1995ರಿಂದ 2000ರವರೆಗೆ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳಿಗೆ ಅನುದಾನ ಕೊಡಲು ಒಪ್ಪಿಕೊಂಡಿದ್ದು ಸೇರಿ ಕೆಲ ಬೇಡಿಕೆಗಳ ಈಡೇರಿಕೆಗೆ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ರುಪ್ಸಾ ನೇತೃತ್ವ ಖಾಸಗಿ ಶಾಲೆಗಳು ಪ್ರತಿಭಟನೆ ಕೈಬಿಟ್ಟಿವೆ
ಬೆಂಗಳೂರು(ಮಾ. 23): ತಾವು ಮುಂದಿಟ್ಟಿದ್ದ ಹಲವು ಬೇಡಿಕೆಗಳನ್ನ ಈಡೇರಿಸದ ಹಿನ್ನೆಲೆಯಲ್ಲಿ ಇಂದು ಧರಣಿ ನಡೆಸಿದ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟದ ಜೊತೆ ಸರ್ಕಾರ ಸಂಧಾನ ನಡೆಸಿ ಹೋರಾಟ ಕೈಬಿಡುವಂತೆ ಮನವೊಲಿಸಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ಖಾಸಗಿ ಶಾಲೆಗಳ ಕೆಲವು ಬೇಡಿಕೆಗಳನ್ನ ಈಡೇರಿಸುವುದಾಗಿ ಸರ್ಕಾರ ಒಪ್ಪಿಕೊಂಡಿತು. ಈ ಹಿನ್ನೆಲೆಯಲ್ಲಿ ಧರಣಿಯ ನೇತೃತ್ವ ವಹಿಸಿದ್ದ ರುಪ್ಸಾ ಸಂಘಟನೆ ತನ್ನ ಹೋರಾಟವನ್ನು ತಾತ್ಕಾಲಿಕವಾಗಿ ಕೈಬಿಡಲು ನಿರ್ಧರಿಸಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯುವವರೆಗೂ ಯಾವುದೇ ಹೋರಾಟ ನಡೆಸುವುದಿಲ್ಲ. ಭರವಸೆ ಕೊಟ್ಟಂತೆ ಬೇಡಿಕೆ ಈಡೇರಿಸದಿದ್ದರೆ ಪರೀಕ್ಷೆ ಬಳಿಕ ಮತ್ತೆ ಹೋರಾಟ ಮಾಡುತ್ತೇವೆ ಎಂದು ರುಪ್ಸಾ ಸಂಘಟನೆ ಎಚ್ಚರಿಕೆಯನ್ನೂ ನೀಡಿದೆ.
ಸಂಧಾನ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಖಾಸಗಿ ಶಾಲೆಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿದ್ದು ಸಮಿತಿ ರಚಿಸಿದ್ದೇವೆ. ಸಮಿತಿ ವರದಿ ಸಲ್ಲಿಸಿದ ಬಳಿಕ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
1995ರಿಂದ 2000ರ ಒಳಗಿನ ಶಾಲೆಗಳಿಗೆ ಅನುದಾನಕ್ಕೆ ಒಳಪಡಿಸಲು ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಶಾಲೆಗಳ ಮರುನೊಂದಣಿಗೆ ಸಂಕನೂರು ಸಮಿತಿ ವರದಿ ತರಿಸಿಕೊಳ್ಳುತ್ತೇವೆ. ಮರುನೊಂದಣಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುತ್ತೇವೆ. ಖಾಸಗಿ ಶಾಲಾ ಶಿಕ್ಷಕರಿಗೆ ಶಿಕ್ಷಕರ ಕಲ್ಯಾಣ ನಿಧಿಯಿಂದ ಅನುದಾನ ಬಿಡುಗಡೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದ ಸಚಿವ ಸುರೇಶ್ ಕುಮಾರ್, SSLC ಪರೀಕ್ಷೆ ಮುಗಿಯುವವರೆಗೂ ಯಾವುದೇ ಹೋರಾಟಕ್ಕೆ ಇಳಿಯುವುದಿಲ್ಲ ಎಂದು ರುಪ್ಸಾ ಮುಖಂಡರು ಸರ್ಕಾರಕ್ಕೆ ಭರವಸೆ ನೀಡಿದ್ಧಾರೆಂದು ತಿಳಿಸಿದ್ಧಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರುಪ್ಸಾ ಕರ್ನಾಟಕ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, 1995ರಿಮದ 2000ರ ವರೆಗಿನ ಶಾಲೆಗಳಿಗೆ ಅನುದಾನ ಕೊಡಲು ಸಚಿವರು ಒಪ್ಪಿಕೊಂಡಿದ್ಧಾರೆ. ಸೇವಾ ಭದ್ರತೆ ಸೇರಿ ಹಲವು ಬೇಡಿಕೆಗಳನ್ನ ಈ ತಿಂಗಳ 31ರೊಳಗೆ ಈಡೇರಿಸುವುದಾಗಿ ಆಶ್ವಾಸನೆ ಕೊಟ್ಟಿದ್ದಾರೆ. ಇದು ಈಡೇರದಿದ್ದರೆ ಮತ್ತೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.