ಬೆಳಗಾವಿ: ‘ಇಲ್ಲಿನ ಸರ್ದಾರ್ ಪ್ರೌಢಶಾಲೆ ಮೈದಾನದಲ್ಲಿ ಈಚೆಗೆ ಆಯೋಜಿಸಿದ್ದ, ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ‘ಅಸ್ಮಿತೆ’ಯಲ್ಲಿ ₹ 60 ಲಕ್ಷ ವಹಿವಾಟು ನಡೆದಿದೆ’ ಎಂದು ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಸಿ.ಎನ್.
ಅಶ್ವತ್ಥನಾರಾಯಣ ತಿಳಿಸಿದ್ದಾರೆ.
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಳ ಉದ್ಘಾಟಿಸಿದ್ದರು. 7 ಆಹಾರ ಮಳಿಗೆಗಳೂ ಸೇರಿದಂತೆ ಒಟ್ಟು 140 ಮಳಿಗೆಗಳು ಇದ್ದವು. ಇದುವರೆಗೆ ಈ ರೀತಿಯ ಮೇಳಗಳಲ್ಲಿ ಆಗಿರುವ ಅತಿ ಹೆಚ್ಚು ವಹಿವಾಟು ಇದಾಗಿದೆ. ಇದರೊಂದಿಗೆ ದಾಖಲೆ ನಿರ್ಮಾಣವಾಗಿದೆ. ಇದಕ್ಕಾಗಿ ಶ್ರಮಿಸಿದ ಅಧಿಕಾರಿಗಳು-ಸಿಬ್ಬಂದಿ ಅಭಿನಂದನಾರ್ಹರು’ ಎಂದು ಹೇಳಿದ್ದಾರೆ.
‘ಸೆಣಬಿನ ಬ್ಯಾಗ್ಗಳನ್ನು ಮಾಡುವ ವಿಜಯಪುರ ಎನ್ಆರ್ಎಲ್ಎಂನ ಯಶೋದಾ ಸ್ವಸಹಾಯ ಗುಂಪು ಎಲ್ಲಕ್ಕಿಂತ ಹೆಚ್ಚು ₹ 1,26,900 ವ್ಯಾಪಾರ ನಡೆಸಿದೆ. ನಂತರದ ಸ್ಥಾನದಲ್ಲಿ, ಕಾಟನ್ ಬ್ಯಾಗ್ಗಳು ಮತ್ತು ಕ್ವಿಲ್ಟ್ಗಳನ್ನು ಮಾಡುವ ಬೆಳಗಾವಿಯ ಮಾತಾ ಸಾವಿತ್ರಿ ಬಾಯಿ ಸ್ವಸಹಾಯ ಸಂಘ ₹ 1,19,558, ವುಡ್ ಇನ್ ಲೇಗಳನ್ನು ಮಾಡುವ ಮೈಸೂರಿನ ಚಾಮುಂಡೇಶ್ವರಿ ಸ್ವಸಹಾಯ ಸಂಘ ₹ 1,13,830, ಇಳಕಲ್ ಸೀರೆಗಳನ್ನು ಮಾಡುವ ರೇವಣ್ಣಸಿದ್ದೇಶ್ವರ ಸ್ವಸಹಾಯ ಸಂಘ ₹ 1,00,026 ಹಾಗೂ ಆಭರಣ ಮತ್ತು ಪೇಟಿಂಗ್ಗಳನ್ನು ಮಾಡುವ ಬೆಳಗಾವಿಯ ಜನವಾಣಿ ಮಾತಾ ಸ್ವಸಹಾಯ ಸಂಘವು ₹ 87,420 ಮೊತ್ತದ ವ್ಯಾಪಾರ ಮಾಡಿವೆ’ ಎಂದು ಸಚಿವರು ಹೇಳಿಕೆಯಲ್ಲಿ ವಿವರ ನೀಡಿದ್ದಾರೆ.
ರಾಜ್ಯ ಜೀವನೋಪಾಯ ಅಭಿಯಾನ (ನಗರ ಮತ್ತು ಗ್ರಾಮೀಣ), ಕೌಶಲ ಅಭಿವೃದ್ಧಿ- ಉದ್ಯಮಶೀಲತೆ – ಜೀವನೋಪಾಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮೇಳ ಆಯೋಜಿಸಲಾಗಿತ್ತು. ಬೇಕರಿ ತಿನಿಸುಗಳು, ಉಪ್ಪಿನಕಾಯಿ, ಹಾಲಿನ ಉತ್ಪನ್ನ, ಮಸಾಲೆ ಪದಾರ್ಥ, ಉಡುಪು, ಸೀರೆಗಳು, ವಿವಿಧ ರೀತಿಯ ಹಾರ, ಚರ್ಮ ಹಾಗೂ ಕೂದಲು ಆರೈಕೆ ಉತ್ಪನ್ನ ಮತ್ತು ಕರಕುಶಲ ವಸ್ತುಗಳನ್ನು ಮೇಳದಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: