ಹೊಸದಿಲ್ಲಿ: ಪ್ರವಾದಿ ಮುಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಗಲ್ಫ್ ರಾಷ್ಟ್ರಗಳಿಂದಲೂ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಇಡೀ ದೇಶಕ್ಕೆ ಕ್ಷಮೆ ಯಾಚಿಸಬೇಕು. ದೇಶದಲ್ಲಿ ಏನಾಗುತ್ತಿದೆಯೇ ಅದಕ್ಕೆಲ್ಲಾ ಅವರೊಬ್ಬರೇ ಹೊಣೆಯಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದೆ.
“ಆಕೆ ಹೇಗೆ ಪ್ರಚೋದಿಸಿದ್ದಾರೆ ಎಂದು ತಿಳಿಯಲು ನಾವು ಟಿವಿ ಚರ್ಚೆಯನ್ನು ನೋಡಿದ್ದೇವೆ. ಆದರೆ ಆಕೆ ಇದನ್ನೆಲ್ಲ ಹೇಳಿದ ರೀತಿ ಹಾಗೂ ನಂತರ ಆಕೆ ತಾನು ವಕೀಲೆ ಎಂದು ಹೇಳುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಆಕೆ ಇಡೀ ದೇಶದ ಕ್ಷಮೆಯಾಚಿಸಬೇಕು” ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.
ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್ಐಆರ್ಗಳನ್ನು ದಿಲ್ಲಿಗೆ ವರ್ಗಾಯಿಸುವಂತೆ ನೂಪುರ್ ಶರ್ಮಾ ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸುವ ವೇಳೆ ಸುಪ್ರೀಂಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.
ನೂಪುರ್ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಆಕೆಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
“ನೂಪರ್ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆಯೇ ಅಥವಾ ಆಕೆ ಭದ್ರತೆಗೆ ಬೆದರಿಕೆಯಾಗಿದ್ದಾರೆಯೇ? ದೇಶದಾದ್ಯಂತ ಭಾವನೆಗಳಿಗೆ ಕಿಡಿ ಹೊತ್ತಿಸಿದ ರೀತಿ, ದೇಶದಲ್ಲಿ ನಡೆಯುತ್ತಿರುವ ಘಟನೆಗೆ ಆಕೆಯೇ ಹೊಣೆಯಾಗಿದ್ದಾರೆ ‘ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.
ಆಕೆಯ ಹೇಳಿಕೆಗಳು ಆಕೆಯ “ಹಠಮಾರಿತನ ಹಾಗೂ ಸೊಕ್ಕಿನ ಸ್ವಭಾವ”ವನ್ನು ತೋರಿಸುತ್ತವೆ. ಪಕ್ಷದ ವಕ್ತಾರೆ ಎಂಬ ನೆಲೆಯಲ್ಲಿ ತನಗೆ ಅಧಿಕಾರವಿದೆ, ನೆಲದ ಕಾನೂನಿಗೆ ಗೌರವವಿಲ್ಲದೆ ಯಾವುದೇ ಹೇಳಿಕೆ ನೀಡಬಹುದು ಎಂದು ಆಕೆ ಭಾವಿಸಿದ್ದಾರೆ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.
ಟಿವಿ ಚರ್ಚೆಯ ಸಂದರ್ಭದಲ್ಲಿ ಆಯಂಕರ್ ಕೇಳಿದ ಪ್ರಶ್ನೆಗೆ ಮಾತ್ರ ಆಕೆ ಪ್ರತಿಕ್ರಿಯಿಸಿದ್ದಾರೆ ಎಂದು ನೂಪರ್ ಪರ ವಕೀಲರು ಉತ್ತರಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada