ಬೆಂಗಳೂರು, ಫೆಬ್ರವರಿ 8: ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳ ಕಾಲೇಜುಗಳಿಗೆ ಹಿಜಾಬ್ vs ಕೇಸರಿ ವಿವಾದ ವ್ಯಾಪಿಸಿದೆ.ಹಿಜಾಬ್ ಧರಿಸಲು ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಉಡುಪಿ ಮೂಲದ ವಿದ್ಯಾರ್ಥಿನಿಯರು ಮತ್ತು ಪೋಷಕರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.ಇಂದು ಮೂರು ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿದ್ದು, ಇಂದು ಹೈಕೋರ್ಟ್ನ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು.ವಾದ- ಪ್ರತಿವಾದ ಆಲಿಸಿದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ನೇತೃತ್ವದ ಪೀಠ ಊಟದ ವಿರಾಮ ಘೋಷಿಸಿ, ಇಂದೇ ಮಧ್ಯಾಹ್ನ 2.30ಕ್ಕೆ ಮತ್ತೆ ಅರ್ಜಿ ವಿಚಾರಣೆ ಆರಂಭವಾಗಲಿದೆ. ನ್ಯಾ.ಕೃಷ್ಣ ದೀಕ್ಷಿತ್ ವಾದ- ಪ್ರತಿವಾದ ಆಲಿಸಿದರು.ರಾಜ್ಯ ಸರ್ಕಾರ ಶಾಲಾ- ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶಿಸಿದ್ದರೂ ರಾಜ್ಯದ ಅನೇಕ ಜಿಲ್ಲೆಗಳ ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಮಂಗಳವಾರವಂತೂ ಹಿಂಸಾರೂಪಕ್ಕೆ ತಾಳಿದ್ದು, ಅಲ್ಲಲ್ಲಿ ಕಲ್ಲು ತೂರಾಟ ಮತ್ತು ಲಘು ಲಾಠಿಚಾರ್ಜ್ ನಡೆಸಲಾಗಿದೆ.ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಹಿಜಾಬ್ ಕುರಿತ ಅರ್ಜಿಯ ವಿಚಾರಣೆ ಬೆಳಗ್ಗೆ 11.30ಕ್ಕೆ ಹೈಕೋರ್ಟ್ನಲ್ಲಿ ಆರಂಭವಾಯಿತು. ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆ. ಪವಿತ್ರ ಕುರಾನ್ನಲ್ಲಿ ಹೀಗೆಂದು ಉಲ್ಲೇಖವಾಗಿದೆ ಎಂದು ಹಿಜಾಬ್ ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ವಾದ ಮಂಡಿಸಿದರು. ಹೀಗಾಗಿ ಸರ್ಕಾರ ವಿದ್ಯಾರ್ಥಿನಿಯ ಹಕ್ಕು ಉಲ್ಲಂಘಿಸಿದೆ. ಸಂವಿಧಾನದ 19(1) A ಅಡಿ ಇಚ್ಚೆಯ ಬಟ್ಟೆ ಧರಿಸುವುದು ಹಕ್ಕು ಎಂದು ಹೇಳಿದರು.ಧರ್ಮ ಪಾಲನೆ ಜನರ ಮೂಲಭೂತ ಹಕ್ಕು, ಸರ್ಕಾರ ಧಾರ್ಮಿಕ ಆಚರಣೆ ನಿರ್ಧರಿಸಲು ಆಗಲ್ಲ. ಹಿಜಾಬ್ ಕೂದಲು ಕುತ್ತಿಗೆ ಮುಚ್ಚಬೇಕು. ಕೈ, ಮುಖ ಬಿಟ್ಟು ಉಳಿದುದನ್ನು ಅಪರಿಚಿತರಿಗೆ ತೋರಿಸಬಾರದು ಎಂದು ಕುರಾನ್ನಲ್ಲಿ ಉಲ್ಲೇಖವಾಗಿದೆ ಎಂದು ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಹೈಕೋರ್ಟ್ ಗೆ ತಿಳಿಸಿದರು.ಮುಸ್ಲಿಂರಲ್ಲಿ ವಸ್ತ್ರ ಸಂಹಿತೆ ಉಲ್ಲಂಘನೆಯಾದರೆ ಶಿಕ್ಷೆಯಿದೆ, ಹದೀಸ್ನಲ್ಲಿ ವಸ್ತ್ರ ಸಂಹಿತೆ ಉಲ್ಲಂಘನೆ ಬಗ್ಗೆ ಉಲ್ಲೇಖ ಆಗಿದೆ. ಸಡಿಲವಾದ ಮತ್ತು ಉದ್ದಯನೆಯ ಬಟ್ಟೆಯನ್ನು ತೊಡಬೇಕು ಎಂದು ಉಲ್ಲೇಖಿಸಲಾಗಿದೆ. ಧರ್ಮಾನುಸಾರ ವಸ್ತ್ರ ಧರಿಸುವುದು ಮೂಲಭೂತ ಹಕ್ಕು, ಕೇರಳ ಹೈಕೋರ್ಟ್ ಈ ಹಕ್ಕನ್ನು ಗುರುತಿಸಿದೆ ಎಂದು ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಹೈಕೋರ್ಟ್ನಲ್ಲಿ ವಾದ ಮಂಡಿಸಿದರು.ಹಿಜಾಬ್ ವಿಚಾರದಲ್ಲಿ ರಾಜ್ಯ ಸರ್ಕಾರ ಮಧ್ಯ ಪ್ರವೇಶ ಮಾಡುವುದಿಲ್ಲ. ಸಮವಸ್ತ್ರ ಧರಿಸುವ ಬಗ್ಗೆ ಕಾಲೇಜುಗಳಿಗೆ ಸ್ವಾಯತ್ತತೆ, ಸ್ವಾತಂತ್ಯ ಇದೆ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿಯವರು ವಾದವನ್ನು ಮಂಡಿಸಿದರು.ಹಿಜಾಬ್ ಬೇಕು ಎನ್ನುವವರು ಕಾಲೇಜು ಮಂಡಳಿಯವರ ಪರ್ಮಿಷನ್ ತೆಗೆದುಕೊಳ್ಳಬಹುದು. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದು ಅವರಿಗೆ ಬಿಟ್ಟಿದ್ದು ಎಂದು ಸರ್ಕಾರದ ಪರ ವಾದ ಮಂಡಿಸಿದ್ದಾರೆ. ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಇವೆರಡನ್ನೂ ಯಾವ ರೀತಿ ಪರಿಗಣಿಸುತ್ತಾರೆ ಎಂಬ ಕುತೂಹಲ ಮೂಡಿದೆ. ಇಂದು ಹೈಕೋರ್ಟ್ನ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada