ಸುಂದರರಾಜ್

ಸುಂದರರಾಜ್
ಸುಂದರರಾಜ್ ರಂಗಭೂಮಿ ಮತ್ತು ಚಲನಚಿತ್ರ ಲೋಕದ ಅತ್ಯುತ್ತಮ ಕಲಾವಿದರಲ್ಲೊಬ್ಬರು.
ಸುಂದರರಾಜ್ 1951ರ ಫೆಬ್ರವರಿ 2ರಂದು ಜನಿಸಿದರು. ಇವರು 3 ವರ್ಷದವರಿದ್ದಾಗ ಇವರ ಕುಟುಂಬ ತಮಿಳುನಾಡಿನ ಶ್ರೀರಂಗಂ ಇಂದ ಬೆಂಗಳೂರಿಗೆ ವಲಸೆ ಬಂತು. ತಂದೆ ಎಂ. ಎನ್. ಕೃಷ್ಣಸ್ವಾಮಿ ಅವರು ನಿವೃತ್ತ ಸೇನಾನಿ. ತಾಯಿ ವಿಜಯಲಕ್ಷ್ಮಿ. ಮನೆಯಲ್ಲಿ ಸಂಗೀತ, ನೃತ್ಯ ಮತ್ತು ವಿವಿಧ ಕಲಾಭಿರುಚಿಯ ವಾತಾವರಣವಿತ್ತು. ಬಸವನಗುಡಿಯ ನಿವಾಸಿಯಾಗಿ ನ್ಯಾಷನಲ್ ಸ್ಕೂಲು ಮತ್ತು ಕಾಲೇಜಿನ ಓದುವ ದಿನಗಳಲ್ಲಿ ಅನೇಕ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುತ್ತಿದ್ದ ಸುಂದರರಾಜ್ ಅವರಿಗೆ ನಾಟಕಗಳಲ್ಲಿ ಅಭಿನಯಿಸುವುದು ಮತ್ತು ಸಿನಿಮಾ ನೋಡುವುದರಲ್ಲಿ ಅಪಾರ ಆಸಕ್ತಿ ಇತ್ತು.
ಸುಂದರರಾಜ್ ನ್ಯಾಷನಲ್ ಕಾಲೇಜಿನಲ್ಲಿ ಬಿ.ಎಸ್ಸಿ. ಓದುವ ದಿನಗಳಲ್ಲೇ ಮಹಾನ್ ರಂಗತಜ್ಞರಾದ ಬಿ. ವಿ. ಕಾರಂತರ ಮೆಚ್ಚಿನ ಹುಡುಗರಲ್ಲಿ ಒಬ್ಬರಾಗಿ, 1972ರಲ್ಲಿ ಅವರ ನಿರ್ದೇಶನದಲ್ಲಿ ಪ್ರಸಿದ್ಧವಾದ ‘ಹಯವದನ’ ನಾಟಕದಲ್ಲಿ ಪಾತ್ರವಹಿಸಿದರು. ಕಾರಂತರ ಹಯವದನ, ಜೋಕುಮಾರಸ್ವಾಮಿ, ಸತ್ತವರ ನೆರಳು, ಗೋಕುಲ ನಿರ್ಗಮನ ಮುಂತಾದ ನಾಟಕಗಳಂತೂ ರಂಗಭೂಮಿಗೆ ಹೊಸ ಭಾಷ್ಯ ಬರೆದಂತವು. ಈ ಅಲೆಯಲ್ಲಿ ಹೊಮ್ಮಿಬಂದ ಸುಂದರರಾಜ್ 1974ರಲ್ಲಿ ಪ್ರಸಿದ್ಧ ‘ಬೆನಕ’ ತಂಡದ ಪ್ರಾರಂಭಿಕ ಸದಸ್ಯರಲ್ಲಿ ಒಬ್ಬರಾದರು. ಇಂದೂ ಬೆನಕದೊಂದಿಗೆ ಅವರು ನಾಗಾಭರಣ ಮತ್ತು ಇತರರೊಂದಿಗೆ ಅದರ ನಿರ್ವಹಣೆಯಲ್ಲಿ ಮುಂದುವರೆದಿದ್ದಾರೆ. ಸ್ವಯಂ ಸುಂದರರಾಜ್ ಅವರೇ ನಿರ್ದೇಶಿಸಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ ‘ಯಮರಂಜನ’ ನೂರಾರು ಪ್ರದರ್ಶನಗಳನ್ನು ಕಂಡು ಯಶಸ್ವಿಯಾಯಿತು. ನಟನೆಯನ್ನು ಬದುಕಿನ ವೃತ್ತಿಯಾಗಿ ಅನ್ವೇಷಿಸುತ್ತಿದ್ದ ಸಂದರ್ಭಗಳಲ್ಲಿ ಸುಂದರರಾಜ್ ಮತ್ತು ಅವರ ಪತ್ನಿ ಪ್ರಮೀಳಾ ಜೋಷಾಯ್ ಇಬ್ಬರೂ ಅನೇಕ ವೃತ್ತಿರಂಗಭೂಮಿ ನಾಟಕಗಳಲ್ಲೂ ಅಭಿನಯಿಸಿದ್ದರು.
ಕಲಾತ್ಮಕ ಚಲನಚಿತ್ರಗಳಲ್ಲಿ ಅಭಿನಯಿಸುತ್ತ ಬಂದ ಸುಂದರರಾಜ್ ಅನೇಕ ಕಲಾತ್ಮಕ ಮತ್ತು ವಾಣಿಜ್ಯ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಾಡು, ಚೋಮನದುಡಿ, ತಬ್ಬಲಿಯು ನೀನಾದೆ ಮಗನೆ, ಒಂದಾನೊಂದು ಕಾಲದಲ್ಲಿ, ಅನ್ವೇಷಣೆ, ತಪ್ಪಿದ ತಾಳ, ಸಂಕ್ರಾಂತಿ, ಚಂದನದ ಗೊಂಬೆ, ಪ್ರಾಯ ಪ್ರಾಯ ಪ್ರಾಯ, ಬಂಗಾರದ ಜಿಂಕೆ, ದಿಗ್ಗಜರು, ಮತದಾನ, ಆಕಸ್ಮಿಕ, ಕುರಿಗಳು ಸಾರ್ ಕುರಿಗಳು ಸೇರಿದಂತೆ ಸುಂದರರಾಜ್ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ಅವರು ಅಭಿನಯಿಸಿದ್ದಾರೆ. ಅಪಾರ ಅನುಭವವುಳ್ಳ ಸುಂದರರಾಜ್ ಚಲನಚಿತ್ರಗಳ ಸಂಕಲನ, ಕಲಾವಿನ್ಯಾಸ ಮತ್ತು ನಿರ್ಮಾಣ ವಿಭಾಗಗಳಲ್ಲೂ ಕೆಲಸಮಾಡಿದ್ದಾರೆ.
ಸುಂದರರಾಜ್ ಮತ್ತು ಅವರ ಪತ್ನಿ ಪ್ರಮೀಳಾ ಜೋಷಾಯ್ ಇಬ್ಬರೂ ಚಲನಚಿತ್ರ ಮತ್ತು ರಂಗಭೂಮಿಯಲ್ಲಿ ಅಪಾರ ಕೆಲಸ ಮಾಡಿ ಹೆಸರಾಗಿದ್ದಾರೆ. ಅವರ ಪುತ್ರಿ ಮೇಘನಾ ಅವರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ.
ನಾಡಿನ ಉತ್ತಮ ಕಲಾವಿದರಾದ ಸುಂದರರಾಜ್ ಮತ್ತು ಅವರ ಕುಟುಂಬದವರ ಬದುಕು ಸಕಲ ಭಾಗ್ಯಗಳಿಂದ ಉತ್ತಮಗೊಳ್ಳಲಿ ಎಂದು ಆಶಿಸಿ ಸುಂದರರಾಜ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳನ್ನು ಹೇಳೋಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಟ್ಟಾಭಿರಾಮರೆಡ್ಡಿ

Tue Mar 8 , 2022
ಪಟ್ಟಾಭಿರಾಮರೆಡ್ಡಿ ಅವರು ‘ಸಂಸ್ಕಾರ’ ಚಿತ್ರದಿಂದ ಚಲನಚಿತ್ರರಂಗದಲ್ಲಿ ಅಜರಾಮರರಾಗಿದ್ದಾರೆ. ಡಾ. ಯು. ಆರ್. ಅನಂತಮೂರ್ತಿ ಅವರ ಕ್ರಾಂತಿಹುಟ್ಟಿಸಿದ ಕನ್ನಡದ ‘ಸಂಸ್ಕಾರ’ ಕತೆಗೆ ತಮ್ಮ ಪ್ರೀತಿಯ ಮಡದಿಯ ಒತ್ತಾಸೆಯ ಮೇರೆಗೆ ಚಿತ್ರ ನಿರ್ದೇಶನ, ನಿರ್ಮಾಣಗಳಿಗೆ ಇಳಿದ ಪಟ್ಟಾಭಿರಾಮರೆಡ್ಡಿ ಆ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯಾದ ಸ್ವರ್ಣಕಮಲವನ್ನು ಪಡೆಯುವಲ್ಲಿ ಸತ್ಯಜಿತ್ ರೇ ಅವರ ಚಿತ್ರವನ್ನು ಕೂಡ ಹಿಂದೆ ಹಾಕಿ ಹೊಸ ಚಿತ್ರಗಳ ಅಲೆಗೆ ನಾಂದಿ ಹಾಡಿಬಿಟ್ಟರು. ಆನಂತರದಲ್ಲಿ ಕನ್ನಡ ಚಿತ್ರರಂಗ ಹಲವಾರು ಮಹತ್ವದ ಚಿತ್ರಗಳನ್ನು ನಿರಂತರವಾಗಿ ನೀಡುತ್ತ […]

Advertisement

Wordpress Social Share Plugin powered by Ultimatelysocial