ಶ್ರೀದೇವಿ ಎಂಬ ಸೊಬಗಿನ ಹಿಂದೆ

2018ರ ಫೆಬ್ರವರಿ 25ರಂದು ಬೆಳಿಗ್ಗೆ ಎದ್ದಾಗ ಒಂದು ದಿಗಿಲಿನ ಸುದ್ಧಿ. ನಾನು ಎಂದೆಂದೂ ಚಿರಯೌವನೆ ಎಂದು ಭಾವಿಸಿದ್ದ ಮನೋಜ್ಞ ನಟಿ ಶ್ರೀದೇವಿ ನಿಧನರಾದರು ಎಂದರೆ ಏನೋ ಕಳೆದುಕೊಂಡ ಭಾವ ಉದ್ಭವವಾಯ್ತು.
ಶ್ರೀದೇವಿ ಭಾರತ ಚಲನಚಿತ್ರರಂಗ ಕಂಡ ಪ್ರತಿಭಾನ್ವಿತ ನಟಿಯರಲ್ಲೊಬ್ಬರು. ಅವರು 1963ರ ಆಗಸ್ಟ್ 13ರಂದು ಜನಿಸಿದರು. ಇನ್ನೂ ನಾಲ್ಕು ವರ್ಷವಿದ್ದಾಗಲೇ ಅವರು ಚಿತ್ರರಂಗದಲ್ಲಿ ಬಾಲನಟಿಯಾಗಿ ಹೊರಹೊಮ್ಮಿದ್ದರು. 1975ರ ಸಮಯದಲ್ಲಿ ತೆರೆಕಂಡ ಪ್ರಖ್ಯಾತ ಹಿಂದೀ ಚಲನಚಿತ್ರ ‘ಜೂಲಿ’ಯಲ್ಲಿಯೂ ಬಾಲನಟಿಯಾಗಿ ಅಭಿನಯಿಸಿದ್ದರು. ಕನ್ನಡ ಚಿತ್ರರಂಗದಲ್ಲಿಯೂ ಅವರು ಬಾಲನಟಿಯಾಗಿ ಭಕ್ತ ಕುಂಬಾರ, ಬಾಲಭಾರತ, ಸಂಪೂರ್ಣ ರಾಮಾಯಣ, ಯಶೋಧ ಕೃಷ್ಣ ಚಿತ್ರಗಳಲ್ಲಿ ನಟಿಸಿದ್ದಲ್ಲದೆ ಹೆಣ್ಣು ಸಂಸಾರದ ಕಣ್ಣು ಎಂಬ ಚಿತ್ರದಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ರಜನೀಕಾಂತ್, ಅಂಬರೀಷ್ ಮುಂತಾದವರು ನಟಿಸಿದ್ದ ‘ಪ್ರಿಯಾ’ ಎಂಬ ಕನ್ನಡ ಚಿತ್ರದಲ್ಲಿ ಅವರು ನಾಯಕಿಯಾಗಿಯೂ ಅಭಿನಯಿಸಿದ್ದರು.
ಮುಂದೆ ಶ್ರೀದೇವಿ ತಮಿಳು ಮತ್ತು ತೆಲುಗು ಚಿತ್ರರಂಗದ ಪ್ರಖ್ಯಾತ ಚಿತ್ರಗಳಾದ ಮೂಂಡ್ರು ಮುಡಿಚ್ಚು, ಪದಿನಾರು ವಯದಿನಿಲೆ, ಸಿಗಪ್ಪು ರೋಜಾಕ್ಕಳ್, ಮೀನ್ಡುಂ ಕೋಕಿಲಾ, ಮೂನ್ರಾಂ ಪಿರೈ, ವರುಮಯಿನ್ ನಿರಂ ಸಿವಪ್ಪು, ಪ್ರೇಮಾಭಿಷೇಕಂ, ಆಖರೀ ಪೋರಾಟಂ, ಜಗದೇಕ ವೀರುಡು ಅತಿಲೋಕ ಸುಂದರಿ, ಕ್ಷಣಂ ಕ್ಷಣಂ ಮುಂತಾದ ಅನೇಕ ಚಿತ್ರಗಳಲ್ಲಿ ಅಭಿನಯಿಸಿ ಪ್ರತಿಭೆ ಮತ್ತು ಜನಪ್ರಿಯತೆ ಎರಡರಲ್ಲೂ ತಾವೊಬ್ಬ ಮಹತ್ವದ ನಟಿ ಎಂದು ಸಾಬೀತು ಪಡಿಸಿದರು.
ಹಿಂದೀ ಚಿತ್ರರಂಗದಲ್ಲಿ ಸೊಲ್ವ ಸಾವನ್, ಹಿಮ್ಮತ್ ವಾಲಾ, ಮಾವಾಲಿ, ತೋಹ್ಫ, ಮಾಸ್ಟರ್ಜಿ, ಕರ್ಮ, ಮಿಸ್ಟರ್ ಇಂಡಿಯಾ, ವಕ್ತ್ ಕಿ ಆವಾಜ್, ಚಾಂದನಿ, ಸದ್ಮಾ, ನಗೀನ, ಚಾಲ್ ಬಾಜ್, ಲಮ್ಹೆ, ಖುದಾ ಗವಾಹ್, ಗುಮ್ರಾಹ್, ಲಾಡ್ಲಾ, ಜುದಾಯಿ ಮುಂತಾದ ಪ್ರಸಿದ್ಧ ಚಿತ್ರಗಳಲ್ಲಿ ತಮ್ಮ ಪ್ರತಿಭೆ, ಯಶಸ್ಸುಗಳಿಂದ ರಾರಾಜಿಸಿದ್ದರು. ಹಿರಿಯ ನಿರ್ಮಾಪಕ ಬೋನಿ ಕಫೂರ್ ಅವರನ್ನು ವರಿಸಿದ ಶ್ರೀದೇವಿ ಅವರು 1997ರ ನಂತರದಲ್ಲಿ ಸುಮಾರು ಹದಿನೈದು ವರ್ಷಗಳ ನಂತರದಲ್ಲಿ 2012ರ ವರ್ಷದಲ್ಲಿ ‘ಇಂಗ್ಲಿಷ್ ವಿಂಗ್ಲಿಷ್’ ಎಂಬ ಯಶಸ್ವೀ ಚಿತ್ರದಲ್ಲಿ ತಮ್ಮ ಸುಂದರ ಅಭಿನಯದೊಂದಿಗೆ ಮೋಡಿ ಮಾಡಿ ಮತ್ತೊಮ್ಮೆ ತಾನೆಷ್ಟು ಪ್ರತಿಭಾವಂತೆ ಎಂದು ಸಾಬೀತುಪಡಿಸಿದರು. ಇದಲ್ಲದೆ ತಮಿಳಿನ ಪುಲಿ ಮತ್ತು 2017ರಲ್ಲಿ ತಮ್ಮದೇ ಸಂಸ್ಥೆಯ ‘ಮಾಮ್’ ಎಂಬ ಚಿತ್ರದಲ್ಲಿ ನಟಿಸಿ ವಿಮರ್ಶಕರಿಂದ ಅಪಾರ ಮೆಚ್ಚುಗೆ ಗಳಿಸಿದ್ದರು.
ಹಾಸ್ಯ, ಸಂವೇದನೆ, ಭಾವನಾತ್ಮಕ, ಸಾಹಸ, ಪ್ರೇಮ, ಪ್ರಣಯ, ನೃತ್ಯ ಹೀಗೆ ಎಲ್ಲ ರೀತಿಯ ಪಾತ್ರಗಳಲ್ಲಿ ಶ್ರೀದೇವಿ ಅವರಷ್ಟು ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರರಾದ ಕಲಾವಿದೆಯರು ವಿರಳ.
ಚಿತ್ರರಂಗದಲ್ಲಿ ಪ್ರಸಿದ್ಧಿಗೆ ದ್ಯೋತಕವಾಗಿರುವ ನೂರಾರು ಪ್ರಶಸ್ತಿಗಳನ್ನು ಉತ್ತರ ಮತ್ತು ದಕ್ಷಿಣ ಭಾರತಗಳಲ್ಲಿ ಸ್ವೀಕರಿಸಿದ್ದ ಶ್ರೀದೇವಿ 2013 ವರ್ಷದಲ್ಲಿ ‘ಪದ್ಮಶ್ರೀ’ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
ಅವರು ಹೋಗಿಬಿಟ್ಟಾಗ ಎಲ್ಲರದೂ ಒಕ್ಕೊರಲ ಧ್ವನಿ “ಅವರು ಇಷ್ಟು ಬೇಗ ಹೊರಟುಹೋಗಬಾರದಿತ್ತು”. ಇದು ಒಬ್ಬ ಕಲಾವಿದರು ಉಳಿಸಿಹೋಗುವ ಅಪಾರ ಮೌಲ್ಯ ಮತ್ತು ಕಲಾರಸಿಕರಲ್ಲಿ ಕಾಲಾತೀತವಾಗಿ ಅಳಿಯದಿರುವ ಪರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾಲ್ ರಾಯ್‍ಟರ್

Fri Feb 25 , 2022
ಪಾಲ್ ಜೂಲಿಯಸ್ ರಾಯ್‍ಟರ್ ರಾಯ್‍ಟರ್ ಸುದ್ದಿಸಂಸ್ಥೆಯ ಸ್ಥಾಪಕರು. ಮುಂದೆ ಅವರ ಫ್ರೆಹೆರ್ ವಾನ್ ರಾಯ್‍ಟರ್ ಎಂದು ಹೆಸರಾದರು. ಇಂದು ಅವರ ಸಂಸ್ಮರಣೆ ದಿನ. ಪಾಲ್ ಜೂಲಿಯಸ್ ಹಿಂದಿನ ಪಶ್ಚಿಮ ಜರ್ಮನಿಯ ಕಾಸಲ್ ಎಂಬಲ್ಲಿ 1816 ಜುಲೈ 21 ರಂದು ಜನಿಸಿದರು. ಯಹೂದ್ಯರಾದ ಈತ 1844 ರಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿ ರಾಯ್‍ಟರ್ ಎಂಬುದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು. ಪಾಲ್ ಜೂಲಿಯಸ್ ಜರ್ಮನಿಯ ಗಾಟೆನ್‍ಜೆನ್‍ನಲ್ಲಿದ್ದ ತಮ್ಮ ಚಿಕ್ಕಪ್ಪನ ಬ್ಯಾಂಕಿನಲ್ಲಿ ಗುಮಾಸ್ತರಾಗಿದ್ದರು. ಆಗ […]

Advertisement

Wordpress Social Share Plugin powered by Ultimatelysocial