅಂಥಾ ದಾನಿಯ ಕುಟುಂಬದ ಮಹಿಳೆಯನ್ನೇ ಇಂದು ಮನೆಯಿಂದ ಹೊರಗೆ ಹಾಕಲಾಗಿದೆ!ನಟಿ ಮಧುಬಾಲಾ ಸಹ ಇಂತಹುದೇ ಸ್ಥಿತಿ ಅನುಭವಿಸಿದ್ದರು. ತಮ್ಮ 34 ವಯಸ್ಸಿನಲ್ಲಿ ಹೃದಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿ ಚಿಕಿತ್ಸೆ ಫಲಕಾರಿಯಾಗದೆ ವಾಪಸ್ಸಾದ ಮಧುಬಾಲಾ ಖಿನ್ನತೆಗೆ ಒಳಗಾಗಿದ್ದರು. ಮಾನಸಿಕ ಸಂತುಲನ ಕಳೆದುಕೊಂಡಿದ್ದರು. ಹಾಗಾಗಿ ಮಧುಬಾಲಾರನ್ನು ಅವರ ಪತಿ ಕಿಶೋರ್, ಒಂದು ಬಂಗಲೆಯಲ್ಲಿಟ್ಟು ಆಕೆಗೆ ಒಬ್ಬ ಸಹಾಯಕಿಯನ್ನು ನೀಡಿದ್ದರು. ಯಾರೂ ಮಧುಬಾಲಾರನ್ನು ಭೇಟಿಯಾಗುತ್ತಿರಲಿಲ್ಲ. ಈ ಸಮಯದಲ್ಲಿ ಮಧುಬಾಲಾ ಇನ್ನಷ್ಟು ಖಿನ್ನತೆಗೆ ಒಳಗಾದರು. ದಿನೇ ದಿನೇ ಮಧುಬಾಲಾರ ದೇಹ ಕೃಷವಾಗುತ್ತಾ ಸಾಗಿತು. ಆಕೆಗೆ ಇದ್ದ ಖಾಯಿಲೆಯಿಂದಾಗಿ ದೇಹ ಹೆಚ್ಚಿನ ರಕ್ತ ಉತ್ಪತ್ತಿ ಮಾಡುತ್ತಿತ್ತು, ಆ ರಕ್ತ ಮೂಗು, ಬಾಯಿಗಳಿಂದ ಹೊರ ಬರುತ್ತಿತ್ತು. ಭಾರತ ಚಿತ್ರರಂಗದ ಸುಂದರ ನಟಿಯಾಗಿದ್ದ ಮಧುಬಾಲಾ ಕೊನೆಯ ಕಾಲದಲ್ಲಿ ವಿಕಾರ ದೇಹಾಕಾರ ಪಡೆದಿದ್ದರು. ಬಳಿಕ ತಮ್ಮ 36ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada