ಮೈಸೂರು: ಫೆಬ್ರವರಿ 14 ಪ್ರೇಮಿಗಳ ದಿನ. ಅಂದೇ ನಾನು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅಂದು ಯಾವ ಪಕ್ಷದ ಮೇಲೆ ಲವ್ ಆಗುತ್ತೋ ಆ ಪಕ್ಷಕ್ಕೆ ಹೋಗುವೆ ಎಂದು ಕಾಂಗ್ರೆಸ್ ಎಂಎಲ್ಸಿ ಸಿ.ಎಂ.ಇಬ್ರಾಹಿಂ ಹೇಳಿದರು.ಹೊಸ ಪಕ್ಷ ಕಟ್ಟುವುದಿಲ್ಲ, ಬೇರೆ ಪಕ್ಷ ಸೇರುತ್ತೇನೆ.ನನ್ನ ಮುಂದೆ ಜೆಡಿಎಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷಗಳು ಇವೆ. ಜನರ ಅಭಿಪ್ರಾಯ ಪಡೆದು ಪಕ್ಷ ಆಯ್ಕೆ ಮಾಡುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಅಧ್ಯಾಯ ಮುಗಿದು ಹೋಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.ನಾನು ಜೆಡಿಎಸ್ ನಾಯಕರನ್ನು ಭೇಟಿ ಮಾಡಿರುವುದು ನಿಜ. ಒಂದು ವೇಳೆ ಜೆಡಿಎಸ್ಗೆ ಸೇರ್ಪಡೆಯಾದರೆ ಏನು ಸ್ಥಾನಮಾನ ಸಿಗುತ್ತದೆ ಎಂಬುದು ಮುಖ್ಯವಲ್ಲ. ಸ್ಥಾನಕ್ಕಿಂತ ಮಾನ ಮುಖ್ಯವಾದದ್ದು. ಜೆಡಿಎಸ್ ಸೇರ್ಪಡೆ ಕುರಿತು ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.ಸಾಬ್ರು ಕಾಂಗ್ರೆಸ್ಗೆ ಬಿಟ್ಟರೆ ಬೇರೆಯವರಿಗೆ ಮತ ಹಾಕುವುದಿಲ್ಲ. ಬಿಜೆಪಿಗೆ ಮತ ಹಾಕಲು ಸಾಧ್ಯವೇ ಎಂಬ ಮನಸ್ಥಿತಿ ಕಾಂಗ್ರೆಸ್ಗೆ ಇದೆ. ಅಲ್ಪಸಂಖ್ಯಾತರಿಗೆ ಮತ ಚಲಾಯಿಸಲು ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಸಹ ಇದ್ದು, ಆ ಪಕ್ಷವನ್ನು ನಾವು ಫೆ.14ರೊಳಗೆ ಹುಡುಕಿಕೊಳ್ಳುತ್ತೇವೆ ಎಂದರು.ಸಿದ್ದರಾಮಯ್ಯ ತವರು ಜಿಲ್ಲೆಯಿಂದ ಪ್ರವಾಸ ಪ್ರಾರಂಭ ಮಾಡಿದ್ದೇನೆ. ಇದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಲು ಪ್ರಾರಂಭಿಸಿದ ಪ್ರವಾಸವಲ್ಲ. ಟಾಂಗ್ ನೀಡಲು ಸಿದ್ದರಾಮಯ್ಯ ಅಷ್ಟೊಂದು ದೊಡ್ಡವರಲ್ಲ. ನಾವು ಭಾರಿ ದೊಡ್ಡ ಟಾಂಗ್. ಅವರು ಸಣ್ಣ ಟಾಂಗ್. ನಮ್ಮ ಟಾಂಗ್ ಅವರನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಹಾಸ್ಯಮಿಶ್ರಿತವಾಗಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada